
ತುಮಕೂರು, ಮಾರ್ಚ್ 14: ಆ ಕೊಲೆ ಇಡಿ ಊರನ್ನೇ ಬೆಚ್ಚಿಬೀಳಿಸಿತ್ತು. ಒಂಟಿಯಾಗಿ ವಾಸವಿದ್ದ ವೃದ್ಧೆಯ ಸಾವು (kill) ಹತ್ತಾರು ಅನುಮಾನ ಹುಟ್ಟುಹಾಕಿತ್ತು. ಮನೆ ಬಾಗಿಲು ತೆಗೆದ ಪೊಲೀಸರಿಗೆ ಶವದ ಸುತ್ತ ಚೆಲ್ಲಿದ ಖಾರದ ಪುಡಿ, ಮದ್ಯದ ಬಾಟಲ್ಗಳು ದರೋಡೆಕೋರರ ಕಥೆ ಹೇಳುತ್ತಿದ್ದರೆ, ಹಂತಕ ಬಿಟ್ಟು ಹೋಗಿದ್ದ ಅದೊಂದು ಕ್ಲ್ಯೂ ಪರಿಚಯಸ್ಥನಿಂದಲೇ ನಡೆದ ಕೃತ್ಯ ಎನ್ನುವುದು ಬಯಲು ಮಾಡಿತ್ತು.
ಮಾರ್ಚ್ 10ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜಿನಿ ಗ್ರಾಮದಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಒಂಟಿಯಾಗಿ ವಾಸವಿದ್ದ ನಾಗಮ್ಮ ಎಂಬ ವೃದ್ಧೆ ತನ್ನ ಮನೆಯೊಳಗೆ ಕೊಲೆಯಾಗಿದ್ದರು. ಬೀಗ ಹಾಕಿದ್ದ ಮನೆಯೊಳಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದ ಶವದ ಮೇಲೆ ಖಾರದ ಪುಡಿ ಎರಚಲಾಗಿತ್ತು. ಮನೆಯ ಹಿತ್ತಲಿನ ಜಾಗದಲ್ಲಿ ಮದ್ಯದ ಬಾಟಲ್ ಹಾಗೂ ಮೂರು ಗ್ಲಾಸ್ಗಳನ್ನು ಇಡಲಾಗಿತ್ತು. ಜೊತೆ ಅಪರಿಚಿತರ ಚಪ್ಪಲಿ ಮನೆ ಬಾಗಿಲ ಮುಂದಿತ್ತು. ಇದನ್ನು ಕಂಡವರು ಯಾರೋ ಮೂವರು ದರೋಡೆಕೋರರು ಸಂಚು ಮಾಡಿ ಮನೆ ದೋಚುವಾಗ ವೃದ್ಧೆಯ ಹತ್ಯೆಗೈದ ಅನುಮಾನ ಮೂಡಿತ್ತು. ಇದೇ ಮಾದರಿ ಪ್ರಕರಣ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು, ತನಿಖೆ ವೇಳೆ ಸಿಕ್ಕ ಅದೊಂದು ಕ್ಲ್ಯೂನಿಂದ ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ ಎಂಬುವುದನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ಮುತ್ತುರಾಜ್ ಬಂಧಿತ ಆರೋಪಿ. ಮುತ್ತುರಾಜ್ ಉಜ್ಜಿನಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ. ಜೊತೆಗೆ ಸ್ಥಳೀಯ ಸಂಘ ಸಂಸ್ಥೆಯೊಂದರಲ್ಲಿ ಪ್ರಸ್ತುತ ಸಕ್ರಿಯ ವ್ಯಕ್ತಿ. ರಾಜಕೀಯವಾಗಿ ಗುರುತಿಸಿಕೊಂಡಿರುವ ಈತನಿಗೆ ಜೂಜಾಟದ ಚಟ. ಈ ಚಟದಿಂದಲೇ ತನ್ನ ಬಳಿ ಇದ್ದ ಹಣ ಎಲ್ಲಾ ಕಳೆದುಕೊಂಡು ಬರೋಬ್ಬರಿ ಒಂದುವರೆ ಕೋಟಿ ರೂ ಸಾಲ ಮಾಡಿಕೊಂಡಿದ್ದಾನಂತೆ.
ಇದನ್ನೂ ಓದಿ: ವೈಯರ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!
ಒಂದು ಕಾಲದಲ್ಲಿ ಉತ್ತಮ ರೇಷ್ಮೆ ಕೃಷಿಕನಾಗಿದ್ದ ಈತ. ನಂತರದಲ್ಲಿ ಕುಡಿತಕ್ಕೆ ದಾಸನಾಗಿದ್ದ. ಈ ಹಿಂದೆ ಇದೇ ರೀತಿ ನಾಗಮ್ಮ ಬಳಿ 50 ಸಾವಿರ ರೂ ಸಾಲ ಪಡೆದಿದ್ದ. ಈತ ಒಂದುವರೆ ವರ್ಷ ಕಳೆದರೂ ಹಣ ವಾಪಾಸ್ ನೀಡಿರಲಿಲ್ಲ. ಇದೇ ವಿಚಾರಕ್ಕೆ ಒಮ್ಮೆ ಕ್ಲಾಸ್ ತೆಗೆದುಕೊಂಡಿದ್ದ ನಾಗಮ್ಮ ಬಡ್ಡಿ ಬಿಟ್ಟು ಬಾಕಿ ಇರುವ ಅಸಲನ್ನೇ ಕೊಟ್ಟು ಬಿಡು ಎಂದಿದ್ದರು. ಆದರೆ ಹಣ ಕೊಡಲು ಪರದಾಡಿದ ಈತ ಆಕೆಯ ಮೈಮೇಲಿದ್ದ ಚಿನ್ನದ ಆಭರಣದ ಮೇಲೆ ಕಣ್ಣು ಹಾಕಿದ್ದ. ಅದರಂತೆ ಒಂದು ವಾರ ಯೋಚಿಸಿ ಸಿನಿಮಾ ಮಾದರಿ ಪ್ಲ್ಯಾನ್ ಮಾಡಿ ವೃದ್ಧೆ ಹತ್ಯೆಗೈದಿದ್ದ.
ತಾನೇ ವೃದ್ಧೆಗೆ ಕರೆ ಮಾಡಿ ಬಾಕಿ ಹಣ ಕೊಡುವುದಾಗಿ ಹೇಳಿ ಸೋಮವಾರ ಸಂಜೆ 7 ಗಂಟೆಗೆ ಬಂದಿದ್ದ ಮುತ್ತುರಾಜ್, ಮನೆ ಬಳಿ ಯಾರು ಇಲ್ಲದನ್ನು ಗಮನಿಸಿದ್ದ. ನಂತರ ಮನೆ ಒಳಗೆ ಬಂದು ಮಾತು ಆರಂಭಿಸಿದ ಎರಡು ನಿಮಿಷದಲ್ಲೇ ಆಕೆ ಮೇಲೆ ಹಲ್ಲೆ ಮಾಡಿ ಬಳಿಕ ಸೀರೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದ. ನಂತರ ದರೋಡೆಕೋರರ ಕೃತ್ಯದಂತೆ ಬಿಂಬಿಸಲು ಮನೆಯಲ್ಲಿ ಖಾರದ ಪುಡಿ ಎರಚಿ, ರಸ್ತೆಯಲ್ಲಿ ಬಿದಿದ್ದ ಮದ್ಯದ ಬಾಟಲ್, ಗ್ಲಾಸ್ಗಳನ್ನಿಟ್ಟು ಕಥೆ ಸೃಷ್ಟಿಸಿ ಪರಾರಿಯಾಗಿದ್ದ. ಆದರೆ ಈ ವೇಳೆ ತಾನೇ ಮನೆ ಬೀಗ ಹಾಕಿಕೊಂಡು ಹೋಗಿದ್ದು, ಇದು ಪರಿಚಯಸ್ಥನ ಕೃತ್ಯ ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತು.
ಇದನ್ನೂ ಓದಿ: 76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ
ಇನ್ನು ಕೃತ್ಯ ಬಳಿಕ ಚಿನ್ನವನ್ನು ತನ್ನೂರಿನ ತೋಟದ ತೆಂಗಿನ ಮರದ ಪೊಟರೆಯೊಳಗೆ ಬಚ್ಚಿಟ್ಟಿದ್ದ. ಆದರೆ ಹುಲಿಯೂರುದುರ್ಗ ಪೊಲೀಸರು ಸಿಕ್ಕ ಕ್ಲ್ಯೂ ಆಧರಿಸಿ ತನಿಖೆ ಚುರುಕುಗೊಳಿಸಿದ್ದು, ಕೊಲೆ ಮಾಡಿ ಊರಿನಲ್ಲೇ ಓಡಾಡಿಕೊಂಡಿದ್ದ ಹಂತಕನನ್ನು ಬಂಧಿಸಿದ್ದಾರೆ. ಸದ್ಯ ನಾಗಮ್ಮಗೆ ಕೊಡಬೇಕಾದ ಬಾಕಿ ಹಣ ಕೊಡಲಾಗದೇ ಕೊಲೆ ಮಾಡಿದ್ದು, ತನಗೆ ಅವಶ್ಯಕವಾಗಿದ್ದ ಜೂಜಾಟಕ್ಕೆ ಹಾಗೂ ಬೇರೊಬ್ಬರ ಬಳಿ ಪಡೆದಿದ್ದ ಸಾಲ ತೀರಿಸಲು ಕೃತ್ಯ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಆದರೆ ಇದನ್ನು ಹೊರತು ಪಡಿಸಿ ಬೇರೆ ಕಾರಣ ಇತ್ತಾ ಎನ್ನುವುದನ್ನು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.