ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ, ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಎಂಟು ವರ್ಷದ ಬಾಲಕನನ್ನು ನೆರೆಹೊರೆಯ ವ್ಯಕ್ತಿ ಅಪಹರಿಸಿ ಕೊಲೆ ಮಾಡಿದ್ದಾನೆ. ಕುಟುಂಬಗಳ ನಡುವಿನ ದ್ವೇಷಕ್ಕೆ ಬಾಲಕ ಕೊಲೆಯಾಗಿದ್ದಾನೆ. ಆರೋಪಿಯ ಪುತ್ರಿಯೇ ಕೊಲೆ ಸತ್ಯ ಬಾಯ್ಬಿಟ್ಟಿದ್ದಾಳೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಮೇ 08: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಎಂಟು ವರ್ಷದ ಬಾಲಕನನ್ನು (boy) ಅಪಹರಿಸಿ ಕೊಲೆ (kill) ಮಾಡಿರುವಂತಹ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕ ರಮಾನಂದ (8) ಕೊಲೆಯಾದ ಬಾಲಕ. ಪಕ್ಕದ ಮನೆಯ ನಿವಾಸಿ ಮತ್ತೂರು ಎಂಬಾತನಿಂದ ಕೃತ್ಯವೆಸಲಾಗಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ ನಡುವೆ ಗಲಾಟೆ ನಡೆದಿದೆ. ಈ ಹಿನ್ನೆಲೆ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಆರೋಪಿ ಮತ್ತೂರು ಮೃತದೇಹವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದು, ನಿನ್ನೆ ರಾಯಸಂದ್ರ ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಸದ್ಯ ಆರೋಪಿ ಮತ್ತೂರು ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ
ತನಿಖೆಗೆ ಇಳಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಆರೋಪಿ ಪುತ್ರಿಯೇ ಕೊಲೆ ಸತ್ಯ ಬಾಯ್ಬಿಟ್ಟಿದ್ದಾಳೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಹೀಗೆ ಮಾಡುವುದಾಗಿ ತಂದೆ ಹೆದರಿಸಿರುವುದಾಗಿ ಹೇಳಿದ್ದಾಳೆ. ಬಾಲಕಿ ಮಾಹಿತಿ ಮೇರೆಗೆ ಕರೆತಂದು ವಿಚಾರಣೆ ಮಾಡಿದಾಗ ಆರೋಪಿ ಮತ್ತೂರು ಸತ್ಯ ಒಪ್ಪಿಕೊಂಡಿದ್ದಾರೆ.
ಕೊಲೆ ಮಾಡಿ ಮೃತದೇಹ ಬ್ಯಾಗ್ನಲ್ಲಿ ಸಾಗಾಟ
ಮೃತ ಬಾಲಕನ ಮನೆ ಮತ್ತು ಆರೋಪಿಯ ಮನೆ ಎದುರುಬದುರಾಗಿದೆ. ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಮತ್ತೂರು ಪುತ್ರಿ ರಮಾನಂದ ಜೊತೆಗೆ ಆಟವಾಡುತ್ತಿದ್ದಳು. ಆತನೊಂದಿಗೆ ಆಟ ಆಡದಂತೆ ಆರೋಪಿ ಹೇಳುತ್ತಿದ್ದ. ಮೇ 6 ರಂದು ಮದ್ಯಪಾನ ಮಾಡಿ ಬಂದ ಮತ್ತೂರು ರಮಾನಂದ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಬಾಲಕನ ತಾಯಿ ಮನೆಗೆಲಸಕ್ಕೆ ಹೋಗಿದ್ದಳು. ಸಂಜೆ 7 ಗಂಟೆ ಬಳಿಕ ಮಗು ಕಾಣಿಸದಿದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ. ಎಲ್ಲೂ ಪತ್ತೆಯಾಗಿಲ್ಲ. ಇತ್ತ ಮತ್ತೂರು ಕೂಡ ಮನೆ ಲಾಕ್ ಮಾಡಲಾಗಿದ್ದು, 12 ಗಂಟೆ ರಾತ್ರಿಗೆ ಮತ್ತೆ ಮನೆಗೆ ಬಂದು ಬ್ಯಾಗ್ ಎತ್ತುಕೊಂಡು ತನ್ನ ಸಂಬಂಧಿ ಮನೆಗೆ ಹೋಗಿದ್ದ.
ಇದನ್ನೂ ಓದಿ: ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ: ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್
ಇದನ್ನ ಸ್ಥಳೀಯರು ಗಮನಿಸಿದ್ದರು. ಇದರಿಂದ ಅನುಮಾನಗೊಂಡು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗೆ ಇಳಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಮತ್ತೂರು ಬಾಲಕನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಿ ರಾಯಸಂದ್ರ ಕೆರೆ ಬಳಿ ಎಸೆದಿದ್ದ.
ಸ್ಥಳೀಯರು ಹೇಳಿದ್ದಿಷ್ಟು
ಸ್ಥಳೀಯ ಮಹಿಳೆ ಹೇಮಾ ಎಂಬುವವರು ಪ್ರತಿಕ್ರಿಯಿಸಿದ್ದು, ಮನೆ ಬಳಿ ಆಟ ಆಡಿಕೊಂಡು ಇರುವಾಗ ಗಲಾಟೆ ಆಗಿದೆ. ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ರಾಯಸಂದ್ರ ಕೆರೆಗೆ ತೆಗೆದುಕೊಂಡು ಹೋಗಿ ಹಾಕಿದ್ದಾನೆ ಎಂದಿದ್ದಾರೆ.
ಮನೆ ಮಾಲೀಕ ಸಂಪತ್ ಹೇಳಿದ್ದಿಷ್ಟು
ಮನೆ ಮಾಲೀಕ ಸಂಪತ್ ಹೇಳಿಕೆ ನೀಡಿದ್ದು, ಈ ಹಿಂದೆ ಮನೆ ಖಾಲಿ ಮಾಡಲು ಹೇಳಿದ್ದೆ. ಎರಡು ತಿಂಗಳಿಂದ ಬಾಡಿಗೆನು ಕೊಟ್ಟಿಲ್ಲ. ಮಗು ವಿಚಾರವಾಗಿ ಏನಾಯ್ತು ಅನ್ನೋದು ಗೊತ್ತಿಲ್ಲ. ಬ್ಯಾಗ್ ಎತ್ತಿಕೊಂಡು ಹೋಗೋದನ್ನ ಇಲ್ಲಿರುವವರು ನೋಡಿದ್ದಾರೆ. ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದರು. ತನ್ನ ಮಕ್ಕಳನ್ನು ಆ ಹುಡುಗನ ಜೊತೆ ಸೇರದಂತೆ ಗಲಾಟೆ ಆಗಿದೆ ಎಂದು ಹೇಳಿದ್ದಾರೆ.
ತನ್ನ ಮಕ್ಕಳಿಗೆ ಬಾಲಕ ಹೊಡೆಯುತ್ತಾನೆ ಅಂತಾ ಕೊಲೆ
ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯಿಸಿದ್ದು, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮೇ 6ರಂದು ಮಗುವಿನ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರುತ್ತೆ. ತನಿಖೆ ಮಾಡಿದಾಗ ಪಕ್ಕದ ಮನೆಯವನ ಜೊತೆ ಹೋಗಿರೋದು ಗೊತ್ತಾಗುತ್ತೆ. ಆರೋಪಿಯನ್ನ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಿಹಾರ ಮೂಲದ ಆರೋಪಿಯನ್ನ ಬಂಧಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ: ತನ್ನ ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಹತ್ಯೆಗೈದ
ಬಿಹಾರ ಮೂಲದ ಎರಡು ಕುಟುಂಬ ವಾಸವಾಗಿದ್ದವು. ಎರಡೂ ಕುಟುಂಬದ ಮಕ್ಕಳು ಜಗಳ ಆಡುವ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಗೆ ಹೆಣ್ಣು ಮಕ್ಕಳಿದ್ದಾರೆ. ತನ್ನ ಮಕ್ಕಳಿಗೆ ಬಾಲಕ ಹೊಡೆಯುತ್ತಾನೆ ಅಂತಾ ಕೊಲೆ ಮಾಡಿದ್ದಾನೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.