ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಅಳಿಯನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ

ಪತಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ, ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ನಡೆದಿದೆ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಅಳಿಯನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ  ಪತ್ನಿ
ಕೊಲೆಯಾದ ಚೌಡಪ್ಪ
Follow us
| Updated By: ವಿವೇಕ ಬಿರಾದಾರ

Updated on: Nov 13, 2022 | 9:26 PM

ಹೆಣ್ಣು ಕೊಟ್ಟ ಮಾವ, ಕಣ್ಣು ಕೊಟ್ಟ ದೇವರಿಗೆ ಸಮಾನ. ಆದರೆ ಇಲ್ಲಿ ಅಳಿಯ ಹೆಣ್ಣು ಕೊಟ್ಟ ಮಾವನನ್ನೇ ಕೊಲೆ ಮಾಡಿದ್ದಾನೆ. ಹೌದು ನವೆಂಬರ್​ 3 ರಂದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ-ವರದಾಪುರ ಮಾರ್ಗದ ಪಕ್ಕದಲ್ಲಿನ ಜಮೀನಿನ ಬಳಿ ಶವವೊಂದು ಪತ್ತೆಯಾಗಿತ್ತು. ಆ ಶವ ಹಂಪಾಪಟ್ಟಣದ ಸೊಪ್ಪಿನ ಚೌಡಪ್ಪನದಾಗಿತ್ತು. ಚೌಡಪ್ಪ ಶವವಾಗಿ ಪತ್ತೆಯಾಗಿದ್ದು ಊರ ತುಂಬ ಸುದ್ದಿ ಹಬ್ಬುತ್ತಿದ್ದಂತೆ ಇಡಿ ಊರಿನ ಜನರೇ ಅಲ್ಲಿ ಸೇರಿದ್ದರು.

ಜನರು ಚೌಡಪ್ಪನ ಶವ ಕಂಡು ಜನರು ಮಮ್ಮಲ ಮರುಗಿದರು. ಚೌಡಪ್ಪ ಹಂಪಾಪಟ್ಟಣದಲ್ಲಿ ಕಿರಾಣಿ ಅಂಗಡಿಯಿಟ್ಟುಕೊಂಡಿದ್ದನು. ಹಾಗೇ ಸಣ್ಣದಾಗಿ ಬಡ್ಡಿ ವ್ಯವಹಾರ ಕೂಡ ಮಾಡುತ್ತಿದನು. ಹೀಗಾಗಿ ಚೌಡಪ್ಪನಿಂದ ಸಾಲ ಪಡೆದವರೇ ಬಡ್ಡಿ ಕಟ್ಟಲಾಗದೆ ಕೊಲೆ ಮಾಡಿದ್ದಾರೆ ಎಂದು ಗುಸು ಗುಸು ಮಾತುಗಳನ್ನು ಆಡಲು ಪ್ರಾರಂಭಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚೌಡಪ್ಪನ ಪತ್ನಿ ಸುಧಾ ಗಂಡನ ಶವದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದಳು. ನನ್ನ ಗಂಡನನ್ನು ಯಾರೋ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾರೆಂದು ಗೋಗರೆಯುತ್ತಾ ಆರೋಪ ಮಾಡಿದಳು, ಹೀಗೆ ಪೊಲೀಸರಿಗೆ ದೂರು ನೀಡಿದಳು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸದರು.

ಸುಧಾ ಸೋದರ ಮಾವನ ಮಗನಾದ ಚೌಡಪ್ಪನನ್ನು ಮದುವೆಯಾಗಿದ್ದಾಳೆ. ಈ ದಂಪತಿಗೆ ಎದೆಯೆತ್ತರಕ್ಕೆ ಬೆಳೆದಿರುವ ಇಬ್ಬರು ಮಕ್ಕಳಿದ್ದಾರೆ. ಪತಿ ಚೌಡಪ್ಪ ಸಮಾಜ ಸೇವೆ ಮಾಡುತ್ತಾ, ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದನು. ಹೀಗೆ ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಸುಧಾಗೆ ಅದೇನು ತಿಳಿಯಿತು ಏನು ಕೆಟ್ಟದಾರಿ ಹಿಡಿದಿದ್ದಾಳೆ. ಅದು ತನ್ನ ಮೈದುನನ ಮಗಳನ್ನು ಮದುವೆಯಾಗಿದ್ದ ಅಳಿಯ ದುರಗುಪ್ಪ ಮೇಲೆ ಮೋಹಿತಳಾಗಿದ್ದಾಳೆ.

ದುರ್ಗಪ್ಪ ಹಂಪಾಪಟ್ಟಣ ಗ್ರಾಮದಲ್ಲಿ ಕಿರಾಣಿ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದನು. ಆಗಾಗ ಅತ್ತೆ ಮಾವನ ಮನೆಗೆ ಬಂದು ಹೋಗುತ್ತಿದ್ದನು. ಹೀಗೆ ಬಂದು ಹೋಗುತ್ತಿದ್ದ ಅಳಿಯ ಅತ್ತೆ ಸುಧಾಳನ್ನು ತನ್ನ ಬಲೆಗೆ ಕೆಡವಿಕೊಂಡಿದ್ದಾನೆ. ಅಳಿಯನ ಬಲೆಗೆ ಅತ್ತೆ ಬಿದ್ದಿದ್ದು, ಇಬ್ಬರು ಯಾರಿಗೂ ತಿಳಿಯದಂತೆ ರಂಗಿನಾಟವಾಡಲು ಶುರು ಮಾಡಿಕೊಂಡಿದ್ದಾರೆ.

ಇತ್ತ ಮಾವನ ಬಡ್ಡಿ ವ್ಯವಹಾರ ಜೋರಾಗಿದ್ದರೆ, ಅತ್ತ ಅತ್ತೆ ಮತ್ತು ಅಳಿಯನ ಅನೈತಿಕ ಆಟ ಜೋರಾಗಿತ್ತು. ಈ ಸಂಬಂಧ ದಿನಗಳು ಕಳೆದಂತೆ ಜೋರಾಗಿದ್ದು, ನಮ್ಮಿಬ್ಬರ ಆಟಕ್ಕೆ ಎಲ್ಲಿ ಪತಿ ಚೌಡಪ್ಪ ಅಡ್ಡ ಬರುತ್ತಾನೆ, ಅಥವಾ ನಮ್ಮಿಬ್ಬರ ರಂಗಿನಾಟ ತಿಳಿದು ರಂಪಾಟ ಮಾಡುತ್ತಾನೊ ಎಂಬ ಆತಂಕದಿಂದ ಪತ್ನಿ ಸುಧಾ ಒಂದು ಮಾಸ್ಟರ್​ ಪ್ಲ್ಯಾನ್​ ಮಾಡಿದಳು. ಅದು ಪತಿರಾಯನ ಕೊಲೆ..!

ತನ್ನ ಗಂಡನನ್ನು ಯಾರೇ ಕೊಲೆ ಮಾಡಿದರೂ ಅದು ಬಡ್ಡಿ ವ್ಯವಹಾರಕ್ಕಾಗಿ ನಡೆದ ಕೊಲೆಯಾಗಿರಬೇಕು. ಹಾಗೆ ಮರ್ಡರ್ ಮಾಡಿಸಬೇಕು ಅಂತಾ ಸುಧಾ, ಅಳಿಯ ದುರ್ಗಪ್ಪನ ಜೊತೆ ಸೇರಿ ಸ್ಕೆಚ್​ ಹಾಕಿದ್ದಳು. ನಂತರ ದುರಗಪ್ಪ ಅತ್ತೆಯ ಮಾತಿನಿಂತೆ ಮಾವ ಚೌಡಪ್ಪನಿಂದ ಬಡ್ಡಿ ಸಾಲ ಪಡೆದಿದ್ದ ಸುನೀಲ ಎಂಬಾತನಿಗೆ ಸುಪಾರಿ ಕೊಟ್ಟಿದ್ದನು. ಸುನೀಲ್​, ಸೊಪ್ಪನ ಚೌಡಪ್ಪನಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದನು.

ಬಳಿಕ ಸುನೀಲ್ ತನ್ನ ಸ್ನೇಹಿತರಾದ ಶಿವು. ವಾಸು ಜೊತೆಗೂಡಿ ಮರ್ಡರ್ ಮಾಡೋಕೆ ಮಹೂರ್ತ ನಿಗದಿ ಮಾಡಿದರು. ನವೆಂಬರ್ 2ರಂದು ಸಂಜೆ ಮರಿಯಮ್ಮನಹಳ್ಳಿಗೆ ಕಿರಾಣಿ ಸಾಮಾಗ್ರಿಗಳನ್ನು ತರಲು ತೆರಳಿದ್ದ ಸೊಪ್ಪಿನ ಚೌಡಪ್ಪ ಬೈಕ್​ನಲ್ಲಿ ರಾತ್ರಿ ಮರಳಿ ಊರಿಗೆ ಬರುತ್ತಿದ್ದನು. ಈ ವೇಳೆ ಸುನೀಲ. ವಾಸು. ಶಿವು ಮತ್ತು ದುರಗಪ್ಪ ರಸ್ತೆಯಲ್ಲಿ ಅಡ್ಡಗಟ್ಟಿದ್ದರು. ನಂತರ ಕಟ್ಟಿಗೆಗಳಿಂದ ಬಲವಾಗಿ ತೆಲೆಗೆ ಹೊಡೆದು ರಸ್ತೆಯ ಪಕ್ಕದ ಕಾಲುವೆಯಲ್ಲಿ ಬಿಸಾಕಿ ಹೋಗಿದ್ದರು.

ನವಂಬರ್ 3 ರಂದು ಬೆಳ್ಳಿಗ್ಗೆ ರಸ್ತೆಯ ಬಳಿ ಶವ ಕಂಡವರು ಮಮ್ಮಲ ಮರುಗಿದ್ದ ಪತ್ನಿ ಸುಧಾ ಯಾರೋ ತನ್ನ ಗಂಡನನ್ನು ಬಡ್ಡಿ ವ್ಯವಹಾರ ವೈಷಮ್ಯದಿಂದ ಕೊಲೆ ಮಾಡಿದ್ದಾರೆಂದು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಆದರೆ ತನಿಖೆಗೆ ಇಳಿದ ಹಗರಿಬೊಮ್ಮನಹಳ್ಳಿ ಪೊಲೀಸರು 24 ಗಂಟೆಯಲ್ಲೇ ಅತ್ತೆ ಮತ್ತು ಅಳಿಯನ ನಡುವಿನ ರಂಗಿನಾಟವನ್ನು ಪತ್ತೆ ಮಾಡಿದ್ದರು. ಆಗ ಅಳಿಯ ದುರಗಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವನ್ನು ಕಕ್ಕಿಬಿಟ್ಟಿದ್ದನು.

ಅತ್ತೆ ಸುಧಾಳನ್ನು ವಿಚಾರಣೆ ಮಾಡುತ್ತಿದ್ದಂತೆ ಅಳಿಯನ ಜೊತೆಗೂಡಿ ಗಂಡನ ಕೊಲೆಗೆ ಸುಪಾರಿ ನೀಡಿದ್ದು ಸತ್ಯ. ಅಳಿಯನ ಜೊತೆ ಅನೈತಿಕ ಸಂಬಂಧ ಇರೋದು ನಿಜವೆಂದು ಸುಧಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ದುರಗಪ್ಪನ ಜೊತೆಗೂಡಿ ಬಡ್ಡಿ ಪಡೆದ ಹಣವನ್ನು ಮರುಳಿಸಲಾಗದೆ, ಚೌಡಪ್ಪನನ್ನ ಹತ್ಯೆ ಮಾಡಿದ ಸುನೀಲ್. ಶಿವು. ವಾಸು ಪರಾರಿಯಾಗಿದ್ದಾರೆ. ಪ್ರಸ್ತುತ ಅತ್ತೆ ಸುಧಾ. ಅಳಿಯ ದುರಗಪ್ಪನನ್ನು ಬಂಧಿಸಿರುವ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇನ್ನು ಪರಾರಿಯಾಗಿರುವ ಮೂವರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ವರದಿ- ವಿರೇಶ್​ ದಾನಿ ಟಿವಿ9 ಬಳ್ಳಾರಿ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ