⁠Union Budget 2026: ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ

Budget 2026 Announcement: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಬಜೆಟ್‌ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಲವಾರು ಯೋಜನೆಗಳನ್ನು ಘೋಷಿಸಿದರು. ಚುನಾವಣಾ ರಾಜ್ಯಗಳಿಗೆ ಕೇಂದ್ರ ಬಜೆಟ್​​ನಲ್ಲಿ ಏನೇನು ಕೊಡುಗೆ ಘೋಷಣೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

⁠Union Budget 2026: ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ
ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ (ಸಾಂದರ್ಭಿಕ ಚಿತ್ರ)
Image Credit source: TV9 Network

Updated on: Feb 01, 2026 | 12:25 PM

ನವದೆಹಲಿ, ಫೆಬ್ರವರಿ 1: ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಬಜೆಟ್​​ನಲ್ಲಿ (Union Budget 2026) ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಿನರಲ್ ರಿಸರ್ವ್ ಪಾರ್ಕ್​ಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ವಾರಣಾಸಿಯಿಂದ ಸಿಲಿಗುರಿಗೆ ರೈಲು ಕಾರಿಡಾರ್ , ಕೇರಳ ಮತ್ತು ತಮಿಳುನಾಡಿನಲ್ಲಿ ಅಪರೂಪದ ಅರ್ಥ್ ಕಾರಿಡಾರ್ ಅನ್ನೂ ಹಣಕಾಸು ಸಚಿವರು ಘೋಷಿಸಿದ್ದಾರೆ.

ರೇರ್ ಅರ್ಥ್ ಖನಿಜಗಳ ವಿಚಾರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವುದಕ್ಕಾಗಿ ತಮಿಳುನಾಡು, ಕೇರಳ, ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಕಾರಿಡಾರ್​​ಗಳ ಸ್ಥಾಪನೆ ಘೋಷಣೆ ಮಾಡಲಾಗಿದೆ.

ವಾರಣಾಸಿಯಿಂದ ಸಿಲಿಗುರಿ ರೈಲು ಕಾರಿಡಾರ್

ಭಾರತದ ಹೈಸ್ಪೀಡ್ ರೈಲು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುವ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಪ್ರಮುಖ ನಗರ ಕೇಂದ್ರಗಳಿಗೆ ಸಂಪರ್ಕಿಸುವ ಸಲುವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಾರೆ.

ಬಜೆಟ್ ಘೋಷಣೆಯ ಪ್ರಕಾರ ಪುಣೆ-ಮುಂಬೈ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಬೆಂಗಳೂರು-ಚೆನ್ನೈ, ಹೈದರಾಬಾದ್-ಚೆನ್ನೈ, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಲಾಗಿದೆ. ಒಟ್ಟಾಗಿ, ಈ ಕಾರಿಡಾರ್‌ಗಳು ಪಶ್ಚಿಮ, ದಕ್ಷಿಣ, ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಕೈಗಾರಿಕಾ ಕೇಂದ್ರಗಳು, ತಂತ್ರಜ್ಞಾನ ಕೇಂದ್ರಗಳು, ಯಾತ್ರಾ ನಗರಗಳು ಮತ್ತು ಅಭಿವೃದ್ಧಿಹೊಂದುತ್ತಿರುವ ನಗರ ಸಮೂಹಗಳ ನಡುವೆ ವೇಗವಾಗಿ ಸಂಪರ್ಕ ಕಲ್ಪಿಸಲಿವೆ.

ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್​ಸ್ಟಿಟ್ಯೂಟ್

ಅಲ್ಪಾವಧಿಯ ಮಾಡ್ಯುಲರ್ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಐಸಿಎಐ ಮತ್ತು ಐಸಿಎಸ್‌ಐನಂತಹ ವೃತ್ತಿಪರ ಸಂಸ್ಥೆಗಳಿಗೆ ನೆರವಾಗಲು ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್​ಸ್ಟಿಟ್ಯೂಟ್ ಆರಂಭಿಸುವ ಬಗ್ಗೆ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ . ಅಲ್ಲದೆ, ಖಾಸಗಿ ಸಹಯೋಗದೊಂದಿಗೆ ಐದು ವೈದ್ಯಕೀಯ ಕೇಂದ್ರಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆ

ಭಾರತದಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲೂ ಮಹಿಳಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಬಜೆಟ್ ಲೈವ್​ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ