ಮಾಸ್ಕೋ ರೆಸ್ಟೋರೆಂಟ್ ಬಳಿ ಬಾಂಬ್ ಸ್ಫೋಟ, ಬಾಂಬ್ ತಂದಿದ್ದ ಮಹಿಳೆ ಸೇರಿ ಮೂವರು ಸಾವು, 21 ಜನರಿಗೆ ಗಾಯ

ಮಾಸ್ಕೋದ ಪ್ರಸಿದ್ಧ ಬಾಲ್ಜಿ ರೊಸ್ಸಿ ರೆಸ್ಟೋರೆಂಟ್ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಐಇಡಿ ಹೊತ್ತಿದ್ದ ಮಹಿಳೆ, ಭದ್ರತಾ ಸಿಬ್ಬಂದಿ ಹಾಗೂ ಗ್ರಾಹಕ ಸೇರಿ ಮೂವರು ಮೃತಪಟ್ಟು, 21 ಜನರು ಗಾಯಗೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ನಡೆದ ಈ ದಾಳಿಯ ಉದ್ದೇಶ ಮತ್ತು ಮಹಿಳೆಯ ಗುರುತು ಪತ್ತೆಯಾಗಿಲ್ಲ. ಭಯೋತ್ಪಾದನಾ ವಿರೋಧಿ ಸಮಿತಿ ಘಟನೆಯ ತನಿಖೆ ನಡೆಸುತ್ತಿದೆ.

ಮಾಸ್ಕೋ ರೆಸ್ಟೋರೆಂಟ್ ಬಳಿ ಬಾಂಬ್ ಸ್ಫೋಟ, ಬಾಂಬ್ ತಂದಿದ್ದ ಮಹಿಳೆ ಸೇರಿ ಮೂವರು ಸಾವು, 21 ಜನರಿಗೆ  ಗಾಯ
ಬಾಂಬ್ ಸ್ಫೋಟ

Updated on: Aug 02, 2026 | 7:11 AM

ಮಾಸ್ಕೋ, ಆಗಸ್ಟ್​ 02: ರಷ್ಯಾದ ರಾಜಧಾನಿ ಮಾಸ್ಕೋದ ಮಧ್ಯಭಾಗದಲ್ಲಿರುವ ಕುದ್ರಿನ್ಸ್ಕಾಯಾ ಚೌಕದ ಪ್ರಸಿದ್ಧ ‘ಬಾಲ್ಜಿ ರೊಸ್ಸಿ’ ರೆಸ್ಟೋರೆಂಟ್ ಹೊರಭಾಗದಲ್ಲಿ ಶನಿವಾರ ರಾತ್ರಿ  ಬಾಂಬ್ ಸ್ಫೋಟ(Bomb Blast) ಸಂಭವಿಸಿದೆ. ಸುಧಾರಿತ ಸ್ಫೋಟಕ ಸಾಧನ (IED) ಹೊತ್ತು ತಂದಿದ್ದ ಅಪರಿಚಿತ ಮಹಿಳೆ, ಆಕೆಯನ್ನು ತಡೆದ ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ಗ್ರಾಹಕ ಸೇರಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು 21 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿ ತಿಳಿಸಿದೆ.

ಸ್ಫೋಟ ನಡೆದಿದ್ದು ಹೇಗೆ?

ಅಪರಿಚಿತ ಮಹಿಳೆಯೊಬ್ಬಳು ಕೈಯಲ್ಲಿ ಐಇಡಿ ಸ್ಫೋಟಕ ಸಾಧನವನ್ನು ಹಿಡಿದು ರೆಸ್ಟೋರೆಂಟ್ ಪ್ರವೇಶಿಸಲು ಯತ್ನಿಸಿದ್ದಾಳೆ. ಆ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಖಾಸಗಿ ಔತಣಕೂಟ ನಡೆಯುತ್ತಿದ್ದರಿಂದ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದು ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ರೆಸ್ಟೋರೆಂಟ್‌ನ ಪ್ರವೇಶದ್ವಾರದ ಹೊರಾಂಗಣ ಟೆರೇಸ್ ಬಳಿ ಸ್ಥಳೀಯ ಸಮಯ ರಾತ್ರಿ 8.10 ಕ್ಕೆ ಸ್ಫೋಟಕ ಅಕಾಲಿಕವಾಗಿ ಸ್ಫೋಟಗೊಂಡಿದೆ. ಸ್ಫೋಟವನ್ನು ಮಹಿಳೆ ಉದ್ದೇಶಪೂರ್ವಕವಾಗಿ ತಾನೇ ನಡೆಸಿದಳೇ ಅಥವಾ ಆಕಸ್ಮಿಕವಾಗಿ ಸ್ಫೋಟಗೊಂಡಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯ ಗುರುತು ಹಾಗೂ ಈ ದಾಳಿಯ ಹಿಂದಿನ ನೈಜ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಮಾಸ್ಕೋ ತನಿಖಾ ಸಮಿತಿಯು ಘಟನಾ ಸ್ಥಳವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ವಿಧಿವಿಜ್ಞಾನ ತನಿಖೆ ಕೈಗೊಂಡಿದೆ.

ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ

 

ಉಕ್ರೇನ್ ಯುದ್ಧ ಮತ್ತು ಮಾಸ್ಕೋ ಭದ್ರತೆ: ರಷ್ಯಾ-ಉಕ್ರೇನ್ ನಡುವೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಸ್ಕೋ ನಗರದಾದ್ಯಂತ ಡ್ರೋನ್ ದಾಳಿಗಳು ಹಾಗೂ ಆತ್ಮಾಹುತಿ ಸಂಚುಗಳ ಭೀತಿ ಹೆಚ್ಚಾಗಿತ್ತು. ಈ ಸ್ಫೋಟದ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಪಾಕಿಸ್ತಾನದ ತಂಗಮ ಜಿಲ್ಲೆಯಲ್ಲಿ ಉಗ್ರ ದಾಳಿ: ಇನ್ನೊಂದೆಡೆ, ಜುಲೈ 24ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಟ್ಯಾಂಕ್ ಜಿಲ್ಲೆಯ ಭದ್ರತಾ ಚೆಕ್‌ಪೋಸ್ಟ್ ಮೇಲೆ ಉಗ್ರರು ಸ್ಫೋಟಕ ತುಂಬಿದ ವಾಹನದಿಂದ ದಾಳಿ ನಡೆಸಿದ್ದರು. ಈ ಭೀಕರ ಆತ್ಮಾಹುತಿ ದಾಳಿಯಲ್ಲಿ 12 ಸೈನಿಕರು, ಇಬ್ಬರು ಪೊಲೀಸರು ಹಾಗೂ ಒಬ್ಬ ಸರ್ಕಾರಿ ಅಧಿಕಾರಿ ಸೇರಿ ಕನಿಷ್ಠ 15 ಜನರು ಮೃತಪಟ್ಟಿದ್ದರು. ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು 12 ಉಗ್ರರನ್ನು ಹೊಡೆದುರುಳಿಸಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us