AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

World's largest curd plant in West Bengal: ಗುಜರಾತ್ ಮೂಲದ ಹಾಲಿನ ಬ್ರ್ಯಾಂಡ್ ಅಮುಲ್ ಸಂಸ್ಥೆ ಪಶ್ಚಿಮ ಬಂಗಾಳದಲ್ಲಿ ತನ್ನ ಬ್ಯುಸಿನೆಸ್ ವಿಸ್ತರಿಸುತ್ತಿದೆ. ಕೋಲ್ಕತಾ ಬಳಿ 600 ಕೋಟಿ ರೂ ಹೂಡಿಕೆಯಲ್ಲಿ ವಿಶ್ವದ ಅತಿದೊಡ್ಡ ಮೊಸರಿನ ಘಟಕ ಸ್ಥಾಪಿಸುತ್ತಿದೆ. ಕರ್ನಾಟಕದಲ್ಲಿ ಅಮುಲ್​ಗೆ ಸಿಗದ ಯಶಸ್ಸು ಪಶ್ಚಿಮ ಬಂಗಾಳದಲ್ಲಿ ಯಥೇಚ್ಚವಾಗಿ ಸಿಗುತ್ತಿರುವುದು ಕೌತುಕ ಎನಿಸಿದೆ.

ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?
ಅಮುಲ್Image Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2026 | 12:59 PM

Share

ಕೋಲ್ಕತಾ, ಜೂನ್ 1: ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳ (GCMMF) ಒಡೆತನದ ಅಮುಲ್ ಸಂಸ್ಥೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪದ ಹೌರಾದಲ್ಲಿರುವ ಸಂಕ್ರೇಲ್ ಫುಡ್ ಪಾರ್ಕ್‌ನಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸಮಗ್ರ ಡೈರಿ ಘಟಕವನ್ನು ಸ್ಥಾಪಿಸುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಮೊಸರು ಉತ್ಪಾದನಾ ಘಟಕ (Curd plant) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಘಟಕವು ಪ್ರತಿದಿನ 10 ಲಕ್ಷ ಕಿಲೋಗ್ರಾಂ (1,000 ಮೆಟ್ರಿಕ್ ಟನ್) ಮೊಸರು ಉತ್ಪಾದಿಸುವ ಹಾಗೂ ದಿನಕ್ಕೆ 15 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ. ಬಂಗಾಳದ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ‘ಮಿಷ್ಟಿ ದೋಯಿ’ ಮತ್ತು ‘ಟೋಕ್ ದೋಯಿ’ ಇತ್ಯಾದಿ ಮೊಸರು ಉತ್ಪನ್ನಗಳಿಗೆ ಇರುವ ಭಾರಿ ಬೇಡಿಕೆಯನ್ನು ಬಳಸಿಕೊಂಡು ಪೂರ್ವ ಭಾರತದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಲು ಅಮುಲ್ ಈ ತಂತ್ರ ರೂಪಿಸಿದೆ.

ಕರ್ನಾಟಕದಲ್ಲಿ ನಂದಿನಿಯಿಂದ ಸಿಕ್ಕ ಪ್ರತಿರೋಧ ಅಮುಲ್​ಗೆ ಬಂಗಾಳದಲ್ಲಿ ಇಲ್ಲ

ಗುಜರಾತ್ ಮೂಲದ ಅಮುಲ್ ದೇಶದ ವಿವಿಧ ಭಾಗಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಾ ಮುನ್ನುಗ್ಗುತ್ತಿದ್ದರೆ, ಕರ್ನಾಟಕದಂತಹ ಕೆಲ ರಾಜ್ಯಗಳಲ್ಲಿ ದೊಡ್ಡ ಮಾರುಕಟ್ಟೆ ಪಾಲು ಪಡೆಯಲು ವಿಫಲವಾಗಿದೆ. ಕರ್ನಾಟಕದ ಹಾಲು ಮಹಾಮಂಡಳಿ (KMF) ಒಡೆತನದ ‘ನಂದಿನಿ’ ಬ್ರ್ಯಾಂಡ್ ಎದುರು ಅಮುಲ್ ಆಟ ಹೆಚ್ಚು ನಡೆಯುತ್ತಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ ಅಮುಲ್​ಗೆ ಹೆಚ್ಚಿನ ಪೈಪೋಟಿ ಸಿಕ್ಕೇ ಇಲ್ಲ. ಅಲ್ಲಿ ಅಮುಲ್ ಈಗಾಗಲೇ ಅತಿದೊಡ್ಡ ಹಾಲಿನ ಬ್ರ್ಯಾಂಡ್ ಆಗಿದೆ. ಈಗ ಬಹಳ ಬೇಡಿಕೆಯಲ್ಲಿರುವ ಮೊಸರು ಬ್ಯುಸಿನೆಸ್​ನಲ್ಲೂ ಅಮುಲ್ ನಂಬರ್ ಒನ್ ಆಗಲು ಸ್ಕೆಚ್ ಹಾಕಿದೆ.

ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಕರ್ನಾಟಕದಲ್ಲಿ ನಂದಿನಿ ಸೋಲದಿರಲು ಏನು ಕಾರಣ?

ಕರ್ನಟಕದಲ್ಲಿ ಕೆಎಂಎಫ್ ಮತ್ತು ನಂದಿನಿ ಬ್ರ್ಯಾಂಡ್​ಗೆ ಭಾವನಾತ್ಮಕ ನಂಟಿದೆ. ತಮ್ಮ ಊರಿನ ಹಾಲೆಂದು ಜನಸಾಮಾನ್ಯರಿಂದ ಹಿಡಿದು ಹೋಟೆಲ್ ಉದ್ದಿಮೆಯ ಜನರೆಲ್ಲರೂ ನಂದಿನಿ ಹಾಲೇ ಬೇಕೆಂದು ಕೇಳಿ ಹಾಕಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆಯಂತೆ. ಜೊತೆಗೆ, ಇತರ ಬ್ರ್ಯಾಂಡ್ ಹಾಲುಗಳಿಗಿಂತ ನಂದಿನಿ ಹಾಲು ತುಸು ಕಡಿಮೆ ಬೆಲೆ ಹೊಂದಿರುವುದು ಕೂಡ ಕೆಎಂಎಫ್ ಕರ್ನಾಟಕದಲ್ಲಿ ನಂಬರ್ ಒನ್ ಆಗಿ ಮುಂದುವರಿಯಲು ಸಾಧ್ಯವಾಗಿದೆ.

ನಂದಿನಿ ಕೇವಲ ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಮಹಾರಾಷ್ಟ್ರದ ‘ಮಹಾನಂದ್’ ಡೈರಿ ಅಮುಲ್ ಎಂಟ್ರಿಯಿಂದ ಸೊರಗಿದ ಉದಾಹರಣೆ ಮುಂದಿಟ್ಟುಕೊಂಡು, ನಂದಿನಿ ತನ್ನ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಆಕ್ರಮಣಕಾರಿ ಹೆಜ್ಜೆ ಇಡುತ್ತಿದೆ.

ಅಮುಲ್ ಜಾಗತಿಕವಾಗಿ ಹರಡಿಕೊಳ್ಳುತ್ತಿದ್ದರೆ, ನಂದಿನಿ ಕೂಡ ಕಡಿಮೆ ಇಲ್ಲ ಎಂಬಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ (ಟಿ20 ವಿಶ್ವಕಪ್ ಪ್ರಾಯೋಜಕತ್ವದಂತಹ ದೊಡ್ಡ ವೇದಿಕೆಗಳ ಮೂಲಕ) ತನ್ನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡು ಅಮುಲ್‌ಗೆ ಪ್ರಬಲ ರಾಷ್ಟ್ರೀಯ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

ಪಶ್ಚಿಮ ಬಂಗಾಳದಲ್ಲಿ ಡೈರಿ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆ

ಕರ್ನಾಟಕದಲ್ಲಿ ಡೈರಿ ಉದ್ಯಮದ ಮಾರುಕಟ್ಟೆ ಗಾತ್ರ 1.35 ಲಕ್ಷ ಕೋಟಿ ರೂ ಇದೆ. ಪಶ್ಚಿಮ ಬಂಗಾಳದಲ್ಲಿ ಹತ್ತಿರ ಹತ್ತಿರ ಒಂದು ಲಕ್ಷ ಕೋಟಿ ರೂ ಸಮೀಪದಷ್ಟು ಗಾತ್ರದ ಮಾರುಕಟ್ಟೆ ಇದೆ. ಇಲ್ಲಿಯ ತಿನಿಸುಗಳಿಗೆ ಹೆಚ್ಚಾಗಿ ಮೊಸರನ್ನು ಬಳಸಲಾಗುತ್ತದೆ. ಆದರೆ, ಇಲ್ಲಿಯ ಡೈರಿ ಉದ್ಯಮದಲ್ಲಿ ಸಣ್ಣ ಸಣ್ಣ ಸಂಸ್ಥೆಗಳದ್ದೇ ಕಾರುಬಾರು. ಹೀಗಾಗಿ, ಅಮುಲ್​ನಂತಹ ದೊಡ್ಡ ಸಂಸ್ಥೆಗಳಿಗೆ ನೆಲೆಯೂರಲು ಮಾರುಕಟ್ಟೆ ಪೂರಕವಾಗಿದೆ. ಬಂಗಾಳ ಮಾತ್ರವಲ್ಲ, ಬಿಹಾರ, ಒಡಿಶಾ ಇತ್ಯಾದಿ ಪೂರ್ವ ರಾಜ್ಯಗಳ ಡೈರಿ ಮಾರುಕಟ್ಟೆಗಳಲ್ಲೂ ಇಂಥದ್ದೇ ಸ್ಥಿತಿ ಇರುವುದು. ಹೀಗಾಗಿ, ಅಮುಲ್ ಧೈರ್ಯವಾಗಿ ಬಂಡವಾಳ ಹೂಡುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More