ವೈವಿಧ್ಯತೆಯಲ್ಲಿ ಏಕತೆಯೇ ಭಾರತ ಮತ್ತು ಅಮೆರಿಕದ ಡಿಎನ್‌ಎ: ಮೋಹನ್ ಭಾಗವತ್

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಅವರು ಭಾರತ ಮತ್ತು ಅಮೆರಿಕದ 'ಡಿಎನ್‌ಎ ವೈವಿಧ್ಯತೆಯಲ್ಲಿ ಏಕತೆ' ಎಂದು ಪ್ರತಿಪಾದಿಸಿದರು. ಮುಸ್ಲಿಮರನ್ನು ಹೊರಗಿಡುವುದು ನಿಜವಾದ ಹಿಂದುತ್ವವಲ್ಲ, ಎಲ್ಲರಿಗೂ ಘನತೆ ಇದೆ ಎಂದು ನಂಬುವುದೇ ನೈಜ ಹಿಂದುತ್ವ ಎಂದರು. ಚರ್ಖಿ ದಾದ್ರಿ ಘಟನೆ ಉದಾಹರಿಸಿ ಆರ್‌ಎಸ್‌ಎಸ್‌ನ ನಿಸ್ವಾರ್ಥ ಸೇವೆಯನ್ನು ವಿವರಿಸಿದರು. ವಿರೋಧಗಳ ನಡುವೆಯೂ ಸಾರ್ವತ್ರಿಕ ಏಕತೆ ಮತ್ತು ಸೇವೆಗೆ ಒತ್ತು ನೀಡಿದರು.

ವೈವಿಧ್ಯತೆಯಲ್ಲಿ ಏಕತೆಯೇ ಭಾರತ ಮತ್ತು ಅಮೆರಿಕದ ಡಿಎನ್‌ಎ: ಮೋಹನ್ ಭಾಗವತ್
ಮೋಹನ್ ಭಾಗವತ್

Updated on: Aug 30, 2026 | 7:30 AM

ನ್ಯೂಯಾರ್ಕ್, ಆಗಸ್ಟ್​ 30: ವೈವಿಧ್ಯಯತೆಯಲ್ಲಿ ಏಕತೆ ಕಾಣುವುದು ಭಾರತ ಮತ್ತು ಅಮೆರಿಕ ಎರಡರ ಡಿಎನ್‌ಎಯಲ್ಲೇ (DNA) ಹಾಸುಹೊಕ್ಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಪ್ರತಿಪಾದಿಸಿದ್ದಾರೆ. ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್ (AHEAD) ಸಂಸ್ಥೆಯು ನ್ಯೂಯಾರ್ಕ್‌ನ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೈಜ ಹಿಂದುತ್ವದ ವ್ಯಾಖ್ಯಾನ

ಮುಸ್ಲಿಮರ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಭಾಗವತ್, “ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ನಿಜವಾದ ಹಿಂದೂವಾಗಿ ಉಳಿಯುವುದಿಲ್ಲ. ಎಲ್ಲಾ ಧಾರ್ಮಿಕ ಮಾರ್ಗಗಳು ಅಂತಿಮವಾಗಿ ಒಂದೇ ಪರಮ ಗುರಿಯತ್ತ ಸಾಗುತ್ತವೆ ಹಾಗೂ ಪ್ರತಿಯೊಬ್ಬ ಮನುಷ್ಯನಿಗೂ ಘನತೆಯಿದೆ ಎಂದು ನಂಬುವುದೇ ನೈಜ ಹಿಂದುತ್ವ” ಎಂದು ತಿಳಿಸಿದರು. ನಾನು, ನನ್ನದು ಎಂದು ಇರಬಾದು, ನಾವು, ನಮ್ಮದು ಎಂದಾಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದರು.

ಚರ್ಖಿ ದಾದ್ರಿ ವಿಮಾನ ದುರಂತದ ನಿಸ್ವಾರ್ಥ ಸೇವೆ

1996 ರಲ್ಲಿ ಹರಿಯಾಣದ ಚರ್ಖಿ ದಾದ್ರಿ ಆಕಾಶದಲ್ಲಿ ಸೌದಿ ಮತ್ತು ಕಜಕಿಸ್ತಾನ್ ವಿಮಾನಗಳು ಡಿಕ್ಕಿಯಾಗಿ 349 ಮುಸ್ಲಿಂ ಯಾತ್ರಿಕರು ದುರ್ಮರಣಕ್ಕೀಡಾದ ಘಟನೆಯನ್ನು ಸ್ಮರಿಸಿದರು. ಆ ಸಮಯದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ, ಯಾವುದೇ ಧರ್ಮ-ಜಾತಿ ನೋಡದೆ ಶವಗಳನ್ನು ಹೊರತೆಗೆದು, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಗೌರವಯುತ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದರು ಎಂದು ಮಾನವೀಯತೆಯ ನಿದರ್ಶನ ನೀಡಿದರು.

ವಿಡಿಯೋ

ವೈವಿಧ್ಯತೆಯ ಗೌರವ

ಜಗತ್ತಿನ ವಿನ್ಯಾಸದಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಕರ್ತವ್ಯವಿದೆ ಎಂದು ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಅವರು, ಭಾರತದ ಕರ್ತವ್ಯವೇ ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ತೋರಿಸಿಕೊಡುವುದಾಗಿದೆ ಎಂದರು.

ಮತ್ತಷ್ಟು ಓದಿ: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಮಾನವ ಮತ್ತು ಪ್ರಾಣಿ ಪ್ರವೃತ್ತಿ

ಪ್ರಾಣಿಗಳು ಕೇವಲ ಹಸಿವು ಮತ್ತು ಉಳಿವಿನ ನೈಸರ್ಗಿಕ ಪ್ರವೃತ್ತಿಯಿಂದ ಬದುಕುತ್ತವೆ. ಆದರೆ ಮಾನವನು ಯೋಚಿಸುವ ಸಾಮರ್ಥ್ಯ ಹೊಂದಿದ್ದು, ಸರಿಯಾದ ಚಿಂತನೆಯಿಂದ ಸಮಾಜಮುಖಿ ಸೇವೆ ಮಾಡಿದಾಗ ಮಾತ್ರ ದೈವತ್ವಕ್ಕೆ ಹತ್ತಿರವಾಗಲು ಸಾಧ್ಯ ಎಂದು ವಿವರಿಸಿದರು.

ಸ್ಥಳೀಯ ವಿರೋಧ ಮತ್ತು ಟೀಕೆಗಳು

ಮೋಹನ್ ಭಾಗವತ್ ಅವರ ಭೇಟಿಗೆ ನ್ಯೂಯಾರ್ಕ್‌ನ ಭಾರತೀಯ ಮೂಲದ ಸ್ಥಳೀಯ ರಾಜಕೀಯ ನಾಯಕರು ಹಾಗೂ ಪ್ರಗತಿಪರ ವಲಯದಿಂದ ಟೀಕೆಗಳು ವ್ಯಕ್ತವಾಗಿದ್ದು, ಸಂಘಟನೆಯ ಸಿದ್ಧಾಂತದ ಬಗ್ಗೆ ಸಾರ್ವಜನಿಕ ಚರ್ಚೆಗಳು ನಡೆದವು.

ನಿಸ್ವಾರ್ಥ ಸೇವಾ ಸಂಕಲ್ಪ

ಇಂತಹ ಟೀಕೆಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಭಾಗವತ್, ಪ್ರಸ್ತುತ ರಾಜಕೀಯವು ಸ್ವಾರ್ಥದ ಆಟವಾಗಿದ್ದು, ಸಂಘವು ಯಾವುದೇ ಪ್ರಚಾರ ಅಥವಾ ರಾಜಕೀಯ ಲಾಭದ ಅಪೇಕ್ಷೆಯಿಲ್ಲದೆ ನಿಸ್ವಾರ್ಥ ಸಮಾಜ ಸೇವೆ ಮತ್ತು ಸಾರ್ವತ್ರಿಕ ಏಕತೆಗಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯ ಸಮುದಾಯದ (NRIs) ಸದಸ್ಯರು ಭಾಗವತ್ ಅವರ ಸಂದೇಶವನ್ನು ಶ್ಲಾಘಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ.

ಕರ್ಮಭೂಮಿಗೆ ನಿಷ್ಠರಾಗಿರಬೇಕು

‘ಭಾರತೀಯ ವಲಸಿಗರು’ ತಮ್ಮ ‘ಜನ್ಮ ಭೂಮಿ’ಗೆ ಕೊಡುಗೆ ನೀಡುವ ಬಯಕೆಯನ್ನು ಬೆಳೆಸಿಕೊಳ್ಳುವ ಮೊದಲು ತಮ್ಮ ‘ಕರ್ಮ ಭೂಮಿ’ಯ ಕಡೆಗೆ ತಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಹೇಳಿದರು. ಆದಾಗ್ಯೂ, ಅದು ಕಡ್ಡಾಯವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:25 am, Sun, 30 August 26

Loading...
Unable to load recommendations.
Follow Us