Paytm: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧ: ಫೆ. 29ರ ಡೆಡ್​ಲೈನ್ ಮಾರ್ಚ್ 15ಕ್ಕೆ ವಿಸ್ತರಣೆ

Paytm Payments bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಬಿಸಿನೆಸ್ ಅಂತ್ಯಗೊಳಿಸಲು ಫೆಬ್ರುವರಿ 29ಕ್ಕೆ ಇರುವ ಡೆಡ್​ಲೈನ್ ಅನ್ನು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ. ಹೊಸ ಡೆಪಾಸಿಟ್ ಪಡೆಯುವಂತಿಲ್ಲ, ಹೊಸ ಕ್ರೆಡಿಟ್ ಟ್ರಾನ್ಸಾಕ್ಷನ್ ನಡೆಸುವಂತಿಲ್ಲ ಎಂದು ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹಾಕಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಕೆವೈಸಿ ನಿಯಮಗಳ ಪಾಲನೆ ಆಗಿಲ್ಲದಿರುವುದು ಆರ್​ಬಿಐನ ಕ್ರಮಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.

Paytm: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧ: ಫೆ. 29ರ ಡೆಡ್​ಲೈನ್ ಮಾರ್ಚ್ 15ಕ್ಕೆ ವಿಸ್ತರಣೆ
ಆರ್​ಬಿಐ

Updated on: Feb 16, 2024 | 7:00 PM

ನವದೆಹಲಿ, ಫೆಬ್ರುವರಿ 16: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಕ್ರಮ ಜರುಗಿಸಿರುವ ಆರ್​ಬಿಐ, ಈಗ ಇದರ ಡೆಡ್​ಲೈನ್ ಅನ್ನು ಫೆಬ್ರುವರಿ 29ರಿಂದ ಮಾರ್ಚ್ 15ಕ್ಕೆ ವಿಸ್ತರಿಸಿದೆ. ಪೇಮೆಂಟ್ಸ್ ಬ್ಯಾಂಕ್​ನ ಗ್ರಾಹಕರ (customers of Paytm Payments Bank) ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು, ಅದರಲ್ಲೂ ವರ್ತಕರು, ಪೇಟಿಎಂ ವ್ಯಾಲಟ್ ಉಪಯೋಗಿಸುತ್ತಿರುವವರು, ಫಾಸ್​ಟ್ಯಾಗ್, ನ್ಯಾಷನಲ್ ಮೊಬಿಲಿಟಿ ಕಾರ್ಡ್ ಇತ್ಯಾದಿ ಬಳಸುತ್ತಿರುವವರು ತುಸು ನಿರಾಳರಾಗಬಹುದು. ಪೇಟಿಎಂ ಸಂಸ್ಥೆಗೂ ಈ ಡೆಡ್​ಲೈನ್ ಸ್ವಲ್ಪ ಉಸಿರಾಡಲು ಅವಕಾಶ ಕೊಡಬಹುದು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರುವರಿ 29ರ ಬಳಿಕ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ, ಹೊಸ ಕ್ರೆಡಿಟ್ ಟ್ರಾನ್ಸಾಕ್ಷನ್ ನಡೆಸುವಂತಿಲ್ಲ ಎಂದು ಜನವರಿ 31ರಂದು ಆರ್​ಬಿಐ ನಿರ್ಬಂಧ ಹೇರಿತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆ ಜೋಡಿತವಾದ ಯವುದೇ ಸೇವೆಯೂ ಫೆಬ್ರುವರಿ 29ರ ಬಳಿಕ ಸಾಧ್ಯವಾಗುವುದಿಲ್ಲ. ಈಗ ಇದರ ಗಡುವನ್ನು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ.

ಮಾರ್ಚ್ 15ರವರೆಗೂ ಪೇಟಿಎಂ ಗ್ರಾಹಕರು ತಮ್ಮ ವ್ಯಾಲಟ್​ಗೆ ಹಣ ತುಂಬಿಸಿ ಅದರ ಮೂಲಕ ವಹಿವಾಟು ನಡೆಸಬಹುದು. ಫಾಸ್​ಟ್ಯಾಗ್ ಉಪಯೋಗಿಸಬಹುದು. ಪೇಮೆಂಟ್ಸ್ ಬ್ಯಾಂಕ್​ನಲ್ಲೂ ಅಲ್ಲಿಯವರೆಗೆ ಹೊಸ ಡೆಪಾಸಿಟ್ ಇಡಬಹುದು. ಆದರೆ, ಮಾರ್ಚ್ 15ರ ಬಳಿಕ ಇದು ಸಾಧ್ಯವಾಗುವುದಿಲ್ಲ. ತಮ್ಮ ಖಾತೆಯಲ್ಲಿರುವ ಹಣ ಪೂರ್ಣ ಮುಗಿಯುವವರೆಗೂ ಗ್ರಾಹಕರು ಅದನ್ನು ಬಳಕೆ ಮಾಡಲು ಮಾರ್ಚ್ 15ರ ನಂತರವೂ ಅವಕಾಶ ಇರುತ್ತದೆ.

ಇದನ್ನೂ ಓದಿ: ಒಂದು ಕಾಲಕ್ಕೆ ಅಮೆರಿಕವನ್ನೇ ಮೀರಿಸಿ ನಂಬರ್ ಒನ್ ಆಗಹೊರಟಿದ್ದ ಜಪಾನ್ ಈಗ 4ನೇ ಸ್ಥಾನಕ್ಕೆ ಕುಸಿತ; ಓವರ್​ಟೇಕ್ ಮಾಡಲು ಭಾರತವೂ ಸಿದ್ಧ

ಪೇಟಿಎಂ ಬ್ಯಾಂಕ್​ಗೆ ಆರ್​ಬಿಐನಿಂದ ಯಾಕೆ ನಿರ್ಬಂಧ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹೇರಿದ್ದು ದಿಢೀರ್ ನಿರ್ಧಾರ ಅಲ್ಲ. ಪೇಮೆಂಟ್ಸ್ ಬ್ಯಾಂಕ್​ನ ಕೆಲ ಖಾತೆಗಳ ಮಧ್ಯೆ ಅನುಮಾನ ಹುಟ್ಟಿಸುವ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯುವಾಗ ಕೆವೈಸಿ ನಿಯಮಗಳನ್ನು ಸರಿಯಾಗಿ ಅನುಸರಿಸಲಾಗಿಲ್ಲ. ಹೀಗಾಗಿ, ವಹಿವಾಟಿನ ಜಾಡು ಹಿಡಿಯುವುದು ಕಷ್ಟವಾಗುತ್ತದೆ. ಈ ಬಗ್ಗೆ ಪೇಟಿಎಂ ಬ್ಯಾಂಕ್​ಗೆ ಆರ್​ಬಿಐ ಬಾರಿ ಬಾರಿ ಎಚ್ಚರಿಕೆಗಳನ್ನು ಕೊಟ್ಟಿತ್ತು. ಆದರೂ ಪೇಟಿಎಂ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೊನೆಯ ಅಸ್ತ್ರವಾಗಿ ಆರ್​ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ವಹಿವಾಟನ್ನೇ ನಿರ್ಬಂಧಿಸುವ ಕ್ರಮ ಜರುಗಿಸಬೇಕಾಯಿತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us