
ನವದೆಹಲಿ, ಮೇ 6: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಗಳು ಜಗತ್ತನ್ನು ಬದಲಾಯಿಸುತ್ತಿರುವ ಬೆನ್ನಲ್ಲೇ, ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಕ್ಕೆ ಹೊಸದೊಂದು ಆತಂಕ ಶುರುವಾಗಿದೆ. ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ ಎನ್ನಲಾದ ‘ಕ್ಲೋಡ್ ಮಿಥೋಸ್’ (Claude Mythos) ಎಂಬ ಹೊಸ ಎಐ ಮಾಡಲ್ನಿಂದ ಎದುರಾಗಬಹುದಾದ ಸೈಬರ್ ಸೆಕ್ಯೂರಿಟಿ ಅಪಾಯಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಧಿಕಾರಿಗಳು ಮತ್ತು ವಿವಿಧ ವಾಣಿಜ್ಯ ಬ್ಯಾಂಕ್ಗಳ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ: ಏರ್ಲೈನ್ಸ್, ಎಂಎಸ್ಎಂಇಗಳಿಗೆ ಬೆಂಬಲಿಸುವ ಇಸಿಎಲ್ಜಿಎಸ್ 5.0 ಸ್ಕೀಮ್ಗೆ ಅನುಮೋದನೆ
ಈ ಎಐ ಮಾದರಿಯು ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ, ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರೆ ಭೀಕರ ಸೈಬರ್ ದಾಳಿಗಳಿಗೆ (Hacking) ದಾರಿಯಾಗಬಹುದು ಎಂದು ಸ್ವತಃ ಆಂಥ್ರೋಪಿಕ್ ಸಂಸ್ಥೆಯೇ ಇದನ್ನು ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ‘ಪ್ರಾಜೆಕ್ಟ್ ಗ್ಲಾಸ್ವಿಂಗ್’ ಅಡಿಯಲ್ಲಿ ವಿಶ್ವದ ಕೇವಲ 40 ಆಯ್ದ ಕಂಪನಿಗಳಿಗೆ (ಗೂಗಲ್, ಮೈಕ್ರೋಸಾಫ್ಟ್, ಆಪಲ್ ಇತ್ಯಾದಿ) ಮಾತ್ರ ಇದರ ಪ್ರವೇಶ ನೀಡಲಾಗಿದೆ.
ಆದರೆ, ಇತ್ತೀಚೆಗೆ ಈ ಅತ್ಯಂತ ಸುರಕ್ಷಿತ ಎಐ ಮಾದರಿಯನ್ನು ಕೆಲವರು ಅನಧಿಕೃತವಾಗಿ (Unauthorized access) ಪ್ರವೇಶಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ಎಐ ತಂತ್ರಜ್ಞಾನವು ಹ್ಯಾಕರ್ಗಳು ಅಥವಾ ಸೈಬರ್ ಅಪರಾಧಿಗಳ ಕೈಗೆ ಸಿಕ್ಕರೆ, ಅವರು ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲ್ ಭದ್ರತೆಯನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಬಹುದು ಎಂಬ ಆತಂಕ ಜಾಗತಿಕವಾಗಿ ಎದುರಾಗಿದೆ.
ಈ ಹೊಸ ಎಐ ಮಾದರಿಯಿಂದ ಎದುರಾಗಿರುವ ಸೈಬರ್ ಭದ್ರತೆಯ ಸವಾಲು ಈ ಹಿಂದೆಂದೂ ಕಾಣದಂತಹುದಾಗಿದೆ (Unprecedented). ಆದ್ದರಿಂದ ಬ್ಯಾಂಕುಗಳು ಅತ್ಯಂತ ಹೆಚ್ಚಿನ ಜಾಗರೂಕತೆ ಮತ್ತು ಸಿದ್ಧತೆಯನ್ನು ಹೊಂದಿರಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಬ್ಯಾಂಕುಗಳ ನಡುವೆ ಮತ್ತು ಭಾರತದ ಸೈಬರ್ ಭದ್ರತಾ ಏಜೆನ್ಸಿಯಾದ ‘ಸರ್ಟ್-ಇನ್’ (CERT-In) ಜೊತೆಗೆ ಸೈಬರ್ ಥ್ರೆಟ್ಗಳ ಕುರಿತು ರಿಯಲ್ ಟೈಮ್ನಲ್ಲಿ ಮಾಹಿತಿ ಹಂಚಿಕೆ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವ ಸಲಹೆಯು ಸಭೆಯಲ್ಲಿ ವ್ಯಕ್ತವಾಗಿದೆ. ಈ ಹೊಸ ಎಐ ತಂತ್ರಜ್ಞಾನದಿಂದ ಭಾರತೀಯ ಬ್ಯಾಂಕುಗಳಿಗೆ ಆಗಬಹುದಾದ ನಷ್ಟ ಮತ್ತು ಅಪಾಯಗಳನ್ನು ಅಧ್ಯಯನ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧ್ಯಕ್ಷ ಸಿ.ಎಸ್. ಶ್ರೀನಿವಾಸುಲು ಶೆಟ್ಟಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಹಳೆಯ ತಂತ್ರಜ್ಞಾನದ ಭದ್ರತಾ ನಿಯಮಗಳು (SOPs) ಇಂದಿನ ಆಧುನಿಕ ಎಐ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಗ್ರಾಹಕರ ಹಣ ಮತ್ತು ಡೇಟಾವನ್ನು ರಕ್ಷಿಸಲು ಬ್ಯಾಂಕುಗಳು ತಮ್ಮ ಐಟಿ (IT) ಮತ್ತು ಸೈಬರ್ ಸೆಕ್ಯೂರಿಟಿ ಬಜೆಟ್ ಅನ್ನು ಹೆಚ್ಚಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಭಾರತೀಯರು ವಿಶ್ವದಲ್ಲೇ ಅತ್ಯುತ್ತಮ ಪ್ರತಿಭಾನ್ವಿತರು: ಬುರ್ಜ್ ಖಲೀಫಾ ನಿರ್ಮಾತೃವಿನ ಅಂತರಂಗದ ಅನಿಸಿಕೆ
ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆರ್ಬಿಐ ಮತ್ತು ಸರ್ಕಾರವು ಈ ಅಪಾಯದ ವ್ಯಾಪ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸದ್ಯಕ್ಕೆ ಭಾರತದ ಬ್ಯಾಂಕಿಂಗ್ ಡಿಜಿಟಲ್ ವ್ಯವಸ್ಥೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ