Crime News: ನಿಲ್ಲದ ಲೈಂಗಿಕ ದೌರ್ಜನ್ಯ; ಉತ್ತರಾಖಂಡದಲ್ಲಿ ಬಸ್​ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

|

Updated on: Aug 20, 2024 | 8:57 PM

ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಪತ್ತೆಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಜನರನ್ನು ಆತಂಕಕ್ಕೀಡು ಮಾಡಿದೆ. ಹೆಣ್ಣುಮಕ್ಕಳಿಗೆ ಮನೆಯ ಹೊರಗೆ ಮಾತ್ರವಲ್ಲದೆ ಮನೆಯೊಳಗೂ ಭದ್ರತೆ ಇಲ್ಲದಂತಾಗಿದೆ. ಇದೀಗ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಉತ್ತರಾಖಂಡದಲ್ಲಿ ಬಸ್​ನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Crime News: ನಿಲ್ಲದ ಲೈಂಗಿಕ ದೌರ್ಜನ್ಯ; ಉತ್ತರಾಖಂಡದಲ್ಲಿ ಬಸ್​ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ
Follow us on

ಡೆಹ್ರಾಡೂನ್: ದೆಹಲಿಯಿಂದ ಡೆಹ್ರಾಡೂನ್​ಗೆ ತೆರಳಿದ ಸರ್ಕಾರಿ ಬಸ್​ನೊಳಗೆ ಬಸ್ ನಿಲ್ದಾಣದಲ್ಲಿಯೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯವೊಂದು ಇಡೀ ದೇಶವೇ ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡಿದೆ. ಹದಿಹರೆಯದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆಗಸ್ಟ್ 12ರಂದು ತಡರಾತ್ರಿ ಡೆಹ್ರಾಡೂನ್ ಐಎಸ್‌ಬಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ತಾಪ್ತ ಬಾಲಕಿ ಒಂಟಿಯಾಗಿ ಕುಳಿತಿರುವುದು ಕಂಡುಬಂದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಆಕೆಯನ್ನು ಅಲ್ಲಿಂದ ಬಾಲ ನಿಕೇತನಕ್ಕೆ ಕಳುಹಿಸಲಾಗಿದೆ. ಬಾಲ ನಿಕೇತನದಲ್ಲಿ ಕೌನ್ಸೆಲಿಂಗ್‌ನ ಸಮಯದಲ್ಲಿ ಅವಳು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ.

ಡೆಹ್ರಾಡೂನ್ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ನೀಡಿದ ಮಾಹಿತಿಯ ಪ್ರಕಾರ, ಬಂಧಿತರಲ್ಲಿ ಸರ್ಕಾರಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಕೂಡ ಸೇರಿದ್ದಾರೆ. ಆಗಸ್ಟ್ 12ರಂದು ಈ ಘಟನೆ ನಡೆದಿದ್ದು, ಶನಿವಾರ ಸಂಜೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ: Shocking News: 2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಚರಂಡಿಗೆ ಎಸೆದು ಕೊಂದ ಯುವಕ

ಮಾಹಿತಿ ಪಡೆದ ತಕ್ಷಣ, ಪೊಲೀಸರು ಕಾರ್ಯಾಚರಣೆಗೆ ಇಳಿದರು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುವ ಮೂಲಕ ರೋಡ್‌ವೇಸ್ ಬಸ್ ಅನ್ನು ಗುರುತಿಸಿದರು. ನಂತರ ಚಾಲಕ, ಕಂಡಕ್ಟರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳನ್ನು ಉತ್ತರಾಖಂಡದ ಹರಿದ್ವಾರದ ಬುಗ್ಗವಾಲಾ ನಿವಾಸಿಗಳಾದ ಧರ್ಮೇಂದ್ರ ಕುಮಾರ್ (32) ಮತ್ತು ರಾಜ್‌ಪಾಲ್ (57), ಹರಿದ್ವಾರದ ಭಗವಾನ್‌ಪುರ ನಿವಾಸಿ ದೇವೇಂದ್ರ (52), ಪಟೇಲ್ ನಗರದ ನಿವಾಸಿ ರಾಜೇಶ್ ಕುಮಾರ್ ಸೋಂಕರ್ (38), ನವಾಬ್‌ಗಂಜ್ ನಿವಾಸಿ ರವಿಕುಮಾರ್ (34) ಎಂದು ಗುರುತಿಸಲಾಗಿದೆ.

ಆರೋಪಿ ಧಮೇಂದ್ರ ಕುಮಾರ್ ಬಸ್ ಚಾಲಕ ಮತ್ತು ದೇವೇಂದ್ರ ಕಂಡಕ್ಟರ್ ಎಂದು ಎಸ್ಪಿ ಸಿಂಗ್ ಹೇಳಿದ್ದಾರೆ. ರವಿ ಕುಮಾರ್ ಮತ್ತು ರಾಜ್‌ಪಾಲ್ ಇತರ ಬಸ್‌ಗಳ ಚಾಲಕರಾಗಿದ್ದರೆ, ಸೋಂಕರ್ ಅವರು ಡೆಹ್ರಾಡೂನ್ ಬಸ್ ನಿಲ್ದಾಣದಲ್ಲಿ ಉತ್ತರಾಖಂಡ್ ರೋಡ್‌ವೇಸ್‌ನ ಕ್ಯಾಷಿಯರ್ ಆಗಿದ್ದಾರೆ. ಈ ಅತ್ಯಾಚಾರಕ್ಕೆ ಬಳಸಲಾದ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ವಿಧಿವಿಜ್ಞಾನ ತಂಡವು ಒಳಗಿನಿಂದ ಸಾಕ್ಷ್ಯವನ್ನು ಸಂಗ್ರಹಿಸಿದೆ.

ಇದನ್ನೂ ಓದಿ: Shocking News: ಅಮ್ಮನೊಂದಿಗೆ ಬೆಚ್ಚಗೆ ಮಲಗಿದ್ದ 3 ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ!

ಪ್ರಾಥಮಿಕ ತನಿಖೆಯಲ್ಲಿ ಆ ಬಾಲಕಿ ಅನಾಥೆ ಮತ್ತು ಪಂಜಾಬ್ ನಿವಾಸಿ ಎಂದು ತಿಳಿದುಬಂದಿತ್ತು. ಆದರೆ, ನಂತರ ತಾನು ಉತ್ತರ ಪ್ರದೇಶದ ಮೊರಾದಾಬಾದ್‌ನ ನಿವಾಸಿಯಾಗಿದ್ದು, ಅಲ್ಲಿಂದ ದೆಹಲಿಗೆ ಹೋಗಿ ಅಲ್ಲಿಂದ ಕಾಶ್ಮೀರಿ ಗೇಟ್ ಐಎಸ್‌ಬಿಟಿಯಿಂದ ಡೆಹ್ರಾಡೂನ್‌ಗೆ ಬಸ್‌ನಲ್ಲಿ ತೆರಳಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಬಾಲಕಿ ಆರಂಭದಲ್ಲಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಳು, ಆದರೆ ವಿಚಾರಣೆಯ ನಂತರ ಅವಳು ತನ್ನ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರು ಆಕೆಯ ಕುಟುಂಬವನ್ನು ಸಂಪರ್ಕಿಸಿದಾಗ ಸಂತ್ರಸ್ತೆಯ ಪೋಷಕರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಲಕಿ ಈ ಹಿಂದೆಯೂ ಯಾರಿಗೂ ತಿಳಿಸದೆ ಮನೆಯಿಂದ ಓಡಿ ಹೋಗಿದ್ದಳು ಎಂದು ಪೊಲೀಸರಿಗೆ ತಿಳಿಸಲಾಗಿದೆ. ಆದರೆ, ಪ್ರತಿ ಬಾರಿಯೂ ಮಾಹಿತಿ ಪಡೆದು ಮನೆಯವರು ಆಕೆಯನ್ನು ಮನೆಗೆ ಕರೆತಂದಿದ್ದರು. ಮನೆ ಬಿಟ್ಟು ಬಂದಿದ್ದ ಆಕೆಗೆ ಕಂಡಕ್ಟರ್ ಡೆಹ್ರಾಡೂನ್‌ಗೆ ತನ್ನ ಬಸ್ ಹತ್ತಲು ಸಲಹೆ ನೀಡಿದರು. ನಂತರ ಅವಳು ಪಂಜಾಬ್‌ಗೆ ಇನ್ನೊಂದು ಬಸ್‌ನಲ್ಲಿ ಹೋಗಬಹುದು ಎಂದು ಆತ ಹೇಳಿದ್ದ. ಆಕೆ ಒಂಟಿಯಾಗಿರುವುದನ್ನು ಕಂಡು ತನ್ನ ಜೊತೆಗಿದ್ದವರ ಜೊತೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.

ಬಸ್ ಡೆಹ್ರಾಡೂನ್ ತಲುಪಿದ ನಂತರ ಎಲ್ಲಾ ಪ್ರಯಾಣಿಕರು ಬಸ್​ನಿಂದ ಇಳಿದರು. ಆಗ ಆ ಬಾಲಕಿ ಪಂಜಾಬ್​ನ ಬಸ್ ಎಲ್ಲಿ ಬರುತ್ತದೆ ಎಂದು ಕೇಳಲು ಬಂದಿದ್ದ ಆಕೆಯ ಮೇಲೆ ಕಂಡಕ್ಟರ್ ಹಾಗೂ ಡ್ರೈವರ್ ಬಸ್​ನಲ್ಲಿಯೇ ಅತ್ಯಾಚಾರ ನಡೆಸಿದ್ದಾರೆ. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಬಸ್‌ಗಳ ಚಾಲಕರಾದ ರವಿ ಮತ್ತು ರಾಜ್‌ಪಾಲ್‌ಗೆ ಈ ವಿಷಯ ತಿಳಿದು ಅವರು ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಹಣ ಠೇವಣಿ ಇಡಲು ಹೋಗಿ ಕ್ಯಾಷಿಯರ್ ಸೋಂಕರ್‌ಗೆ ವಿಷಯ ತಿಳಿಸಿದ ಬಳಿಕ ಆತನೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ