
ನವದೆಹಲಿ, ಫೆಬ್ರುವರಿ 23: ಕಳೆದ ಕೆಲ ತಿಂಗಳಲ್ಲಿ, ಅದರಲ್ಲೂ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ರಾಕೆಟ್ನಂತೆ ಆಗಸಕ್ಕೆ ಚಿಮ್ಮಿದ್ದು ಜನಸಾಮಾನ್ಯರಿಗೆ ಆತಂಕ ಮೂಡಿಸಿತ್ತು. ಜಾಗತಿಕವಾಗಿ ಚಿನ್ನಕ್ಕೆ ಬಹಳ ಬೇಡಿಕೆ ಬಂದಿದ್ದರಿಂದ ಈ ಅತಿಯಾದ ಬೆಲೆ ಏರಿಕೆ ಆಗಿತ್ತು. ಚಿನ್ನ ಮತ್ತು ಬೆಳ್ಳಿಗೆ ಈ ಪರಿ ಬೇಡಿಕೆ ಬರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ ಬಿಚ್ಚಿಟ್ಟಿದ್ದಾರೆ. ಆರ್ಬಿಐನ 621ನೇ ಕೇಂದ್ರೀಯ ಮಂಡಳಿ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಜೊತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಅಮೆರಿಕದ ಟ್ಯಾರಿಫ್ ಬದಲಾವಣೆಯ ಪರಿಣಾಮಗಳು, ಚಿನ್ನದ ಆಮದು, ಹಣದುಬ್ಬರ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಪ್ರಕಾರ, ಜಾಗತಿಕವಾಗಿ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಸಾಕಷ್ಟು ಪ್ರಮಾಣದಲ್ಲಿ ಖರೀದಿಸಿದ್ದರಿಂದ ಬೇಡಿಕೆ ಹೆಚ್ಚಾಗಿ ಬೆಲೆಯೂ ಯದ್ವಾತದ್ವಾ ಏರಿದೆ.
ಇದನ್ನೂ ಓದಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?
ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್ಬಿಐ ಕೂಡ ಚಿನ್ನದ ಖರೀದಿಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಹೋಗಿತ್ತು. ನಿರ್ಮಲಾ ಸೀತಾರಾಮನ್ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಆಮದು ಆತಂಕ ಪಡುವ ಮಟ್ಟದಲ್ಲಿ ಇಲ್ಲವಂತೆ. ಅದರ ಬಗ್ಗೆ ಆರ್ಬಿಐ ನಿಗಾ ವಹಿಸಿದೆ ಎನ್ನುತ್ತಾರೆ ಅವರು.
ಸುಪ್ರೀಂಕೋರ್ಟ್ ತೀರ್ಪು ಪರಿಣಾಮವಾಗಿ ಅಮೆರಿಕ ಸರ್ಕಾರವು ಟ್ಯಾರಿಫ್ ಅನ್ನು ಶೇ. 10ಕ್ಕೆ ಇಳಿಸಿ, ನಂತರ ಶೇ. 15ಕ್ಕೆ ಹೆಚ್ಚಿಸಿದ ಕ್ರಮವು ಭಾರತದ ಮೇಲೆ ಏನು ಪರಿಣಾಮ ಬೀರುತ್ತದೆ? ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಇತ್ತೀಚಿನ ಟ್ಯಾರಿಫ್ ಬದಲಾವಣೆಯಿಂದ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಈಗಲೇ ಅವಲೋಕಿಸಲು ಆಗುವುದಿಲ್ಲ. ವಾಣಿಜ್ಯ ಸಚಿವಾಲಯವು ಇದರ ಬಗ್ಗೆ ನಿಗಾ ಇರಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಮಧ್ಯಂತರ ಟ್ರೇಡ್ ಡೀಲ್ಗೆ ಮಾತುಕತೆ: ಭಾರತ ತಂಡದ ಅಮೆರಿಕ ಭೇಟಿ ಮುಂದೂಡಿಕೆ
‘ಭಾರತದ ಆರ್ಥಿಕತೆಯ ಮೇಲೆ ಏನು ಪರಿಣಾಮ ಆಗುತ್ತೆ ಎಂದು ಇಷ್ಟು ಬೇಗ ಪ್ರತಿಕ್ರಿಯಿಸಲು ಆಗುವುದಿಲ್ಲ. ವಾಣಿಜ್ಯ ಸಚಿವಾಲಯವು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದೆ. ಮುಂದಿನ ಸಂಧಾನಗಳಿಗೆ ಅಮೆರಿಕಕ್ಕೆ ತೆರಳಿದಾಗ ನಿಯೋಗವು ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ