Crime News: ಎಂಥಾ ಕ್ರೌರ್ಯ: ಪ್ರಿಯಕರನ ಮದುವೆ ನಿಲ್ಲಿಸಲು ಬಾಲಕನ ಹತ್ಯೆಗೈದ ಪ್ರಿಯತಮೆ..!

Crime News In Kannada: ಇಂತಹದೊಂದು ಮರ್ಡರ್ ಮಿಸ್ಟರಿಯನ್ನು ಭೇದಿಸಿದ್ದು ರಾಜಸ್ಥಾನದ ಜೋಧ್​ಪುರದ ಪಿಪಾಡ್ ತಹಸಿಲ್‌ನ ಪೊಲೀಸರು. ಆಕೆಯ ಹೆಸರು ರಾಜೂರಾಮ ದೇವಸಿ. ಆಕೆಗೂ ಅದೇ ಗ್ರಾಮದ ದಿನೇಶ್​ಗೂ ಪ್ರೇಮಂಕುರವಾಗಿತ್ತು.

Crime News: ಎಂಥಾ ಕ್ರೌರ್ಯ: ಪ್ರಿಯಕರನ ಮದುವೆ ನಿಲ್ಲಿಸಲು ಬಾಲಕನ ಹತ್ಯೆಗೈದ ಪ್ರಿಯತಮೆ..!
ಸಾಂದರ್ಭಿಕ ಚಿತ್ರ
Follow us
| Updated By: ಝಾಹಿರ್ ಯೂಸುಫ್

Updated on: Feb 05, 2022 | 8:03 PM

ಪ್ರೀತಿ ಕುರುಡು…ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ…ಇಂತಹ ಹಲವಾರು ಡೈಲಾಗ್​ಗಳು ನೀವು ಕೂಡ ಕೇಳಿರುತ್ತೀರಿ. ಈ ಡೈಲಾಗ್​ಗಳನ್ನು ಕೇಳುತ್ತಲೇ ನೀವು ಕೂಡ ಪ್ರೇಮಲೋಕದಲ್ಲಿ ತೇಲಾಡುವ ಪ್ರೇಮಿಗಳನ್ನೂ ಕೂಡ ನೋಡಿರುತ್ತೀರಿ. ಮತ್ತೊಂದೆಡೆ ಪ್ರೀತಿ ಮಧುರ…ತ್ಯಾಗ ಅಮರ ಎಂದೇಳುವ ನೈಜ ಪ್ರೇಮಿಗಳು ಕೂಡ ನಿಮ್ಮ ಕಣ್ಮುಂದೆ ಕಂಡಿರಬಹುದು. ಆದರೆ ಇಲ್ಲೊಬ್ಬಳು ಪ್ರೇಮಿಯಿದ್ದಾಳೆ. ಈಕೆಯ ಕಥೆ ಮಾತ್ರ ತುಂಬಾ ವಿಚಿತ್ರ. ಯಾಕೆಂದರೆ ಈಕೆ ತನ್ನ ಪ್ರಿಯತನನ್ನು ಪಡೆಯಲು ಕೊಲೆ ಮಾಡಿದ್ದಾಳೆ. ಅದು ಕೂಡ ಪುಟ್ಟ ಬಾಲಕನೊಬ್ಬನನ್ನು. ಆದರೆ ಈ ಪಾಗಲ್ ಪ್ರೇಮಿ ಅದಾಗಲೇ ವಿವಾಹಿತೆ ಎಂಬುದೇ ಇಲ್ಲಿ ಮತ್ತೊಂದು ಅಚ್ಚರಿ.

ಹೌದು, ಇಂತಹದೊಂದು ಮರ್ಡರ್ ಮಿಸ್ಟರಿಯನ್ನು ಭೇದಿಸಿದ್ದು ರಾಜಸ್ಥಾನದ ಜೋಧ್​ಪುರದ ಪಿಪಾಡ್ ತಹಸಿಲ್‌ನ ಪೊಲೀಸರು. ಆಕೆಯ ಹೆಸರು ರಾಜೂರಾಮ ದೇವಸಿ. ಆಕೆಗೂ ಅದೇ ಗ್ರಾಮದ ದಿನೇಶ್​ಗೂ ಪ್ರೇಮಂಕುರವಾಗಿತ್ತು. ಆದರೆ ಕೆಲ ದಿನಗಳ ಹಿಂದೆ ದಿನೇಶ್ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದ. ಅತ್ತ ದೇವಸಿ ಅದಾಗಲೇ ಮದುವೆಯಾಗಿರುವ ಕಾರಣ ಆಕೆಯನ್ನು ಅರ್ಧದಲ್ಲೇ ಕೈಬಿಟ್ಟಿದ್ದ.

ಆದರೆ ದೇವಸಿ ದಿನೇಶ್​ನನ್ನು ಮದುವೆಯಾಗುವ ತುಡಿತದಲ್ಲಿದ್ದಳು. ಎಲ್ಲಿ ದಿನೇಶ್ ಬೇರೆಯೊಬ್ಬಳನ್ನು ಮದುವೆಯಾಗಿ ದೂರವಾಗಲಿದ್ದಾನೆ ಎಂಬುದು ಗೊತ್ತಾಯ್ತೊ, ಆಗಲೇ ದೇವಸಿ ಕೂಡ ಮದುವೆ ನಿಲ್ಲಿಸಲು ಬೇಕಾದ ಪ್ಲ್ಯಾನ್​ಗಳನ್ನು ರೂಪಿಸಲಾರಂಭಿಸಿದ್ದಳು. ಅದರಂತೆ ಫೆಬ್ರವರಿ 12 ರಂದು ದಿನೇಶ್ ಮನೆಯಲ್ಲಿ ವಿವಾಹ ಪೂರ್ವ ಶುಭ ಕಾರ್ಯ ನಡೆಯಬೇಕಿತ್ತು. ಇದನ್ನರಿತ ದೇವಸಿ ತನ್ನ ಪ್ರಿಯಕರ ದಿನೇಶ್​ನ 12 ವರ್ಷದ ಸೋದರಳಿಯ ನರೇಶ್​ನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಅಷ್ಟೇ ಅಲ್ಲದೆ ಆ ಬಾಲಕನನ್ನು ಬರ್ಬರವಾಗಿ ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪಿಪಾಡ್ ತಹಸಿಲ್‌ನ ಸಾಥಿಯೆನ್ ಗ್ರಾಮದ ನದಿಯ ಬಳಿ ಎಸೆದಿದ್ದಾಳೆ. ಇಲ್ಲೂ ಕೂಡ ದೇವಸಿ ತನ್ನ ಚಾಣಾಕ್ಷತೆಯನ್ನು ಮರೆದಿದ್ದಳು.

ಅದೇನೆಂದರೆ ಬಾಲಕನನ್ನು ಹತ್ಯೆಗೈದು ಚೀಲದಲ್ಲಿ ತುಂಬಿಸುವಾಗ ಬೇಗನೆ ಎಲ್ಲರಿಗೂ ಗೊತ್ತಾಗಲಿ ಎಂದು ಕಾಲುಗಳನ್ನು ಹೊರಗೆ ಹಾಕಿದ್ದಳು. ಇತ್ತ ಮನೆಯವರು ನರೇಶ್ ಕಾಣುತ್ತಿಲ್ಲ ಎಂದು ಹುಡುಕಾಡುತ್ತಿದ್ದ ವೇಳೆ ನದಿಯ ತೀರದಲ್ಲಿ ಪ್ಲಾಸ್ಟಿಕ್​ ಚೀಲದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಅಲ್ಲಿಗೆ ದೇವಸಿ ಅಂದುಕೊಂಡಂತೆ ಎಲ್ಲವೂ ನಡೆಯಿತು. ಏಕೆಂದರೆ ದಿನೇಶ್ ಮನೆಯಲ್ಲಿ ಶುಭಕಾರ್ಯ ನಡೆಯುವ ಸಂದರ್ಭದಲ್ಲಿ ಅಪಶಕುನ ಸಂಭವಿಸಿದರೆ ಮದುವೆ ನಡೆಯಲ್ಲ ಎಂಬುದು ದೇವಸಿಗೆ ಚೆನ್ನಾಗಿ ಗೊತ್ತಿತ್ತು.

ಅದರಂತೆ ಮನೆಯಲ್ಲಿ ನಡೆಯಬೇಕಿದ್ದ ಶುಭಕಾರ್ಯ ಕ್ಯಾನ್ಸಲ್​ ಆಗುವ ಹಂತಕ್ಕೆ ಬಂದು ನಿಂತಿದೆ. ಇತ್ತ ಅಂತಹ ಸಂದರ್ಭಕ್ಕಾಗಿ ದೇವಸಿ ಕೂಡ ಹೊಂಚು ಹಾಕಿ ಕಾದು ಕೂತಿದ್ದಳು. ಆದರೆ ಕಥೆಯಲ್ಲಿ ಟ್ವಿಸ್ಟ್ ನಡೆದಿದ್ದೇ ಆಗ. ಏಕೆಂದರೆ ಬಾಲಕನ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಯಾಲ್ ಅವರ ನಿರ್ದೇಶನದ ಮೇರೆಗೆ ಇಡೀ ಗ್ರಾಮಸ್ಥರ ವಿಚಾರಣೆಗಾಗಿ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.

ಹೀಗೆ ನರೇಶ್​ ಎಲ್ಲಿ ಆಡುತ್ತಿದ್ದ, ಯಾವ ಕಡೆ ಹೋಗಿದ್ದ ಪ್ರತಿಯೊಂದು ಮಾಹಿತಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಇದೇ ವೇಳೆ ದೇವಸಿಯ ಪತಿ ಸಂತೋಷ್ ನರೇಶ್​ನನ್ನು ತನ್ನ ಪತ್ನಿ ಕರೆದುಕೊಂಡು ಬಂದಿದ್ದಳು ಎಂಬ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ. ಆದರೆ ಆ ಬಳಿಕ ಬಾಲಕ ಎಲ್ಲಿ ಹೋಗಿದ್ದಾನೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ರಾಜೂರಾಮ ದೇವಸಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ದೇವಸಿ ಒಂದೊಂದೇ ವಿಚಾರಗಳನ್ನು ಬಾಯಿ ಬಿಡುತ್ತಾ ಹೋಗಿದ್ದಾಳೆ. ಅಂತಿಮವಾಗಿ ಬಾಲಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದಕ್ಕೆ ನೀಡಿದ ಕಾರಣ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾದರು. ಏಕೆಂದರೆ ಮದುವೆಯಾಗಲು ಹೊರಟಿದ್ದ ಪ್ರಿಯತಮನಿಗಾಗಿ ನಾನು ಈ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ. ಈ ಮೂಲಕ ಮದುವೆ ನಿಲ್ಲಿಸಲು ಪ್ಲ್ಯಾನ್ ರೂಪಿಸಿದ್ದೆ ಎಂದು ತನ್ನೆಲ್ಲಾ ಎಲ್ಲೆ ಮೀರಿದ ಕ್ರೌರ್ಯವನ್ನು ಖತರ್ನಾಕ್ ದೇವಸಿ ಒಪ್ಪಿಕೊಂಡಿದ್ದಾಳೆ. ಇದೀಗ ಪ್ರಿಯಕರ ಬೆಚ್ಚನೆಯ ಎದೆಯ ಮೇಲೆ ಮಲಗಬೇಕೆಂಬ ಆಸೆಯಲ್ಲಿ ಕೊಲೆ ಮಾಡಿದ ದೇವಸಿ ಜೈಲು ಸೇರಿ ತಣ್ಣನೆಯ ಚಾಪೆಯಲ್ಲಿ ಮುದುಡಿಕೊಂಡಿದ್ದಾಳೆ. ಹೌದು, ಪ್ರೀತಿ ಕುರುಡು ನಿಜ..!

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್