Union Budget 2024: ಕೇಂದ್ರ ಬಜೆಟ್​ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರು ಏನಂದ್ರು?

| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2024 | 3:18 PM

ಪ್ರಧಾನಿ ನರೇಂದ್ರ ಮೋದಿ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್​​ನ್ನು ಇಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿದ್ದಾರೆ. ಇತ್ತ ರಾಜ್ಯದಲ್ಲಿ ಆರ್​ ಅಶೋಕ್​ ಸೇರಿದಂತೆ ಬಿಜೆಪಿ ನಾಯಕರು ಇಂದಿನ ಬಜೆಟ್​ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Union Budget 2024: ಕೇಂದ್ರ ಬಜೆಟ್​ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರು ಏನಂದ್ರು?
Union Budget 2024: ಕೇಂದ್ರ ಬಜೆಟ್​ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಏನಂದ್ರು?
Follow us on

ಬೆಂಗಳೂರು, ಜುಲೈ 23: ಬಜೆಟ್​​ನಲ್ಲಿ (budget) ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಆದರೆ ಬೇರೆ ರಾಜ್ಯಗಳನ್ನೂ ಕಡೆಗಣಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka)
ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ತಾರತಮ್ಯ ಮಾಡದೆ ಬಜೆಟ್​ನಲ್ಲಿ ಆದ್ಯತೆ ನೀಡಿದ್ದಾರೆ. ಉದ್ಯೋಗ ಸೃಷ್ಟಿ, ಕೃಷಿಗೆ ಕೇಂದ್ರ ಬಜೆಟ್​ನಲ್ಲಿ ಒತ್ತು ಕೊಟ್ಟಿದ್ದಾರೆ. ದೇಶದ ರೈತರ ಪರ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಆ ಮೂಲಕ ಬಡವರಿಗೆ ಅನುಕೂಲ ಆಗಲಿದೆ. ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡಲಾಗಿದೆ. ಇದು ಮಧ್ಯಮ ವರ್ಗದವರಿಗೆ ಅನುಕೂಲ. ಒಂದು ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಕೊಡಲಾಗುತ್ತಿದೆ. ಕೈಗಾರಿಕಾ ತೆರಿಗೆ ಕಡಿಮೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ, ಕೃಷಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬೇರೆ ಬೇರೆ ಯೋಜನೆಗಳ ಮೂಲಕ ಕರ್ನಾಟಕಕ್ಕೆ ಲಾಭವಾಗಲಿದೆ: ಬಸವರಾಜ ಬೊಮ್ಮಾಯಿ 

ದೆಹಲಿಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಕರ್ನಾಟಕಕ್ಕೆ ರೈಲು, ರಸ್ತೆ ನಿರ್ಮಾಣಕ್ಕೆ ಅನುದಾನ ಸಿಗಲಿದೆ. ಕೈಗಾರಿಕಾ ಕಾರಿಡಾರ್ ನಿರ್ಮಾಣದಿಂದ ಕರ್ನಾಟಕಕ್ಕೂ ಅನುಕೂಲವಾಗಲಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯವನ್ನು ನೀಡಿದೆ. ಬಡತನ ನಿರ್ಮೂಲನೆ, ಮನೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬೇರೆ ಬೇರೆ ಯೋಜನೆಗಳ ಮೂಲಕ ಕರ್ನಾಟಕಕ್ಕೆ ಲಾಭವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?

ವಿಕಸಿತ ಭಾರತದ ಅಭಿವೃದ್ಧಿ ಪರ ಬಜೆಟ್​ ಮಂಡಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬಹಳ ಸದೃಢವಾಗಿದೆ. ಮಧ್ಯಂತರ ಬಜೆಟ್​ ಮುಂದುವರಿಸಲಾಗಿದೆ. ಉತ್ಪಾದನೆ, ಕೃಷಿ, ಸೇವಾ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ಸಾವಿರಾರು ಕೋಟಿ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿಕೆ ನೀಡಿದ್ದು, ಕೇಂದ್ರ ಬಜೆಟ್​​ನಲ್ಲಿ ಕೃಷಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಆಗುತ್ತೆ. ಬಿಹಾರ, ಆಂಧ್ರದಂತೆ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ವೈಯಕ್ತಿಕ ಘೋಷಣೆ ಇಲ್ಲ: ಗೋವಿಂದ ಕಾರಜೋಳ

ಬಿಜೆಪಿ ಸಂಸದ ಗೋವಿಂದ ಕಾರಜೋಳ ಕೂಡ ಪ್ರತಿಕ್ರಿಯಿಸಿದ್ದು, ಕರ್ನಾಟಕದ ವಿಚಾರವಾಗಿ ವೈಯಕ್ತಿಕ ಘೋಷಣೆ ಇರುವುದಿಲ್ಲ. ಎಲ್ಲಾ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಘೋಷಣೆ ಮಾಡಲಾಗಿದೆ. ಕೇಂದ್ರ ಬಜೆಟ್​ನಲ್ಲಿ ರೈಲ್ವೆ, ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದಿದ್ದಾರೆ.

ಇದು ಬಡವರು, ಮಹಿಳೆಯರು, ರೈತರ ಪರ ಬಜೆಟ್: ಸಿ.ಟಿ.ರವಿ

ವಿಧಾನಸೌಧದಲ್ಲಿ ಪರಿಷತ್​ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ಕೊಟ್ಟಿದ್ದಾರೆ. 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿಗೆ ತರಬೇತಿ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ 2.65 ಲಕ್ಷ ಕೋಟಿ ರೂ. ಹಂಚಿಕೆ ಮಾಡಿದ್ದಾರೆ. ದೇಶಾದ್ಯಂತ 12 ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ. ಇದು ಬಡವರ ಪರ, ಮಹಿಳೆಯರ ಪರ, ರೈತರ ಪರ ಬಜೆಟ್ ಎಂದು ಹೇಳಿದ್ದಾರೆ.​​​

ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳೇನು? ರೈಲು, ಕೃಷಿ, ನೀರಾವರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳ ಆಶಯ

ಆಂಧ್ರ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ನೀಡಿದ ವಿಚಾರವಾಗಿ ಮಾತನಾಡಿದ್ದು, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿಯಲ್ಲ. ಆಂಧ್ರಪ್ರದೇಶ ಹಾಗೂ ಬಿಹಾರ ಸಹ ಭಾರತದ ಅಂಗವಾಗಿದೆ ಎಂದರು.

ಮೋದಿಯವರಿಗೆ ರಾಜಕೀಯದ ಲಾಭ ನಷ್ಟಕ್ಕಿಂತ ದೇಶ ಮುಖ್ಯ: ಡಾ.ಕೆ.ಸುಧಾಕರ್

ಬಿಜೆಪಿ ಸಂಸದ ಡಾ.ಕೆ.ಸುಧಾಕರ್​​ ಹೇಳಿಕೆ ನೀಡಿದ್ದು, ಜನ ಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಬಜೆಟ್​ ಮಂಡಿಸಲಾಗಿದೆ. ಪ್ರಧಾನಿ ಮೋದಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಮೋದಿಯವರಿಗೆ ರಾಜಕೀಯದ ಲಾಭ ನಷ್ಟಕ್ಕಿಂತ ದೇಶ ಮುಖ್ಯ. ವಿಶೇಷವಾಗಿ ಕಾಂಗ್ರೆಸ್​ ಸರ್ಕಾರಕ್ಕೆ ಬುದ್ಧಿ ಹೇಳುವ ಕೆಲಸ ಆಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯವನ್ನ ದಿವಾಳಿಯಾಗಿಸದೆ ಅಭಿವೃದ್ಧಿ ಬಗ್ಗೆ ಯೋಚಿಸುವಂತೆ ಆಗಿದೆ. ಈ ಬಾರಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಅನುದಾನವನ್ನು ನೀಡಲಾಗಿದೆ. ಮಹಿಳೆಯರಿಗೆ 3 ಲಕ್ಷ ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.