
ನವದೆಹಲಿ, ಅಕ್ಟೋಬರ್ 16: ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ಅಪ್ರತಿಮ ಎನಿಸಬಹುದಾದಷ್ಟು ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವುದಕ್ಕೆ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (RBI Guv Sanjay Malhotra) ತೃಪ್ತಿ ವ್ಯಕ್ತಪಡಿಸಿದ್ದಾರೆ. ಐಎಂಎಫ್ನ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತಿದ್ದ ಸಂಜಯ್ ಮಲ್ಹೋತ್ರಾ, ಅಮೆರಿಕದ ಟ್ಯಾರಿಫ್ನಿಂದ ಭಾರತಕ್ಕೆ ದೊಡ್ಡ ಆತಂಕವೇನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಟ್ಯಾರಿಫ್ಗಳಿಂದ ನಕಾರಾತ್ಮಕ ಪರಿಣಾಮ ಆಗುತ್ತದೆಯಾದರೂ ಅದೇನೂ ಬಹಳ ಚಿಂತೆ ಪಡಬೇಕಾದ ಸಂಗತಿ ಅಲ್ಲ. ಭಾರತದ ಆರ್ಥಿಕತೆಯು ಹೆಚ್ಚಾಗಿ ದೇಶೀಯ ಶಕ್ತಿ ಆಧಾರಿತವಾಗಿದೆ,’ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಇವಿ ಸಬ್ಸಿಡಿಗಳಿಗೆ ಚೀನಾ ಅಸಮಾಧಾನ; ಡಬ್ಲ್ಯುಟಿಒದಲ್ಲಿ ದೂರು
‘ನೀತಿ ಅನಿಶ್ಚಿತತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಹಿಂದೆಂದೂ ಕಂಡರಿಯದಷ್ಟು ಅನಿಶ್ಚಿತ ಕಾಲಘಟ್ಟದಲ್ಲಿ ಇದ್ದೇವೆ. ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕತೆಯ ಬೆಳವಣಿಗೆಗೆ ಇದು ದೊಡ್ಡ ತೊಡರುಗಾಲಾಗಿದೆ. ಎಲ್ಲಾ ಅಭಿವೃದ್ಧಿಶೀಲ ಆರ್ಥಿಕತೆಗಳೂ ಕೂಡ ಈ ಅಪಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಐಎಂಎಫ್ ಸಭೆಯಲ್ಲಿ ಸಂಜಯ್ ಮಲ್ಹೋತ್ರಾ ಕರೆ ನೀಡಿದ್ದಾರೆ.
‘ಕೋವಿಡ್ ಪರಿಸ್ಥಿತಿ ಹಾಗೂ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಹಣದುಬ್ಬರವನ್ನು ಉತ್ತಮವಾಗಿ ನಿಭಾಯಿಸಿದ್ದೇವೆ. ಶೇ. 8ರಷ್ಟಿದ್ದ ಹಣದುಬ್ಬರವನ್ನು ಶೇ. 1.5ಕ್ಕೆ ಇಳಿಸಿದ್ದೇವೆ. ತೈಲ ಬೆಲೆಗಳೂ ಕೂಡ ಕಡಿಮೆ ಆಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ. 4.4ಕ್ಕೆ ಸೀಮಿತಗೊಳ್ಳಬಹುದು. ಸಾಲವೂ ಕೂಡ ಕಡಿಮೆ ಇದೆ’ ಎಂದು ಸಂಜಯ್ ಮಲ್ಹೋತ್ರಾ ಭಾರತದ ಆರ್ಥಿಕತೆಯ ಸಕಾರಾತ್ಮಕ ಅಂಶಗಳ ಪಟ್ಟಿ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಐಎಂಎಫ್ನಿಂದಲೂ ನಿರೀಕ್ಷೆ ಹೆಚ್ಚಳ; ಶೇ. 6.4ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ
ಈ ವರ್ಷ ಡಾಲರ್ ಮೌಲ್ಯ ಶೇ. 10ರಷ್ಟು ಇಳಿಮುಖವಾಗಿದೆ. ಹೆಚ್ಚಿನ ಕರೆನ್ಸಿಗಳ ಮೌಲ್ಯ ಕಡಿಮೆ ಆಗಿದ್ದರೂ ಭಾರತೀಯ ರುಪಾಯಿಯ ಮೌಲ್ಯ ಅಷ್ಟೇನೂ ಕುಂದಿಲ್ಲ ಎನ್ನುವ ಸಂಗತಿಯನ್ನು ಆರ್ಬಿಐ ಗವರ್ನರ್ ಒತ್ತಿಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ