
ಕೊಲಂಬೊ, ಆಗಸ್ಟ್ 13: ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಒಂದು ಹಡಗನ್ನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲೈಮನ್ನಾರ್ನ ಉರುಮಲೈ ಪಾಯಿಂಟ್ ಬಳಿ ಬುಧವಾರ ರಾತ್ರಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ (Sri Lanka) ನೌಕಾಪಡೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
“ಬಂಧಿತ 9 ಭಾರತೀಯ ಮೀನುಗಾರರನ್ನು ಮತ್ತು ಮೀನುಗಾರಿಕಾ ಹಡಗನ್ನು ಮುಂದಿನ ಕಾನೂನು ನಡಾವಳಿಗಳಿಗಾಗಿ ಮನ್ನಾರ್ನ ಮೀನುಗಾರಿಕಾ ಇನ್ಸ್ಪೆಕ್ಟರ್ಗೆ ಹಸ್ತಾಂತರಿಸಲಾಗುವುದು” ಎಂದು ಶ್ರೀಲಂಕಾ ನೌಕಾಪಡೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ಮನ್ನಾರ್ ದ್ವೀಪ ಮತ್ತು ರಾಮಸೇತು (ಆಡಮ್ಸ್ ಬ್ರಿಡ್ಜ್) ಸುತ್ತಲಿನ ಮನ್ನಾರ್ ಕೊಲ್ಲಿಯ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಅತ್ಯಂತ ಆದ್ಯತೆಯ ನಿಕಟ ಜೀವವೈವಿಧ್ಯತೆ ಮತ್ತು ಸಂರಕ್ಷಣಾ ವಲಯವೆಂದು ಗುರುತಿಸಲಾಗಿದೆ. ಹಾಗಾಗಿ ಇದು ನಿರ್ದಿಷ್ಟ ಮೀನುಗಾರಿಕಾ ನಿರ್ವಹಣೆ ಮತ್ತು ಪರಿಸರ ಸಂರಕ್ಷಣಾ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: 3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್
ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಮೀನುಗಾರರ ವಿಷಯವು ಆಗಾಗ ಬಿರುಕು ಮೂಡಿಸುತ್ತಿರುತ್ತದೆ. ಶ್ರೀಲಂಕಾದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಹಾಗೂ ಅವರ ದೋಣಿಗಳನ್ನು ವಶಪಡಿಸಿಕೊಂಡ ಹಲವು ಘಟನೆಗಳು ನಡೆದಿವೆ. ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ಪಾಕ್ ಜಲಸಂಧಿಯು ಎರಡೂ ದೇಶಗಳ ಮೀನುಗಾರರಿಗೆ ಸಮೃದ್ಧ ಮೀನುಗಾರಿಕಾ ಕೇಂದ್ರವಾಗಿದೆ. ಎರಡೂ ದೇಶಗಳ ಮೀನುಗಾರರು ಅರಿಯದೇ ಪರಸ್ಪರರ ಜಲಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಆಗಾಗ ಬಂಧನಕ್ಕೊಳಗಾಗುತ್ತಿರುತ್ತಾರೆ.
ಇದನ್ನೂ ಓದಿ: ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!
ಜುಲೈ ಕೊನೆಯ ವಾರದಲ್ಲೂ ಶ್ರೀಲಂಕಾ ನೌಕಾಪಡೆಯು ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಬಂಧಿಸಿ, ಅವರ ದೋಣಿಯನ್ನು ವಶಪಡಿಸಿಕೊಂಡಿತ್ತು. ಅಧಿಕೃತ ದತ್ತಾಂಶಗಳ ಪ್ರಕಾರ, ಈ ವರ್ಷ ಏಪ್ರಿಲ್ 15ರ ವೇಳೆಗೆ 128 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, 18 ಹಡಗುಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ