AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್​ಮೇಲ್​​ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್

ಚುನಾವಣೆ ಸಮೀಪಿಸುತ್ತಿದ್ದರೂ ಹಾಸನದ ಜೆಡಿಎಸ್ ಟಿಕೆಟ್ ಫೈಟ್ ಮಾತ್ರ ಇನ್ನೂ ನಿಂತಿಲ್ಲ. ಭವಾನಿ ರೇವಣ್ಣ ಮತ್ತು ಕುಮಾರಸ್ವಾಮಿ ನಡುವೆ ಪರೋಕ್ಷ ವಾಕ್ಸಮರ ನಡೆಯುತ್ತಲೇ ಇದೆ. ಈ ನಡುವೆ ಪಕ್ಷೇತರವಾಗಿ ನಿಲ್ಲುತ್ತೇನೆ ಅಂತಾ ಬ್ಲ್ಯಾಕ್​ಮೇಲ್​ ನನ್ನತ್ರ ಮಾಡಲು ಸಾಧ್ಯವಿಲ್ಲ ಎಂದು ಭವಾನಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್​ಮೇಲ್​​ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್
ಹೆಚ್​ ಡಿ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ
Rakesh Nayak Manchi
|

Updated on:Apr 08, 2023 | 8:12 PM

Share

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದರೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್​ ಫೈಟ್ (Hassan JDS Ticket Fight) ಇನ್ನೂ ಮುಗಿದಿಲ್ಲ. ಒಂದೆಡೆ, ತನಗೆ ಟಿಕೆಟ್ ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದು ಭವಾನಿ ರೇವಣ್ಣ (Bhavani Revanna) ಎಚ್ಚರಿಕೆ ನೀಡಿದ್ದರೆ, ಇನ್ನೊಂದೆಡೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಕಾರ್ಯಕರ್ತನಿಗೆ ಟಿಕೆಟ್ ನೀಡುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಈ ಬಗ್ಗೆ ಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ದೇವೇಗೌಡರಿಗೆ (HD Deve Gowda) ಎಮೋಷನಲ್​ ಬ್ಲ್ಯಾಕ್​ಮೇಲ್​ ಮಾಡಬಹುದು. ಆದರೆ ಇದೆಲ್ಲ​​ ನನ್ನ ಹತ್ತಿರ ನಡೆಯುವುದಿಲ್ಲ ಎಂದು ಭವಾನಿ ರೇವಣ್ಣಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಕಾರ್ಯಕರ್ತನಿಗೆ ಟಿಕೆಟ್​ ಅಂತಾ ನಿರಂತರವಾಗಿ ಹೇಳಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಒಬ್ಬ ಕಾರ್ಯಕರ್ತನೇ ಹಾಸನ ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಯಾರು ಸಮರ್ಥವಾಗಿದ್ದಾರೆಂದು ನನಗೂ ಗೊತ್ತು, ನಿಮಗೂ ಗೊತ್ತು. ಕಾರ್ಯಕರ್ತೇ ಯಾರಿಗೆ ಟಿಕೆಟ್ ಅಂತ ಕೂಗುತ್ತಿದ್ದಾರೆ. ತೀರ್ಮಾನ ಆಗಿದೆ. ಸದ್ಯದಲ್ಲೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಆಗುತ್ತದೆ. ನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ. ಎಲ್ಲರನ್ನೂ ಒಂದುಗೂಡಿಸಿ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ. ಯಾವುದೇ ಬ್ಲ್ಯಾಕ್​​ಮೇಲ್​​ಗೆ ಹಿಂದೆ ಸರಿಯಲ್ಲ, ನನಗೆ ಪಕ್ಷ ಮುಖ್ಯ ಎಂದರು.

ಇದನ್ನೂ ಓದಿ: ಹಾಸನ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಏನನ್ನೂ ಹೇಳುವುದಿಲ್ಲ, ಪದೇಪದೆ ಪ್ರಶ್ನಿಸಬೇಡಿ ಎಂದ ಹೆಚ್​ಡಿ ದೇವೇಗೌಡ

ಯಶವಂತಪುರದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಅವರನ್ನು ಭೇಟಿಯಾದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಸ್ವರೂಪ್​ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ನೀವು ಹೇಳಿದವರಿಗೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್​ಗಾಗಿ ಭವಾನಿ ರೇವಣ್ಣ ತೀವ್ರ ಹೋರಾಟ ನಡೆಸುತ್ತಿರುವುದು ಗೊತ್ತೇ ಇದೆ. ರೇವಣ್ಣ ಕುಟುಂಬ ಮತ್ತು ಕುಮಾರಸ್ವಾಮಿ ನಡುವೆ ಟಿಕೆಟ್ ಜಟಾಪಟಿ ನಡೆಯುತ್ತನೇ ಇದೆ. ಇವರನ್ನು ಮನವೋಲಿಸಲು ದಳಪತಿ ಮನೆಯಲ್ಲಿ ಸಂಧಾನಸಭೆ ನಡೆಯುತ್ತಲೇ ಇದೆ. ಆದರೂ ಹಾಸನ ಟಿಕೆಟ್ ಫೈಟ್ ಮುಂದುವರಿದಿದೆ. ಹೀಗಿದ್ದರೂ ಕುಮಾರಸ್ವಾಮಿಯನ್ನು ನಾನು ಯಾವತ್ತೂ ಬಿಟ್ಟುಕೊಡಲ್ಲ ಎಂದು ರೇವಣ್ಣ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Sat, 8 April 23