SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್​ಟಿ ಲೆಕ್ಕಾಚಾರ

CGST, SGST, IGST and GST Devolution explained: ರಾಜ್ಯಕ್ಕೆ ಬರಬೇಕಾದ ಎಸ್​ಜಿಎಸ್​ಟಿ ಪಾಲಿನಲ್ಲೂ ಅನ್ಯಾಯ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರಾ? ವಾಸ್ತವವಾಗಿ ಎಸ್​ಜಿಎಸ್​ಟಿ ಸಂಪೂರ್ಣವಾಗಿ ರಾಜ್ಯಗಳಿಗೆ ದಕ್ಕುತ್ತದೆ. ಐಜಿಎಸ್​ಟಿ ತೆರಿಗೆಯು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಿಕೆ ಆಗುತ್ತದೆ. ಕೇಂದ್ರಕ್ಕೆ ಸಿಗುವ ಒಟ್ಟಾರೆ ತೆರಿಗೆ ಆದಾಯದಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ಹಂಚುತ್ತದೆ. ಅದು ಜಿಎಸ್​ಟಿ ಡೆವೊಲ್ಯೂಶನ್.

SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್​ಟಿ ಲೆಕ್ಕಾಚಾರ
ಜಿಎಸ್​ಟಿ

Updated on: Jul 24, 2025 | 2:11 PM

ಕರ್ನಾಟಕದ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್​ನಿಂದ (Commercial tax dept) ರಾಜ್ಯದ ಸಣ್ಣ ಉದ್ದಿಮೆಗಳ ಮೇಲೆ ಲಕ್ಷಾಂತರ ರೂಗಳಷ್ಟು ತೆರಿಗೆ ಕೊಡಬೇಕೆಂದು ನೋಟೀಸ್ ಕೊಟ್ಟಿದ್ದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಯುಪಿಐ ಮೂಲಕ ಆದ ಪೇಮೆಂಟ್ ಆಧಾರದ ಮೇಲೆ ಈ ನೋಟೀಸ್ ನೀಡಲಾಗಿತ್ತು. ಹಳೆಯ ಜಿಎಸ್​ಟಿ ಬಾಕಿಯನ್ನು ಮನ್ನಾ ಮಾಡುವುದಾಗಿ ಸರ್ಕಾರ ಹೇಳಿದ್ದರಿಂದ ವ್ಯಾಪಾರಿಗಳು ತಮ್ಮ ಮುಷ್ಕರ ಹಿಂಪಡೆದಿದ್ದಾರೆ. ಇದೇ ವೇಳೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಜಿಎಸ್​ಟಿ ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿರುವಂಥದ್ದು ಎಂದು ತಾವು ಹಿಂದೆ ಅನೇಕ ಬಾರಿ ಹೇಳಿದ್ದನ್ನೇ ಪುನರುಚ್ಚರಿಸಿದ್ದಾರೆ. ಆದರೆ, ಜಿಎಸ್​ಟಿಯಲ್ಲಿ ರಾಜ್ಯಗಳ ಪಾತ್ರ ಏನು, ರಾಜ್ಯಗಳಿಗೆ ಜಿಎಸ್​ಟಿಯಲ್ಲಿ ಎಷ್ಟು ಪಾಲು ಹೋಗುತ್ತದೆ, ಇತ್ಯಾದಿ ವಿವರ ಇಲ್ಲಿದೆ.

ಜಿಎಸ್​ಟಿಯಲ್ಲಿ ನಾಲ್ಕು ವಿಧದ ಟ್ಯಾಕ್ಸ್

ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಯುಟಿಜಿಎಸ್​ಟಿ ಮತ್ತು ಐಜಿಎಸ್​ಟಿ. ಇದರಲ್ಲಿ ಸಿಜಿಎಸ್​ಟಿ ಎಂಬುದು ಕೇಂದ್ರದ ಜಿಎಸ್​ಟಿ ಪಾಲು. ಎಸ್​ಜಿಎಸ್​ಟಿ ಎಂಬುದ ರಾಜ್ಯದ ಜಿಎಸ್​ಟಿ ಪಾಲು. ಯುಟಿಜಿಎಸ್​ಟಿ ಎಂಬುದು ಕೇಂದ್ರಾಡಳಿತ ಪ್ರದೇಶದ ಜಿಎಸ್​ಟಿ ಪಾಲು. ಐಜಿಎಸ್​ಟಿ ಎಂಬುದು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುವ ತೆರಿಗೆ ಪಾಲು.

ರಾಜ್ಯದೊಳಗೆ ನಡೆಯುವ ವ್ಯವಹಾರದಲ್ಲಿ ಸಿಜಿಎಸ್​ಟಿ, ಎಸ್​ಜಿಎಸ್​ಟಿ

ಒಂದೇ ರಾಜ್ಯದೊಳಗೆ ನಡೆಯುವ ವ್ಯಾಪಾರ ಮತ್ತು ವಹಿವಾಟಿನಲ್ಲಿ ವಿಧಿಸಲಾಗುವ ಜಿಎಸ್​ಟಿಯಲ್ಲಿ ಸಿಜಿಎಸ್​ಟಿ ಮತ್ತು ಎಸ್​ಜಿಎಸ್​ಟಿ ಮಾತ್ರವೇ ಇರುತ್ತದೆ. ಮಂಗಳೂರಿನಲ್ಲಿರುವ ಒಬ್ಬ ವ್ಯಾಪಾರಿಯು ಬೆಂಗಳೂರಿನಲ್ಲಿರುವ ಗ್ರಾಹಕನಿಗೆ ಶೇ. 18ರಷ್ಟು ಜಿಎಸ್​ಟಿಯೊಂದಿಗೆ ಸರಕು ಮಾರುತ್ತಾನೆ ಎಂದಿಟ್ಟುಕೊಳ್ಳಿ. ಆಗ ಸಿಜಿಎಸ್​ಟಿ ಶೇ. 9, ಎಸ್​ಜಿಎಸ್​ಟಿ ಶೇ 9 ಇರುತ್ತದೆ.

ಇದನ್ನೂ ಓದಿ: ಜೂನ್​​ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್​​ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ

ಎಸ್​ಜಿಎಸ್​ಟಿ ಮೊತ್ತವು ಸಂಪೂರ್ಣವಾಗಿ ರಾಜ್ಯಕ್ಕೆ ಹೋಗುತ್ತದೆ. ಸಿಜಿಎಸ್​ಟಿ ಕೇಂದ್ರಕ್ಕೆ ವರ್ಗಾವಣೆ ಆಗುತ್ತದೆ. ಕೇಂದ್ರಾಡಳಿತ ಪ್ರದೇಶವೊಂದರಲ್ಲಿ ವ್ಯಾಪಾರ ಆದಾಗ ಎಸ್​ಜಿಎಸ್​ಟಿ ಬದಲು ಯುಟಿಜಿಎಸ್​ಟಿ ಇರುತ್ತದೆ.

ಐಜಿಎಸ್​ಟಿ ಮುಖ್ಯವಾದ ಸಂಗತಿ

ಸಿಜಿಎಸ್​ಟಿ ಮತ್ತು ಎಸ್​ಜಿಎಸ್​ಟಿ ಲೆಕ್ಕಾಚಾರ ಸರಳ. ಆದರೆ, ಐಜಿಎಸ್​ಟಿ ಕೆಲ ಮಂದಿಗೆ ಗೊಂದಲ ತರಬಹುದು. ಐಜಿಎಸ್​ಟಿ ಎಂದರೆ ಇಂಟಿಗ್ರೇಟೆಡ್ ಜಿಎಸ್​ಟಿ. ಅಂತರರಾಜ್ಯ ವ್ಯಾಪಾರಕ್ಕೆ ಇದು ಅನ್ವಯ ಆಗುತ್ತದೆ. ಅಂದರೆ, ಕರ್ನಾಟಕದಿಂದ ಒಬ್ಬ ವ್ಯಾಪಾರಿಯು ಕೇರಳದವರಿಗೆ ಸರಕು ಮಾರಿದಾಗ ಐಜಿಎಸ್​ಟಿ ಅನ್ವಯ ಆಗುತ್ತದೆ. ಇಲ್ಲಿ ಸಿಜಿಎಸ್​ಟಿ, ಎಸ್​ಜಿಎಸ್​ಟಿ ಲೆಕ್ಕಕ್ಕೆ ಬರುವುದಿಲ್ಲ.

ಮುಖ್ಯವಾದ ಸಂಗತಿ ಇರವುದು ಈ ಹಂತದಲ್ಲೇ. ಉದಾಹರಣೆಗೆ, ಕರ್ನಾಟಕದಿಂದ ವ್ಯಾಪಾರಿಯು ಕೇರಳ ರಾಜ್ಯದ ಉದ್ಯಮಿಗೆ ಸರಕು ಮಾರುವಾಗ ಜಿಎಸ್​ಟಿ ಮುರಿದುಕೊಳ್ಳುತ್ತಾನೆ. ಈ ಜಿಎಸ್​ಟಿ ಹಣವನ್ನು ಪಾವತಿಸುವುದು ಕೇರಳದ ವ್ಯಕ್ತಿ. ಹೀಗಾಗಿ, ಈ ವ್ಯಾಪಾರದಿಂದ ಸಂಗ್ರಹಿತವಾದ ಐಜಿಎಸ್​ಟಿ ಹಣವು ಕೇಂದ್ರ ಮತ್ತು ಆ ಕೇರಳ ರಾಜ್ಯದ ನಡುವೆ ಹಂಚಿಕೆ ಆಗುತ್ತದೆ. ಅಂದರೆ, ಖರೀದಿ ಮಾಡಿದ ರಾಜ್ಯದ ಸರ್ಕಾರಕ್ಕೆ ಐಜಿಎಸ್​ಟಿ ಪಾಲು ಸಿಗುತ್ತದೆ.

ಬೀದಿಬದಿ ವ್ಯಾಪಾರಿಗಳಿಗೆ ನೋಟೀಸ್ ಕೊಟ್ಟಿದ್ದು ಯಾರು?

ಕರ್ನಾಟಕದಲ್ಲಿ ಸಣ್ಣ ಪುಟ್ಟ ಉದ್ದಿಮೆದಾರರಿಗೆ ಟ್ಯಾಕ್ಸ್ ನೋಟೀಸ್ ಕೊಟ್ಟಿದ್ದು ಜಿಎಸ್​ಟಿಗೆ ಸಂಬಂಧಪಟ್ಟಿದ್ದೇ ಆದರೂ ಅದನ್ನು ನೀಡಿದ್ದು ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ. ಜಿಎಸ್​ಟಿ ಹಾಗು ಇತರ ತೆರಿಗೆಯನ್ನು ವಸೂಲಿ ಮಾಡುವುದು ಆಯಾ ರಾಜ್ಯಗಳ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯೇ.

ರಾಜ್ಯಗಳಿಗೆ ಕೇಂದ್ರದಿಂದ ಜಿಎಸ್​ಟಿ ಹಂಚಿಕೆ ಹೇಗೆ?

ದಕ್ಷಿಣದ ರಾಜ್ಯಗಳು ತಗಾದೆ ಹೆಚ್ಚಾಗಿ ತೆಗೆಯುವ ಜಿಎಸ್​ಟಿ ಹಂಚಿಕೆ ವಿಚಾರ ಇದಕ್ಕಿಂತ ಭಿನ್ನ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಕೇಂದ್ರದ ಜಿಎಸ್​ಟಿ ಹಂಚಿಕೆಯಲ್ಲಿ ತಮಗೆ ಅನ್ಯಾಯ ಆಗುತ್ತಿದೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಇದರ ಲೆಕ್ಕಾಚಾರ ಬೇರೆಯೇ ಇರುತ್ತದೆ.

ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್‌:ನೋಟಿಸ್ ನೀಡಿದ್ರೂ ತೆರಿಗೆ ವಸೂಲಿ ಮಾಡಲ್ಲ, ಸಿಎಂ ಸ್ಪಷ್ಟನೆ

ಕೇಂದ್ರಕ್ಕೆ ಸಿಗುವ ಎಲ್ಲಾ ತೆರಿಗೆಗಳು ಇದರಲ್ಲಿ ಒಳಗೊಂಡಿತ್ತದೆ. ಸಿಜಿಎಸ್​ಟಿ, ಐಜಿಎಸ್​ಟಿಯಲ್ಲಿನ ಪಾಲು, ಆದಾಯ ತೆರಿಗೆ, ಕಾರ್ಪೊರೇಟ್ ಟ್ಯಾಕ್ಸ್, ಕಸ್ಟಮ್ಸ್ ಇತ್ಯಾದಿ ವಿವಿಧ ಮೂಲಗಳಿಂದ ಕೇಂದ್ರಕ್ಕೆ ಸಿಗುವ ತೆರಿಗೆ ಆದಾಯ ಇದು. ಈ ತೆರಿಗೆ ಹಣವನ್ನು ವಿವಿಧ ರಾಜ್ಯಗಳಲ್ಲಿ ಕಲೆ ಹಾಕಲಾಗುವುದರಿಂದ, ಇದನ್ನು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಹಂಚಿಕೆ ಮಾಡುತ್ತದೆ.

ಕೇಂದ್ರಕ್ಕೆ 59, ರಾಜ್ಯಗಳಿಗೆ 41

ಹಣಕಾಸು ಆಯೋಗ ಶಿಫಾರಸು ಮಾಡುವ ಕ್ರಮದಲ್ಲಿ ಹಂಚಿಕೆ ಆಗುತ್ತದೆ. ಸದ್ಯಕ್ಕೆ ಈ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ. 41ರಷ್ಟು ಹೋಗುತ್ತದೆ. ರಾಜ್ಯಗಳ ಆರ್ಥಿಕ ಸ್ಥಿತಿ, ಜನಸಂಖ್ಯೆ ಇತ್ಯಾದಿ ಕೆಲ ಮಾನದಂಡಗಳಿಗೆ ಅನುಸಾರವಾಗಿ ವಿವಿಧ ಪ್ರಮಾಣದಲ್ಲಿ ಈ ಹಣವನ್ನು ಹಂಚಲಾಗುತ್ತದೆ. ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದು, ಆದಾಯ ಹೆಚ್ಚಿರುವುದರಿಂದ ಇವುಗಳಿಗೆ ತೆರಿಗೆ ಪಾಲು ತುಸು ಕಡಿಮೆ ಇರುತ್ತದೆ. ಈ ವಿಚಾರವನ್ನೇ ಈ ರಾಜ್ಯಗಳು ಆಕ್ಷೇಪಿಸುತ್ತಿರುವುದು.

ಇಲ್ಲಿ ಗಮನಿಸಬೇಕಾದ್ದೆಂದರೆ, ಎಸ್​ಜಿಎಸ್​ಟಿಯಲ್ಲಿ ಬಂದ ತೆರಿಗೆ ಎಲ್ಲವೂ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಐಜಿಎಸ್​ಟಿಯಲ್ಲಿ ಬಂದ ತೆರಿಗೆಯಲ್ಲಿ ಅರ್ಧ ಪಾಲು ಆಯಾ ಅನುಭೋಗ ರಾಜ್ಯಗಳಿಗೆ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us