NEET-UG Topper Aryan Gupta: ನೀಟ್-ಯುಜಿ ಟಾಪರ್ ಆರ್ಯನ್ ಗುಪ್ತ ಯಶೋಗಾಥೆ; ಅಜ್ಜಿಯನ್ನು ಬಲಿ ಪಡೆದ ಕ್ಯಾನ್ಸರ್ ವಿರುದ್ಧ ಹೋರಾಡಲು ವೈದ್ಯನಾಗುವ ಸಂಕಲ್ಪ
ನೀಟ್-ಯುಜಿ 2026 ಪರೀಕ್ಷೆಯಲ್ಲಿ ಪಂಜಾಬ್ನ ಆರ್ಯನ್ ಗುಪ್ತ 715 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಆರ್ಯನ್ ಅವರ ಯಶಸ್ಸಿನ ಹಿಂದಿನ ಅತ್ಯಂತ ಭಾವನಾತ್ಮಕ ಕಥೆ ಅವರ ಅಜ್ಜಿಯ ನೆನಪು. ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ, ನಾಲ್ಕನೇ ಹಂತದ ಕ್ಯಾನ್ಸರ್ನಿಂದ ಅಜ್ಜಿ ಮೃತಪಟ್ಟಿದ್ದರು. ಆ ಘಟನೆ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಕುಟುಂಬದಲ್ಲಿ ಎಲ್ಲರೂ ವೈದ್ಯರಾಗಿದ್ದರೂ, ಅಜ್ಜಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ದಿನವೇ ನಾನು ಭವಿಷ್ಯದಲ್ಲಿ ಕ್ಯಾನ್ಸರ್ ತಜ್ಞನಾಗಿಈ ಮಾರಕ ಕಾಯಿಲೆಯ ವಿರುದ್ಧ ಹೋರಾಡಬೇಕು ಎಂದು ನಿರ್ಧರಿಸಿದೆ," ಎಂದು ಆರ್ಯನ್ ಭಾವುಕರಾಗಿ ತಿಳಿಸಿದ್ದಾರೆ.

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪ್ರತಿಷ್ಠಿತ ನೀಟ್-ಯುಜಿ (NEET-UG) 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಂಜಾಬ್ನ ಲುಧಿಯಾನದ ಆರ್ಯನ್ ಗುಪ್ತ 720ಕ್ಕೆ 715 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR-1) ಸಾಧಿಸಿದ್ದಾರೆ. ವೈದ್ಯಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಆರ್ಯನ್ ಅವರ ತಂದೆ ಡಾ. ಸಚಿನ್ ಗುಪ್ತಾ ಅರಿವಳಿಕೆ ತಜ್ಞರಾಗಿದ್ದು, ತಾಯಿ ಡಾ. ರೀನಾ ಗುಪ್ತಾ ಸ್ತ್ರೀರೋಗ ತಜ್ಞರಾಗಿದ್ದಾರೆ. ಅವರ ಹಿರಿಯ ಸಹೋದರ ಕೂಡ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 54ನೇ ರ್ಯಾಂಕ್ ಪಡೆದು ಪ್ರಸ್ತುತ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
’17 ಗಂಟೆಗಳ ಓದು, ನಿದ್ದೆಯನ್ನೂ ಮರೆತ ಪರಿಶ್ರಮ’:
ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಆರ್ಯನ್, “ಪ್ರತಿದಿನ 16-17 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆಯಿಂದ ಓದುತ್ತಿದ್ದೆ. ಕೆಲವೊಮ್ಮೆ ಸರಿಯಾಗಿ ನಿದ್ದೆಯೂ ಮಾಡುತ್ತಿರಲಿಲ್ಲ. ಈಗ ಫಲಿತಾಂಶ ನೋಡಿದಾಗ ಈ ಯಶಸ್ಸು ಒಂದು ಸುಂದರ ಕನಸಿನಂತೆ ಅನಿಸುತ್ತಿದೆ. ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ” ಎಂದು ಹೇಳಿದ್ದಾರೆ.
ಅಜ್ಜಿಯ ಕ್ಯಾನ್ಸರ್ ಸಾವು ಬದಲಿಸಿತು ಜೀವನದ ಗುರಿ:
ಆರ್ಯನ್ ಅವರ ಯಶಸ್ಸಿನ ಹಿಂದಿನ ಅತ್ಯಂತ ಭಾವನಾತ್ಮಕ ಕಥೆ ಅವರ ಅಜ್ಜಿಯ ನೆನಪು. ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ, ನಾಲ್ಕನೇ ಹಂತದ ಕ್ಯಾನ್ಸರ್ನಿಂದ ಅಜ್ಜಿ ಮೃತಪಟ್ಟಿದ್ದರು. ಆ ಘಟನೆ ಅವರ ಜೀವನದ ದಿಕ್ಕನ್ನೇ ಬದಲಿಸಿತು. “ನಮ್ಮ ಕುಟುಂಬದಲ್ಲಿ ಎಲ್ಲರೂ ವೈದ್ಯರಾಗಿದ್ದರೂ, ಅಜ್ಜಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ದಿನವೇ ನಾನು ಭವಿಷ್ಯದಲ್ಲಿ ಕ್ಯಾನ್ಸರ್ ತಜ್ಞ (Oncologist) ಆಗಿ ಈ ಮಾರಕ ಕಾಯಿಲೆಯ ವಿರುದ್ಧ ಹೋರಾಡಬೇಕು ಎಂದು ನಿರ್ಧರಿಸಿದೆ,” ಎಂದು ಆರ್ಯನ್ ಭಾವುಕರಾಗಿ ತಿಳಿಸಿದ್ದಾರೆ.
‘ಇದು ಆರಂಭ ಮಾತ್ರ, ಗುರಿ ಇನ್ನೂ ದೊಡ್ಡದು’:
ದೇಶದ ಮೊದಲ ರ್ಯಾಂಕ್ ಗಳಿಸಿದ ಸಂತೋಷದ ನಡುವೆಯೂ ತಮ್ಮ ಗುರಿ ಇನ್ನೂ ದೊಡ್ಡದಾಗಿದೆ ಎಂದು ಆರ್ಯನ್ ಹೇಳಿದ್ದಾರೆ. “ಜೀವನದಲ್ಲಿ ಸಾಧಿಸಬೇಕಿರುವುದು ಇನ್ನೂ ತುಂಬಾ ಇದೆ. ಆದರೆ ಸದ್ಯಕ್ಕೆ ಈ ಯಶಸ್ಸು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ” ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಕನಸು ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಆರ್ಯನ್ ಗುಪ್ತ ಅವರ ಯಶೋಗಾಥೆ ದೇಶದ ಲಕ್ಷಾಂತರ ನೀಟ್ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




