UPSC ಫಲಿತಾಂಶ ಪ್ರಕಟ: ಹಾವೇರಿ ವೈದ್ಯನಿಗೆ 41ನೇ ರ್ಯಾಂಕ್, ಪಾಸಾದ ಕನ್ನಡಿಗರ ಪಟ್ಟಿ ಇಲ್ಲಿದೆ
UPSC Result 2024: ಕೇಂದ್ರ ಲೋಕಸೇವಾ ಆಯೋಗ 2024ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಯಾಗ್ರಾಜ್ ನಿವಾಸಿ ಶಕ್ತಿ ದುಬೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇನ್ನು, ಕರ್ನಾಟಕದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳೂ ಕೂಡ ರ್ಯಾಂಕ್ ಪಡೆದಿದ್ದಾರೆ. ಹಾಗಿದ್ದರೆ ಯಾವ್ಯಾವ ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಂಕ್ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಏಪ್ರಿಲ್ 22: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಯಾಗ್ರಾಜ್ ನಿವಾಸಿ ಶಕ್ತಿ ದುಬೆ ಪ್ರಥಮ ಱಂಕ್ ಗಳಿಸಿದ್ದಾರೆ. ಹಾಗೆ, ಕರ್ನಾಟಕ ಹಲವು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ತಮ್ಮೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಸಚಿನ್ ಗುತ್ತೂರು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಿರುವ ಸಚಿನ್ ಬಸವರಾಜ ಗುತ್ತೂರ ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಇನ್ನು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ 529ನೇ ರ್ಯಾಂಕ್ ಪಡೆದಿದ್ದಾರೆ. ಪಾಡುರಂಗ ಅವರು ಕಳೆದ ಒಂದು ವರ್ಷದಿಂದ ಐಎಫ್ಎಸ್ನಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಪಾಂಡುರಂಗ ಕಂಬಳಿ ಓರ್ವ ರೈತರ ಪುತ್ರರಾಗಿದ್ದಾರೆ. ಪಾಂಡುರಂಗ ಅವರ ಮನೆಯಲ್ಲಿ ಸಂಭ್ರಮಾಚರಣೆ ನಡೆದಿದೆ.
ಯುಪಿಎಸ್ಸಿಯಲ್ಲಿ ರೈತ ಮಗನ ಸಾಧನೆ
ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ರೈತ ಆನಂದ್ ಹಾಗೂ ಸುಶೀಲಮ್ಮ ದಂಪತಿ ಪುತ್ರ ಎ.ಮಧು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 544ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ ಮಧು ಅವರು ಪದವಿ ಪಡೆದಿದ್ದಾರೆ.
ಯುಪಿಎಸ್ಸಿ 2024 ಕರ್ನಾಟಕ ಟಾಪರ್ಗಳು
- ಆರ್ ರಂಗಮಂಜು – 24
- ಸಚಿನ್ ಹರಿಹರ – 41
- ಅನುಪ್ರಿಯಾ ಸಖ್ಯ – 120
- ಬಿಎಂ ಮೇಘನಾ – 425
- ಮಾಧವಿ ಆರ್ – 446
- ಭರತ್ ಸಿ ಯಾರಂ – 567
- ಭಾನುಪ್ರಕಾಶ್ – 523
- ನಿಖಿಲ್ ಎಂಆರ್- 724
- ಟಿ ವಿಜಯ್ ಕುಮಾರ್ – 894
- ಹನುಮಂತಪ್ಪ ನಂದಿ – 910
- ವಿಶಾಕ ಕದಂ – 962
- ಸಂದೀಪ್ ಸಿಂಗ್ – 981
- ಮೋಹನ್ ಪಾಟೀಲ್ – 984
ಫಲಿತಾಂಶ ನೋಡುವುದು ಹೇಗೆ?
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್ಸಿ ಪರೀಕ್ಷೆಯ ಅಧಿಕೃತ ವೆಬ್ಸೈಟ್- upsc.gov.in ನಲ್ಲಿ ಪರಿಶೀಲಿಸಬಹುದು. ಅಥವಾ upsconline.gov.in ವೈಬ್ಸೈಟ್ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಯುಪಿಎಸ್ಸಿ ಫಲಿತಾಂಶ ಪ್ರಕಟ; ಪ್ರಯಾಗ್ರಾಜ್ನ ಶಕ್ತಿ ದುಬೆ ದೇಶಕ್ಕೆ ನಂ.1
1,009 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸ್ಸು
ವಿವಿಧ ಉನ್ನತ ಹುದ್ದೆಗಳಿಗೆ 1,009 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಸೇರಿದಂತೆ ಕೇಂದ್ರದ ವಿವಿಧ ಹುದ್ದೆಗಳ ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಸಾಮಾನ್ಯ ವರ್ಗ 335, ಆರ್ಥಿಕವಾಗಿ ದುರ್ಬಲ ವರ್ಗದಿಂದ 109, ಒಬಿಸಿ ವರ್ಗದಿಂದ 318 ಅಭ್ಯರ್ಥಿಗಳಿದ್ದಾರೆ. ಪರಿಶಿಷ್ಟ ಜಾತಿಗಳಿಗೆ (SC) 160 ಮತ್ತು ಪರಿಶಿಷ್ಟ ವರ್ಗಗಳಿಗೆ (ST) 87 ಅಭ್ಯರ್ಥಿಗಳು ಸೇರಿದ್ದಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Tue, 22 April 25