ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ

|

Updated on: Dec 09, 2023 | 5:56 PM

1994 ರಲ್ಲಿ ಇನ್ಫೋಸಿಸ್ ವಾರಕ್ಕೆ 6 ಗಂಟೆಗಳ ಕೆಲಸದ ಅವಧಿಯನ್ನು ರೂಪಿಸುವ ವರೆಗೆ ತಾನು ವಾರಕ್ಕೆ 85-90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. 40 ವರ್ಷಗಳ ವೃತ್ತಿಜೀವನದಲ್ಲಿ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದ್ದೆ ಮತ್ತು ಅದು ವ್ಯರ್ಥವಾಗಿಲ್ಲ ಎಂದೂ ನಾರಾಯಣ ಮೂರ್ತಿ ಹೇಳಿದ್ದಾರೆ.

ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ
ನಾರಾಯಣ ಮೂರ್ತಿ
Follow us on

ನವದೆಹಲಿ, ಡಿಸೆಂಬರ್ 9: ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಮಾತ್ರ ಭಾರತವನ್ನು ಮಧ್ಯಮ ಆದಾಯದ ದೇಶವನ್ನಾಗಿ ಮಾಡಲು ಸಾಧ್ಯ ಎಂಬ ಹೇಳಿಕೆಗೆ ಬದ್ಧರಾಗಿರುವುದಲ್ಲದೆ, ಅದನ್ನೇ ಪುನರುಚ್ಚರಿಸಲು ಬಯಸುತ್ತೇನೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ (NR Narayana Murthy) ಶನಿವಾರ ಹೇಳಿದ್ದಾರೆ. ಸಮೃದ್ಧಿ ಹೊಂದಿದ ಪ್ರತಿಯೊಂದು ದೇಶವೂ ಕಠಿಣ ಪರಿಶ್ರಮದ ಮೂಲಕವೇ ಅದನ್ನು ಸಾಧಿಸಿದೆ ಎಂದು ಮೂರ್ತಿ ಹೇಳಿದ್ದಾರೆ.

ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ತಮ್ಮದೇ ಉದಾಹರಣೆಯನ್ನು ಕೊಟ್ಟ ಅವರು, ಬಡತನದಿಂದ ಪಾರಾಗಲು ಬಯಸಿದರೆ ನೈತಿಕ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಪೋಷಕರು ಚಿಕ್ಕವನಿದ್ದಾಗಲೇ ಕಲಿಸಿದ್ದರು ಎಂದು ಹೇಳಿದರು. ಶಾಲಾ ಶಿಕ್ಷಕರೊಬ್ಬರ ಮಗನಾಗಿರುವ ಮೂರ್ತಿ, ಅವರ 8 ಮಕ್ಕಳ ಪೈಕಿ 5ನೇಯವರು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಆ ನಂತರ ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಓದಿದರು.

ವಾರಕ್ಕೆ 85 – 90 ಗಂಟೆ ಕೆಲಸ ಮಾಡಿದ್ದೆ: ನಾರಾಯಣ ಮೂರ್ತಿ

1994 ರಲ್ಲಿ ಇನ್ಫೋಸಿಸ್ ವಾರಕ್ಕೆ 6 ಗಂಟೆಗಳ ಕೆಲಸದ ಅವಧಿಯನ್ನು ರೂಪಿಸುವ ವರೆಗೆ ತಾನು ವಾರಕ್ಕೆ 85-90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದು ಮೂರ್ತಿ ಹೇಳಿದ್ದಾರೆ. ಬೆಳಿಗ್ಗೆ 6:20 ಕ್ಕೆ ಕಚೇರಿಗೆ ಪ್ರವೇಶಿಸುತ್ತಿದೆ ಮತ್ತು ರಾತ್ರಿ 8:30 ಕ್ಕೆ ಹೊರಡುತ್ತಿದ್ದೆ. ವಾರದಲ್ಲಿ 6 ದಿನಗಳು ಈ ರೀತಿ ಕೆಲಸ ಮಾಡುತ್ತಿದ್ದೆ ಎಂದು ‘ಇಟಿ’ಗೆ ನೀಡಿದ ಸಂದರ್ಶನದಲ್ಲಿ ಮೂರ್ತಿ ಹೇಳಿದ್ದಾರೆ. ಜತೆಗೆ, 40 ವರ್ಷಗಳ ವೃತ್ತಿಜೀವನದಲ್ಲಿ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದ್ದೆ ಮತ್ತು ಅದು ವ್ಯರ್ಥವಾಗಿಲ್ಲ ಎಂದೂ ಹೇಳಿದ್ದಾರೆ.

ವಿವಾದಕ್ಕೆ ಗುರಿಯಾಗಿದ್ದ 70 ಗಂಟೆಗಳ ಕೆಲಸ ಹೇಳಿಕೆ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಉತ್ಪಾದಕತೆಯನ್ನು ಹೊಂದಿದೆ ಎಂದು ಮೂರ್ತಿ ಅವರು ಇತ್ತೀಚೆಗೆ ಇನ್ಫೋಸಿಸ್‌ನ ಮಾಜಿ ಸಿಇಒ ಮೋಹನ್‌ದಾಸ್ ಪೈ ಅವರೊಂದಿಗಿನ ಪಾಡ್‌ಕಾಸ್ಟ್‌ ಒಂದರಲ್ಲಿ ವಿಷಾದ ವ್ಯಕ್ತಪಡಿಸಿದ್ದರು. ಯುವಕರು ಶ್ರಮವಹಿಸಿ, ‘ಇದು ನನ್ನ ದೇಶ, ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕು ಎಂದು ಸಲಹೆ ನೀಡಿದ್ದರು. ಶಿಸ್ತು ಮತ್ತು ಉತ್ಪಾದಕತೆ ಕುರಿತ ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಜರ್ಮನಿ ಮತ್ತು ಜಪಾನ್ ವಿಶ್ವಯುದ್ಧ 2 ರ ನಂತರ ಕಾರ್ಯನಿರ್ವಹಿಸಿದ ರೀತಿಯನ್ನು ಉದಾಹರಿಸಿದ್ದರು.

ಇದನ್ನೂ ಓದಿ: ಜನರು ಶಿಸ್ತು, ಶ್ರಮ ಹಾಕದಿದ್ದರೆ ಯಾವ ಸರ್ಕಾರ ಬಂದರೂ ಅಷ್ಟೇ; ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣಮೂರ್ತಿ

ಭಾರತದಲ್ಲಿ ಯುವಕರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಮತ್ತು ನಮ್ಮ ದೇಶವನ್ನು ಕಟ್ಟುವ ಶಕ್ತಿಯನ್ನು ಹೊಂದಿದ್ದಾರೆ. ಪ್ರತಿಯೊಂದು ಸರ್ಕಾರವೂ ಜನರ ಸಂಸ್ಕೃತಿಯಂತೆ ಉತ್ತಮವಾಗಿದೆ. ಅತ್ಯಂತ ಶಿಸ್ತಿನ ಮತ್ತು ಅತ್ಯಂತ ಕಷ್ಟಪಟ್ಟು ದುಡಿಯುವ ವಿಚಾರದಲ್ಲಿ ನಮ್ಮ ಸಂಸ್ಕೃತಿಯು ಬದಲಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು.

ನಾರಾಯಣ ಮೂರ್ತಿಯವರ ಹೇಳಿಕೆ ವಿವಾದಕ್ಕೆ ಗುರಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ