AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ

PM Kisan scheme 23rd installmentrelease date announced: ಪ್ರಧಾನಮಂತ್ರಿ ಕಿಸಾನ್ ಸ್ಕೀಮ್​ನಲ್ಲಿ 23ನೇ ಕಂತಿನ ಹಣ ಜೂನ್ 20, ಶನಿವಾರದಂದು ಬಿಡುಗಡೆ ಆಗಲಿದೆ. ಯೋಜನೆಯ ಅಧಿಕೃತ ಸೋಷಿಯಲ್ ಮಿಡಿಯಾ ಅಕೌಂಟ್​ನಿಂದ ಈ ಮಾಹಿತಿ ಪ್ರಕಟವಾಗಿದೆ. ಮಾರ್ಚ್ ತಿಂಗಳಲ್ಲಿ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಇಲ್ಲಿಯವರೆಗೆ ಈ ಯೋಜನೆಯಲ್ಲಿ ಸರ್ಕಾರವು ರೈತರಿಗೆ 4.25 ಲಕ್ಷ ಕೋಟಿ ರೂಗೂ ಅಧಿಕ ಹಣ ಬಿಡುಗಡೆ ಮಾಡಿದೆ.

ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ
ರೈತImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 18, 2026 | 1:31 PM

Share

ನವದೆಹಲಿ, ಜೂನ್ 18: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 23ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕ ಬಹಿರಂಗಗೊಂಡಿದೆ. ಜೂನ್ 20, ಶನಿವಾರದಂದು 2,000 ರೂಗಳ ಕಂತು ಬಿಡುಗಡೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್​ನಿಂದ ಇದು ಟ್ವೀಟ್ ಆಗಿದೆ. ಮಾರ್ಚ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ವೇಳೆ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9.32 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 18,640 ಕೋಟಿ ರೂ ಹಣ ಜಮೆಯಾಗಿತ್ತು. ಈಗ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್​ನಲ್ಲಿ ಪ್ರಧಾನಿಗಳು 23ನೇ ಕಂತಿನ ಹಣ ಬಿಡುಗಡೆ ಘೋಷಿಸಲಿದ್ದಾರೆ.

ಸರ್ಕಾರ ಜಮೀನು ಹೊಂದಿರುವ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಈವರೆಗೆ 22 ಕಂತುಗಳಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಹಣ 4.25 ಲಕ್ಷ ಕೋಟಿ ರೂ ದಾಟಿದೆ. ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಹಾಕಲಾಗುತ್ತದೆ. ಹೀಗಾಗಿ, ಹಣ ಪೋಲಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಪಿಎಂ ಕಿಸಾನ್ ಸ್ಕೀಮ್​ನ ಎಕ್ಸ್ ಖಾತೆಯಿಂದ ಆದ ಟ್ವೀಟ್

ಇದನ್ನೂ ಓದಿ: ಎನ್​ಎಸ್​ಇ ಮೂಲಕ ಬರಲಿದೆ ಭಾರತದ ಅತಿದೊಡ್ಡ ಐಪಿಒ; ಹಣ ಹೂಡುವ ಮುನ್ನ ಈ ಪ್ರಮುಖ ಸಂಗತಿಗಳನ್ನು ತಿಳಿದಿರಿ

ಪಿಎಂ ಕಿಸಾನ್ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು

  • ಭಾರತೀಯ ಪ್ರಜೆಯಾಗಿರಬೇಕು
  • ಸ್ವಂತ ಕೃಷಿ ಭೂಮಿ ಇರಬೇಕು

ಯೋಜನೆಗೆ ಅನರ್ಹರಾಗಿರುವವರು

  • ಸಾಂಸ್ಥಿಕ ಭೂಒಡೆಯರು
  • ಆದಾಯ ತೆರಿಗೆ ಪಾವತಿದಾರರು
  • ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರು
  • ಸರ್ಕಾರಿ ನೌಕರರು ಮತ್ತು 10,000 ರೂಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರವವರು
  • ಹಾಲಿ ಮತ್ತು ಮಾಜಿ ಶಾಸಕರು, ಸಂಸದರು

ಯೋಜನೆಗೆ ಅರ್ಹರಾಗಿದ್ದೂ ಹಣ ಬರದಿರಲು ಕಾರಣಗಳಿವು…

ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾಯಿಸಿದ್ದರೂ ಕೆಲ ರೈತರಿಗೆ ಹಣ ಸಿಗುತ್ತಿಲ್ಲ. ಇದಕ್ಕೆ ವಿವಿಧ ಕಾರಣಗಳಿವೆ:

  • ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಹಣ ಸಿಗುವುದಿಲ್ಲ.
  • ಯೋಜನೆಗೆ ನೊಂದಾಯಿಸುವಾಗ ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್​ಗಳು ಹೊಂದಿಕೆಯಾಗದಿದ್ದರೆ ಹಣ ಬರುವುದಿಲ್ಲ.
  • ಬ್ಯಾಂಕ್ ಅಕೌಂಟ್ ನಂಬರ್ ಸರಿ ಇರಬೇಕು. ಐಎಫ್​ಎಸ್​ಸಿ ಕೋಡ್ ಸರಿಯಾಗಿ ನಮೂದಿಸಬೇಕು. ಇಲ್ಲದಿದ್ದರೆ ಹಣ ಬರೋದಿಲ್ಲ.
  • ಅಪ್ಪ ಅಥವಾ ಅಮ್ಮ ಬದುಕಿರುವಾಗಲೇ ಅವರಿಂದ ಜಮೀನು ವರ್ಗಾವಣೆ ಆಗಿದ್ದರೆ ಆಗಲೂ ಹಣ ಸಿಗೋದಿಲ್ಲ.
  • 2019ರ ನಂತರ ಕೃಷಿ ಜಮೀನು ಖರೀದಿಸಿರುವವರಿಗೂ ಸದ್ಯಕ್ಕೆ ಫಲಾನುಭವಿಯಾಗುವ ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಫಲಾನುಭವಿಗಳ ಪಟ್ಟಿ ವೀಕ್ಷಿಸಿ…

ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ್ದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇರುತ್ತದೆ. ಇದೆಯಾ ಇಲ್ಲವಾ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಬಹುದು:

  • ಪಿಎಂ ಕಿಸಾನ್ ಅಧಿಕೃತ ವೆಬ್​​ಸೈಟ್​ಗೆ ಹೋಗಿ: pmkisan.gov.in/
  • ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಿ
  • ಗೆಟ್ ರಿಪೋರ್ಟ್ ಟ್ಯಾಬ್ ಕ್ಲಿಕ್ ಮಾಡಿ.

ಇಲ್ಲಿ ನೀವು ಆಯ್ದುಕೊಂಡ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Thu, 18 June 26

Follow Us