ಕೇಂದ್ರ ಸಂಪುಟದಿಂದ 10,783 ಕೋಟಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಅನುಮೋದನೆ: 5 ರಾಜ್ಯಗಳಲ್ಲಿ 656 ಕಿ.ಮೀ ರೈಲು ಜಾಲ ವಿಸ್ತರಣೆ
ಐದು ರಾಜ್ಯಗಳಾದ್ಯಂತ 656 ಕಿಮೀ ಹೆಚ್ಚುವರಿ ರೈಲು ಮಾರ್ಗ ನಿರ್ಮಿಸುವ ಮೂರು ಪ್ರಮುಖ ರೈಲ್ವೆ ವಿಸ್ತರಣಾ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ಕೇಂದ್ರ ಸಂಪುಟವು 10,783 ಕೋಟಿ ರೂ ವೆಚ್ಚದ ಈ ಮೂರು ಯೋಜನೆಗಳಿಗೆ ಸೆಪ್ಟೆಂಬರ್ 9ರಂದು ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಈ ರೈಲು ಜಾಲ ವಿಸ್ತರಣೆಯ ಕಾರ್ಯ ನಡೆಯಲಿದೆ.

ರೈಲುImage Credit source: Getty Images
ನವದೆಹಲಿ, ಸೆಪ್ಟೆಂಬರ್ 9: ಕೇಂದ್ರ ಸರ್ಕಾರ 10,783 ಕೋಟಿ ರೂಪಾಯಿ ವೆಚ್ಚದ ಮೂರು ಪ್ರಮುಖ ರೈಲ್ವೆ ವಿಸ್ತರಣಾ ಯೋಜನೆಗಳಿಗೆ ಸಮ್ಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ 5 ರಾಜ್ಯಗಳಾದ್ಯಂತ ಸುಮಾರು 656 ಕಿ.ಮೀ ಹೆಚ್ಚುವರಿ ರೈಲು ಮಾರ್ಗ ನಿರ್ಮಾಣವಾಗಲಿದೆ.
ಯೋಜನೆಯ ಪ್ರಮುಖ ವಿವರಗಳು
- ಒಟ್ಟು ಹೂಡಿಕೆ: ₹10,783 ಕೋಟಿ
- ವಿಸ್ತರಣೆ: ಸುಮಾರು 656 ಕಿ.ಮೀ ನೂತನ ರೈಲು ಹಳಿ
- ಪೂರ್ಣಗೊಳಿಸುವ ಗುರಿ: 2029-30ನೇ ಹಣಕಾಸು ವರ್ಷ
- ಸಂಪರ್ಕಿತ ರಾಜ್ಯಗಳು (5): ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ
- ವ್ಯಾಪ್ತಿ: 14 ಜಿಲ್ಲೆಗಳ ಸುಮಾರು 4,790 ಹಳ್ಳಿಗಳ 56 ಲಕ್ಷ ಜನರಿಗೆ ನೇರ ಪ್ರಯೋಜನ ಲಭಿಸಲಿದೆ.
ಅನುಮೋದನೆ ಪಡೆದ 3 ಪ್ರಮುಖ ರೈಲ್ವೆ ಯೋಜನೆಗಳು
- ಖರಗ್ಪುರ – ಝಾರ್ಸುಗುಡ (ಬಾಗ್ದೇಹಿ): 4ನೇ ರೈಲು ಮಾರ್ಗ (ಪೂರ್ವ ಮತ್ತು ಮಧ್ಯಭಾಗದ ರೈಲು ಸಾಮರ್ಥ್ಯ ಹೆಚ್ಚಳ).
- ಕಟ್ನಿ – ಪೇಂದ್ರಾ ರಸ್ತೆ: 4ನೇ ರೈಲು ಮಾರ್ಗ.
- ಬಿಲಾಸ್ಪುರ (ಉಸ್ಲಾಪುರ) – ಪೇಂದ್ರಾ ರಸ್ತೆ: 3ನೇ ರೈಲು ಮಾರ್ಗ.
ಇದನ್ನೂ ಓದಿ: ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್ ದುಬಾರಿ, ಹಣದುಬ್ಬರ ಹೆಚ್ಚಳ ಇತ್ಯಾದಿ ಇದರ ಎಫೆಕ್ಟ್ ಹಲವು
ಪ್ರಮುಖ ಅನುಕೂಲಗಳು ಹಾಗೂ ಪರಿಣಾಮಗಳು
- ಸರಕು ಸಾಗಣೆಗೆ ವೇಗ: ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನಂತಹ ಪ್ರಮುಖ ಸರಕುಗಳ ಸಾಗಣೆಗೆ ಇದು ಪ್ರಮುಖ ಮಾರ್ಗವಾಗಿದ್ದು, ವಾರ್ಷಿಕ 27 ಮಿಲಿಯನ್ ಟನ್ಗಳಷ್ಟು (MTPA) ಹೆಚ್ಚುವರಿ ಸರಕು ಸಾಗಣೆಗೆ ನೆರವಾಗಲಿದೆ.
- PM ಗತಿ ಶಕ್ತಿ ಯೋಜನೆ: ಈ ಯೋಜನೆಗಳನ್ನು ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಸಮಗ್ರ ಸಾರಿಗೆ ಸಂಪರ್ಕ ಮತ್ತು ಸಾಗಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ರೂಪಿಸಲಾಗಿದೆ.
- ಪರಿಸರ ಸ್ನೇಹಿ ಹಾಗೂ ಆರ್ಥಿಕ ಉಳಿತಾಯ: ಹಳಿಗಳ ವಿಸ್ತರಣೆಯಿಂದ ಸುಮಾರು 12 ಕೋಟಿ ಲೀಟರ್ ಇಂಧನ/ತೈಲ ಆಮದು ಉಳಿತಾಯವಾಗಲಿದ್ದು, 62 ಕೋಟಿ ಕೆಜಿ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಲಿದೆ (ಇದು 2.48 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನ).
- ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ: ಬಾಂದವ್ಗಢ ಟೈಗರ್ ರಿಸರ್ವ್, ಅಮರಕಂಟಕ ದೇವಸ್ಥಾನ, ತಾರಾತಾರಿಣಿ ದೇವಸ್ಥಾನ ಹಾಗೂ ಜಾರ್ಸುಗುಡ ಬಳಿಯ ಶ್ರೀ ಕ್ಷೇತ್ರ ಜಗನ್ನಾಥ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಿಗೆ ಸುಲಭ ಸಂಪರ್ಕ ಸಿಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Follow Us




