AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nuclear War: ಆವರಿಸುತ್ತಿದೆ ಅಣ್ವಸ್ತ್ರ ದಾಳಿಯ ಭೀತಿ: 5 ಕೋಟಿ ಜನರ ಸಾವಿನ ಆತಂಕ, ಇಡೀ ಜಗತ್ತಿಗೆ ಬರಗಾಲದ ಬಾಧೆ

ಇಡೀ ಜಗತ್ತು ಬೇಡ ಎನ್ನುತ್ತಿರುವ, ಬೇಡದ ದುಸ್ವಪ್ನದಂತೆ ಕಾಡುತ್ತಿರುವ ಅಣ್ವಸ್ತ್ರ ಬಳಕೆ ಹೇಗೆ ನಡೆಯಬಹುದು? ಅದರ ಪರಿಣಾಮಗಳು ಏನಾಗಬಹುದು ಎಂಬ 10 ಪ್ರಮುಖ ಅಂಶಗಳು ಇಲ್ಲಿವೆ.

Nuclear War: ಆವರಿಸುತ್ತಿದೆ ಅಣ್ವಸ್ತ್ರ ದಾಳಿಯ ಭೀತಿ: 5 ಕೋಟಿ ಜನರ ಸಾವಿನ ಆತಂಕ, ಇಡೀ ಜಗತ್ತಿಗೆ ಬರಗಾಲದ ಬಾಧೆ
ಅಣ್ವಸ್ತ್ರ ಬಳಕೆಯಾದರೆ ಇಡೀ ಜಗತ್ತಿಗೆ ಬರಗಾಲ ಆವರಿಸುತ್ತದೆ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 29, 2022 | 6:39 PM

Share

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿ ನಿರ್ಣಾಯಕ ಹಂತಕ್ಕೆ ಬಂದು, ರಷ್ಯಾದ ಮೇಲುಗೈ ಖಚಿತವಾಗುತ್ತಿದೆ. ಉಕ್ರೇನ್ ಪರ ಅಮೆರಿಕ ಸೇರಿದಂತೆ ಬಹುತೇಕ ನ್ಯಾಟೊ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿವೆ. ಬ್ರಿಟನ್, ಸ್ಪೇನ್ ಮತ್ತು ಹಾಲೆಂಡ್ ದೇಶಗಳ ಪ್ರಧಾನಿಗಳು ಉಕ್ರೇನ್ ರಾಜಧಾನಿ ಕೀವ್​ಗೆ ಭೇಟಿ ನೀಡಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಜೊತೆಗೆ ನೇರ ಮಾತುಕತೆ ನಡೆಸಿದ್ದರು. ರಷ್ಯಾದೊಂದಿಗೆ ದೊಡ್ಡಮಟ್ಟದ ಯುದ್ಧಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಯುದ್ಧದಿಂದ ಅಂತರ ಕಾಯ್ದುಕೊಂಡಿದ್ದ ಅಮೆರಿಕ ಸಹ ಇದೀಗ ಉಕ್ರೇನ್​ಗೆ ಯುದ್ಧವಿಮಾನ, ಡ್ರೋಣ್ ಸೇರಿದಂತೆ ಹಲವು ಪ್ರಮುಖ ಯುದ್ಧೋಪಕರಣಗಳನ್ನು ರವಾನಿಸಲು ಸಮ್ಮತಿಸಿದೆ. ‘ಉಕ್ರೇನ್ ಮೇಲಿನ ಯುದ್ಧ ಗೆಲ್ಲಲು ರಷ್ಯಾಕ್ಕೆ ಸಾಧ್ಯವಿಲ್ಲ, ನಾವು ಬಿಡುವುದಿಲ್ಲ’ ಎನ್ನುವುದು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳ ಧೋರಣೆ. ‘ನಮ್ಮ ತಂಟೆಗೆ ಬಂದರೆ ಯಾರೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದು ನಮ್ಮ ಯುದ್ಧ, ನೀವು ದೂರವಿರಿ’ ಎಂಬ ನಿಲುವಿಗೆ ರಷ್ಯಾ ಬಂದಿದೆ. ಉಕ್ರೇನ್​ಗೆ ನೆರವು ಹೆಚ್ಚುತ್ತಿರುವ ಬೆನ್ನಿಗೇ ರಷ್ಯಾ ನೂತನ ತಂತ್ರಜ್ಞಾನದ ದೂರಗಾಮಿ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಲ್ಲಿ ಯಶಸ್ವಿಯಾಗಿದೆ. ‘ಹಲವು ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಈ ಕ್ಷಿಪಣಿಯು ಎಲ್ಲ ಬಗೆಯ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಭೇದಿಸಿ ಇದು ಗುರಿ ತಲುಪಬಲ್ಲದು’ ಎಂದು ರಷ್ಯಾ ಹೇಳಿಕೊಂಡಿದೆ.

ಇಷ್ಟು ದಿನ ಕೇವಲ ‘ಒಣ’ ಬೆದರಿಕೆಯ ಮಟ್ಟದಲ್ಲಿದ್ದ ಅಣುದಾಳಿ ಸಾಧ್ಯತೆಯು ನಿಜವಾಗುವ ಆತಂಕ ಎದುರಾಗಿದೆ. ಇಡೀ ಜಗತ್ತು ಬೇಡ ಎನ್ನುತ್ತಿರುವ, ಬೇಡದ ದುಸ್ವಪ್ನದಂತೆ ಕಾಡುತ್ತಿರುವ ಅಣ್ವಸ್ತ್ರ ಬಳಕೆ ಹೇಗೆ ನಡೆಯಬಹುದು? ಅದರ ಪರಿಣಾಮಗಳು ಏನಾಗಬಹುದು ಎಂಬ 10 ಪ್ರಮುಖ ಅಂಶಗಳು ಇಲ್ಲಿವೆ.

  1. ಉಕ್ರೇನ್​ನ ಬಹುದಿನಗಳ ಬೇಡಿಕೆಗೆ ಮಣಿಯುವ ನ್ಯಾಟೊ ಮತ್ತು ಐರೋಪ್ಯ ಒಕ್ಕೂಟ ರಷ್ಯಾ ವಿರುದ್ಧ ಉಕ್ರೇನ್​ನಲ್ಲಿ ಹಾರಾಟ ನಿರ್ಬಂಧ ‘ನೋ ಫ್ಲೈ ಜೋನ್’ ಘೋಷಿಸಬಹುದು. ಆಗಸದಲ್ಲಿ ರಷ್ಯಾದ ಯುದ್ಧವಿಮಾನಗಳು ಹಾರದಿದ್ದರೆ ಉಕ್ರೇನ್​ನ ನೆಲದಲ್ಲಿರುವ ರಷ್ಯಾ ಸೇನೆಗೆ ಉಕ್ರೇನ್​ ಸೇನೆ ಉಗ್ರ ಪ್ರತಿರೋಧ ತೋರಿ, ರಷ್ಯಾ ಹಿಮ್ಮೆಟ್ಟಬೇಕಾಗುತ್ತದೆ. ಸೋಲು ಖಚಿತವಾಗುತ್ತಿದ್ದಂತೆಯೇ ರಷ್ಯಾ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು.
  2. ‘ನೋ ಫ್ಲೈ ಜೋನ್’ ಜಾರಿಗಾಗಿ ನ್ಯಾಟೊದ ಯುದ್ಧ ವಿಮಾನಗಳು ಉಕ್ರೇನ್​ ವಾಯುಗಡಿಯಲ್ಲಿರುವ ರಷ್ಯಾದ ಯುದ್ಧ ವಿಮಾನಗಳೊಂದಿಗೆ ಕದನಕ್ಕಿಳಿಯಬಹುದು. ಈ ವೇಳೆ ನ್ಯಾಟೊದ ಯಾವುದಾದರೂ ಯುದ್ಧ ವಿಮಾನ ರಷ್ಯಾದ ವಾಯುಗಡಿ ಪ್ರವೇಶಿಸಿ ಬಾಂಬ್ ಹಾಕಿದರೆ ರಷ್ಯಾ ಸಹ ಉಕ್ರೇನ್ ಗಡಿಯಲ್ಲಿರುವ ಪೊಲೆಂಡ್ ಅಥವಾ ಇತರ ಯಾವುದೇ ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ದಾಳಿ ಆರಂಭಿಸುತ್ತದೆ. ಕ್ರಮೇಣ ಇದು ಅಣ್ವಸ್ತ್ರ ದಾಳಿಗೆ ಕಾರಣವಾಗುವ ಹಲವು ಬೆಳವಣಿಗೆಗಳನ್ನು ಹುಟ್ಟುಹಾಕಬಹುದು.
  3. ನ್ಯಾಟೊ ಸದಸ್ಯ ದೇಶಗಳ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ಆರಂಭಿಸಿದರೆ ಪ್ರತೀಕಾರವಾಗಿ ಇಂಗ್ಲೆಂಡ್, ಫ್ರಾನ್ಸ್​ನಂಥ ಅಣ್ವಸ್ತ್ರ ಸಜ್ಜಿತ ದೇಶಗಳು ಆರಂಭದಲ್ಲಿ ರಷ್ಯಾ ಮೇಲೆ ಮುಗಿಬೀಳುತ್ತವೆ. ರಷ್ಯಾ ಸಹ ಈ ದೇಶಗಳ ಮೇಲೆ ಅಣ್ವಸ್ತ್ರ ಪ್ರಯೋಗಿಸಬಹುದು.
  4. ಅಮೆರಿಕ ಪರೋಕ್ಷ ಕುಮ್ಮಕ್ಕಿನಿಂತಲೇ ಎಲ್ಲವೂ ನಡೆಯುತ್ತಿರುವುದನ್ನು ಮನಗಂಡಿರುವ ರಷ್ಯಾ ತನ್ನ ದೂರಗಾಮಿ ಕ್ಷಿಪಣಿಗಳನ್ನು ಅಮೆರಿಕ ವಿರುದ್ಧ ಪ್ರಯೋಗಿಸಬಹುದು. ಇಂಥ ಬೆಳವಣಿಗೆಗೆ ಅಮೆರಿಕ ಸಹ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರಷ್ಯಾ ವಿರುದ್ಧ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಹಾರಿ ಬಿಡುತ್ತದೆ. ಈ ಪ್ರಕ್ರಿಯೆ ಹಲವು ತಿಂಗಳವರೆಗೆ ಮುಂದುವರಿಯಬಹುದು.
  5. ಉತ್ತರ ಅಟ್ಲಾಂಟಿಕ್​ನ ಸಾಗರದಲ್ಲಿ ಈಗಾಗಲೇ ರಷ್ಯಾದ ಅಣ್ವಸ್ತ್ರ ಸಜ್ಜಿತ ಸಬ್​ಮರೀನ್​ಗಳು ನಿಶ್ಯಬ್ದವಾಗಿ ಅಡಗಿವೆ. ಸಾವಿರಾರು ಕಿಲೋಮೀಟರ್ ದೂರದ ನಗರಗಳ ಮೇಲೆ ಅಣು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವಾಗ ಬೇಕಾದರೂ ಉಕ್ರೇನ್ ವಿರುದ್ಧದ ಯುದ್ಧ ಕೈಮೀರಿ, ರಷ್ಯಾದ ಸೋಲು ಖಚಿತವಾಗುವ ಹೊತ್ತಿಗೆ ಈ ಜಲಾಂತರ್ಗಾಮಿಗಳನ್ನು ನ್ಯಾಟೊ ಪಡೆಗಳನ್ನು ಪತ್ತೆಹಚ್ಚದಿದ್ದರೆ ಅಣ್ವಸ್ತ್ರ ದಾಳಿಯ ಸಾಧ್ಯತೆ ಹೆಚ್ಚು.
  6. ಜಗತ್ತಿನಲ್ಲಿ ಮೊದಲ ಬಾರಿಗೆ ಮತ್ತು ಈವರೆಗೆ ಒಂದೇ ಒಂದು ಬಾರಿ ಅಣ್ವಸ್ತ್ರ ಪ್ರಯೋಗಿಸಿರುವ ಏಕೈಕ ದೇಶ ಅಮೆರಿಕದಲ್ಲಿ ಅಣ್ವಸ್ತ್ರ ದಾಳಿಯ ಭೀತಿ ವ್ಯಕ್ತವಾಗಿದೆ. ಶೇ 70ರಷ್ಟು ಅಮೆರಿಕನ್ನರು ಉಕ್ರೇನ್ ವಿಚಾರದಲ್ಲಿ ತಮ್ಮ ದೇಶ ದೂರ ಉಳಿಯಬೇಕು. ಇಲ್ಲದಿದ್ದರೆ ಇದು ಅಣ್ವಸ್ತ್ರ ದಾಳಿಗೆ ಕಾರಣವಾಗಬಹುದು ಎಂದು ಭಯಪಟ್ಟಿದ್ದಾರೆ.
  7. ಜಪಾನ್​ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ 77 ವರ್ಷಗಳ ಹಿಂದೆ ಅಣ್ವಸ್ತ್ರ ಸ್ಫೋಟಿಸಿದಾಗ 1 ಲಕ್ಷ ಜನರು ತಕ್ಷಣ ಮೃತಪಟ್ಟಿದ್ದರು. 2 ಲಕ್ಷಕ್ಕೂ ಹೆಚ್ಚು ಜನರು ಅಣುವಿಕರಣದ ನಿರಂತರ ಪರಿಣಾಮಗಳಿಂದ ಜೀವಂತ ನರಕ ಅನುಭವಿಸಿದರು. ಇದೀಗ ವಿಶ್ವದ ಬಲಾಢ್ಯ ದೇಶಗಳಲ್ಲಿ ಅಂದು ಅಮೆರಿಕ ಪ್ರಯೋಗಿಸಿದ ಅಣ್ವಸ್ತ್ರಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಪ್ರಬಲ ಅಣ್ವಸ್ತ್ರಗಳಿದ್ದು, ಇಡೀ ಭೂಮಿಯನ್ನೇ ಹಲವು ಬಾರಿ ನಾಶಪಡಿಸಬಲ್ಲವು. ಯಾವುದೇ ಒಂದು ದೇಶ ಇನ್ನೊಂದು ದೇಶದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಿದರೆ ಅದರ ಪರಿಣಾಮಗಳು ಇಡೀ ಜಗತ್ತನ್ನು ಬಾಧಿಸುತ್ತವೆ.
  8. ಅಣ್ವಸ್ತ್ರ ಸ್ಫೋಟದ ಪರಿಣಾಮವಾಗಿ ನೇರವಾಗಿ ಸಾಯುವವರು ಒಂದಿಷ್ಟು ಜನ. ಆದರೆ ಅದರ ಪರಿಣಾಮಗಳು ಹಲವು ವರ್ಷಗಳವರೆಗೆ ಬಾಧಿಸುತ್ತವೆ. ನೇರವಾದ ಅಣ್ವಸ್ತ್ರ ಸ್ಫೋಟದ ಪರಿಣಾಮವಾಗಿ ಮತ್ತೊಂದು ‘ಕಿರು ಶೀತಕಾಲ’ (ಲಿಟ್ಲ್ ಐಸ್ ಏಜ್) ರೂಪುಗೊಳ್ಳಬಹುದು. ಭೂಮಿಯ ಮೇಲಿನ ತಾಪಮಾನ ಹಲವು ಡಿಗ್ರಿಗಳಷ್ಟು ಕಡಿಮೆಯಾಗಿ ಜಗತ್ತಿನ ವಿವಿಧೆಡೆ ಬರಗಾಲ, ಬೆಳೆ ನಾಶಕ್ಕೆ ಕಾರಣವಾಗಬಹುದು. ಭೂಮಿಯ ವಾಯುಗೋಳವನ್ನು ಆವರಿಸಿಕೊಳ್ಳುವ ದಟ್ಟ ಹೊಗೆ ಮತ್ತು ದೂಳಿನಿಂದಾಗಿ ಹಲವು ದಿನಗಳವರೆಗೆ ಸೂರ್ಯನ ಬಿಸಿಲು ಭೂಮಿಯನ್ನು ತಲುಪದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
  9. ಭೂಮಿಯ ತಾಪಮಾನ ಏಕಾಏಕಿ, ಅನೈಸರ್ಗಿಕವಾಗಿ ಕಡಿಮೆಯಾದರೆ ಮಳೆ ಪ್ರಮಾಣ ಒಮ್ಮೆಲೆ ಕಡಿಮೆಯಾಗುತ್ತದೆ. ಬೆಳೆ ಫಸಲು ಕಟ್ಟುವ ಅವಧಿಯೂ 10ರಿಂದ 40 ದಿನಗಳಷ್ಟು ಕಡಿಮೆಯಾಗುತ್ತದೆ. ಜಗತ್ತಿನ ಯಾವುದೇ ದೇಶ ಬರಗಾಲದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದನ್ನು ಆರ್ಥಶಾಸ್ತ್ರಜ್ಞರು ಅಣ್ವಸ್ತ್ರದಿಂದ ಉಂಟಾದ ಜಾಗತಿಕ ಬರಗಾಲ (ಗ್ಲೂಬಲ್ ನ್ಯೂಕ್ಲಿಯರ್ ಫೆಮೈನ್) ಎಂದು ವಿಶ್ಲೇಷಿಸುತ್ತಿದ್ದಾರೆ.
  10. ಉಕ್ರೇನ್ ಮೇಲಿನ ಯುದ್ಧದಲ್ಲಿ ಮೇಲುಗೈ ಸಾಧಿಸಲು ರಷ್ಯಾ ಸಣ್ಣ ಸಾಮರ್ಥ್ಯದ ಅಣ್ವಸ್ತ್ರ ಬಳಸಬಹುದು ಎಂದು ಹೇಳಲಾಗುತ್ತಿದೆ. ಉಕ್ರೇನ್ ಯುದ್ಧವು ಅಣ್ವಸ್ತ್ರ ಯುದ್ಧಕ್ಕೆ ಹೊರಳಿಕೊಂಡರೆ ಸುಮಾರು 5.48 ಕೋಟಿ ಜನರ ಸಾವಿನಲ್ಲಿ ಇದು ಪರ್ಯಾವಸನಗೊಳ್ಳುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಣ್ವಸ್ತ್ರ ಬಳಕೆ ಹುಟ್ಟುಹಾಕುವ ಭೀತಿ ಮತ್ತು ಅದರ ಪರಿಣಾಮಗಳು ಈಗಾಗಲೇ ಹಿಂಜರಿತದತ್ತ ಸುಳಿಯುತ್ತಿರುವ ವಿಶ್ವ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಮಾತ್ರ ಅನೂಹ್ಯವಾದುದು.

ಇದನ್ನೂ ಓದಿ: Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

ಇದನ್ನೂ ಓದಿ: ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್​ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ

Published On - 9:12 am, Fri, 22 April 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?