ಮದರಸಾದಲ್ಲಿ ಓದಿದ ವಿದ್ಯಾರ್ಥಿಗೆ IAS ನಲ್ಲಿ 751ನೇ ರ‍್ಯಾಂಕ್‌​​! UPSC ನಲ್ಲಿ ಹೆಚ್ಚು ಹೆಚ್ಚು ಯಶಸ್ಸು ಕಾಣುತ್ತಿರುವ ಯುವ ಮುಸಲ್ಮಾನರು!

Muslims in UPSC exams: ಸರಕಾರಿ ಆಡಳಿತದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರುವುದೇ ಅವರು ಹಿಂದುಳಿಯಲು ಪ್ರಮುಖ ಕಾರಣ. ಆಡಳಿತಯಂತ್ರವನ್ನು ಪ್ರವೇಶಿಸಲು, UPSC ಅಂತಹ ಪರೀಕ್ಷೆಗಳಿವೆ. ಅದರಲ್ಲಿ ಮುಸ್ಲಿಮರು ಹೆಚ್ಚು ಪಾಲ್ಗೊಳ್ಳಬೇಕು. ಆದರೆ ಅದು ಇಲ್ಲಿಯವರೆಗೆ ಕಾರ್ಯಸಾಧುವಾಗಿಲ್ಲ. ಹಾಗಂತ UPSC ನಲ್ಲಿ ಮುಸಲ್ಮಾನರು ಯಾರೂ ಇದುವರೆಗೆ ಯಾರೂ ಆಯ್ಕೆಯಾಗಿಲ್ಲ ಎಂದಲ್ಲ. ಅನೇಕ ಮಂದಿ ಸರ್ಕಾರದಲ್ಲಿ ಅತ್ಯುನ್ನತ ಆಯಕಟ್ಟಿನ ಸ್ಥಾನ ಅಲಂಕರಿಸಿದವರಿದ್ದಾರೆ. ಆದರೆ ಅದು ಅಲಂಕಾರಕ್ಕೆ ಸೀಮಿವಾಗಿತ್ತೇ ಹೊರತು ಇಡೀ ಸಮುದಾಯದ ಏಳ್ಗೆಗೆ ದಾರಿದೀಪವಾಗಿಲ್ಲ.

ಮದರಸಾದಲ್ಲಿ ಓದಿದ ವಿದ್ಯಾರ್ಥಿಗೆ IAS ನಲ್ಲಿ 751ನೇ ರ‍್ಯಾಂಕ್‌​​! UPSC ನಲ್ಲಿ ಹೆಚ್ಚು ಹೆಚ್ಚು ಯಶಸ್ಸು ಕಾಣುತ್ತಿರುವ ಯುವ ಮುಸಲ್ಮಾನರು!
UPSC: ಬಡ ಮುಸ್ಲಿಂ ಕುಟುಂಬಗಳ ಕನಸು ನನಸಾಗುತ್ತಿದೆ!
Follow us
|

Updated on:May 20, 2024 | 12:54 PM

ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಿಸ್ಥಿತಿಯ ವ್ಯಂಗ್ಯವೆಂದರೆ ಮುಸಲ್ಮಾನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ನಿರಂತರವಾಗಿ ಚರ್ಚಿಸಲಾಗುತ್ತದೆ. ಆದರೆ ಮುಸಲ್ಮಾನರು ಹೆಚ್ಚು ಸುಶಿಕ್ಷತರಾಗುತ್ತಿದ್ದಾರೆ. ಸಮಾಜವನ್ನು ಮುಖ್ಯವಾಹಿನಿಗೆ ತರಲು ಕೆಲವು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಇದರಿಂದಾಗಿ ಮುಸ್ಲಿಮರು ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಕಾಳಜಿಯನ್ನು ಹೆಚ್ಚಿಸಿದ್ದಾರೆ. ಪರಿಣಾಮವಾಗಿ ಮುಸ್ಲಿಂ ಯುವಕರು UPSC ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮಾಜದಲ್ಲಿ ಈ ಆಮೂಲಾಗ್ರ ಬದಲಾವಣೆ ಹೇಗೆ ಸಾಧ್ಯವಾಗುತ್ತಿದೆ? ಈ ವಿಶೇಷ ವರದಿಯನ್ನು ಓದಿ…

ದೇಶದ ಅತಿದೊಡ್ಡ, ಪ್ರತಿಷ್ಠಿತ ಆಡಳಿತ ಸೇವೆಗಳ ಪರೀಕ್ಷೆಯಾದ UPSC (ಕೇಂದ್ರ ಲೋಕಸೇವಾ ಆಯೋಗ -Union Public Service Commission) ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಈ ಫಲಿತಾಂಶವು ಹಲವು ಗಮನಾರ್ಹ ಸಾಧನೆಗಳನ್ನು ಕಂಡಿದೆ. ಇದರಲ್ಲಿ 51 ಮುಸ್ಲಿಂ ಮಕ್ಕಳು ಯಶಸ್ಸು ಸಾಧಿಸಿರುವುದು ಸಕಾರಾತ್ಮಕ ವಿಚಾರವಾಗಿದ್ದು, ಇದೀಗ ಬಹು ಚರ್ಚೆಯ ವಿಷಯವಾಗಿದೆ. ಇದು ಮುಸ್ಲಿಂ ಸಮಾಜದ ಭರವಸೆಯ ನವ ಚಿತ್ರಣವಾಗಿದೆ. ಗಮನಿಸಿ, ನಕಾರಾತ್ಮಕ ಕಾರಣಗಳಿಗಾಗಿ ಮುಸಲ್ಮಾನರು ಆಗಾಗ್ಗೆ ಸುದ್ದಿಯಾಗುತ್ತಿದ್ದರು. ಅನಕ್ಷರತೆ ಮತ್ತು ಬಡತನವು ಈ ಸಮುದಾಯವನ್ನು ಬಹಳ ಹಿಂದಿನಿಂದಲೂ ಬಹುವಾಗಿ ಕಾಡುತ್ತಿದೆ. ಆದರೆ ಈಗ ಆ ಪರಿಸರದಲ್ಲಿ ಕ್ರಮೇಣ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಇಂತಹ ದುಃಸ್ಥಿತಿಯಲ್ಲಿ ಸಿಲುಕಿರುವ ತಾವು ಇಲ್ಲಿ ನಿಂತನೀರಾಗದೆ ಮುಖ್ಯವಾಹಿನಿಯಲ್ಲಿ ಹರಿಯಬೇಕು, ಅದರ ಭಾಗವಾಗಬೇಕು ಮತ್ತು ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂಬ ಹಂಬಲ ಈ ಸಮಾಜದಲ್ಲಿಯೂ ದೃಗ್ಗೋಚರವಾಗುತ್ತಿದೆ. UPSC ಯ ಈ ಫಲಿತಾಂಶಗಳು ಇದಕ್ಕೆ ಸಾಕ್ಷಿಯಾಗಿದೆ. ಇದು ಹೇಗೆ ಸಂಭವಿಸಿತು ಎಂಬುದೇ ದೊಡ್ಡ ವಿಚಾರ.

ವಾಸ್ತವವಾಗಿ, ಕೆಲ ಸಮಯದಿಂದ ಈ ಸಮಾಜದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲು ವಿವಿಧ ಹಂತಗಳಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನದ ಫಲವೇ ಈ ಮಹತ್ತರ ಬದಲಾವಣೆ. ಈಗ ಸಮಾಜದಲ್ಲಿ ಜಾಗೃತಿ ಮೂಡಿದ್ದು ಅದು ತನ್ನ ಕಾಲ ಮೇಲೆ ನಿಂತಿದೆ. ಪ್ರಸ್ತುತ, ಅನೇಕ ಸರ್ಕಾರೇತರ ಸಂಸ್ಥೆಗಳು ಸಕ್ರಿಯವಾಗಿದ್ದು, ಈ ಸಮಾಜವನ್ನು ಮೂಲಭೂತ ಶಿಕ್ಷಣದಲ್ಲಿ ಮಾತ್ರವಲ್ಲದೆ ಉನ್ನತ ಶಿಕ್ಷಣದಲ್ಲಿಯೂ ಮುನ್ನಡೆಸಲು ಶ್ರಮಿಸುತ್ತಿವೆ. ಇದರ ಪ್ರಭಾವ ಇತ್ತೀಚಿನ ವರ್ಷಗಳಲ್ಲಿ UPSC ಫಲಿತಾಂಶದಲ್ಲಿ ಕಂಡುಬರುತ್ತಿದೆ.

Muslims success in UPSC: ಯುಪಿಎಸ್‌ಸಿಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚಿದೆ

2006 ರಲ್ಲಿ, ಮುಸ್ಲಿಮರ ಸಾಮಾಜಿಕ-ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಸಾಚಾರ್ ಸಮಿತಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇತರ ಸಮುದಾಯಗಳಿಗಿಂತ ಬಹಳ ಹಿಂದುಳಿದಿದೆ ಎಂಬುದು ಸಾಚಾರ್‌ ಸಮಿತಿಯ ಸಾರಾಂಶವಾಗಿತ್ತು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ವಿಶೇಷಾಧಿಕಾರಿಯಾಗಿದ್ದ (ಒಎಸ್‌ಡಿ) ಝಕಾತ್‌ ಫೌಂಡೇಶನ್‌ ಸಂಸ್ಥೆಯ ಸಂಸ್ಥಾಪಕ ಸೈಯದ್‌ ಜಾಫರ್‌ ಮಹಮೂದ್‌ ಅವರು ಹೇಳುವಂತೆ ಸರಕಾರದ ಆಡಳಿತದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರುವುದೇ ಅವರು ಹಿಂದುಳಿಯಲು ಪ್ರಮುಖ ಕಾರಣ. ಆಡಳಿತಯಂತ್ರವನ್ನು ಪ್ರವೇಶಿಸಲು, UPSC ಮತ್ತು ಇತರ ಹಲವು ಪರೀಕ್ಷೆಗಳಿವೆ. ಅದರಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಇದು ಇಲ್ಲಿಯವರೆಗೆ ಮಾಡಲಾಗಿಲ್ಲ. ಹಾಗಂತ UPSC ನಲ್ಲಿ ಮುಸಲ್ಮಾನರು ಯಾರೂ ಇದುವರೆಗೆ ಯಾರೂ ಆಯ್ಕೆಯಾಗಿಲ್ಲ ಎಂದಲ್ಲ. ಅನೇಕ ಮಂದಿ ಸರ್ಕಾರದಲ್ಲಿ ಅತ್ಯುನ್ನತ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದವರಿದ್ದಾರೆ. ಆದರೆ ಅಲಂಕಾರಕ್ಕೆ ಸೀಮಿವಾಗಿತ್ತೇ ಹೊರತು ಇಡೀ ಸಮುದಾಯದ ಏಳ್ಗೆಗೆ ದಾರಿದೀಪವಾಗಿರಲಿಲ್ಲ.

ಸಾಚಾರ್ ಸಮಿತಿಯ ವರದಿಯ ನಂತರ, ಅವರ ಶಿಕ್ಷಣದ ಪರಿಸ್ಥಿತಿ ಸುಧಾರಿಸಿದೆ. ಅನೇಕ ಸಂಸ್ಥೆಗಳು, ವಿಶೇಷವಾಗಿ ಸರ್ಕಾರೇತರ ಸಂಸ್ಥೆಗಳು, ಮುಸ್ಲಿಂ ಶಿಕ್ಷಣದ ಅಭಿವೃದ್ಧಿ ವಿಚಾರದಲ್ಲಿ ಕೆಲಸ ಮಾಡುತ್ತಿವೆ. ಜಕಾತ್ ಫೌಂಡೇಶನ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಮತ್ತು ಜಾಮಿಯಾ ಹಮ್​ದರ್ದ್ ವಿಶ್ವವಿದ್ಯಾಲಯದಂತಹ ಅನೇಕ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಜಾಫರ್ ಮಹಮೂದ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಬಲೀಕರಣಕ್ಕಾಗಿ ದೇಶಾದ್ಯಂತ 58 ಓರಿಯಂಟೇಶನ್ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸಿದ್ದಾರೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಸ್ಲಿಂ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸ್ವಾತಂತ್ರ್ಯದ ನಂತರ, ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಶೇ. 2.5 ಕ್ಕೆ ಸೀಮಿತವಾಗಿತ್ತು. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಅದು ಹೆಚ್ಚಾಗಲು ಪ್ರಾರಂಭಿಸಿದೆ. ಇತ್ತೀಚೆಗಂತೂ ಅದು ಶೇಕಡಾ 5 ಕ್ಕಿಂತ ಹೆಚ್ಚಿದೆ.

Muslims success in UPSC: ಮಹಾರಾಷ್ಟ್ರದ ಪೂರ್ಣಿಯಾ ಜಿಲ್ಲೆಯ ಅಂಜುಮ್ ವಿಶಿಷ್ಟ ಕಥೆ!

ಯುಪಿಎಸ್ ಸಿಗೆ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿರುವ ಮೊಹಮ್ಮದ್ ನಯಾಬ್ ಅಂಜುಮ್ ಎಂಬ ಯುವತಿಯ ಕಥೆ ಸಮುದಾಯಕ್ಕೆ ಮಾದರಿಯಾಗಿದೆ. ನಯಾಬ್ ಅಂಜುಮ್ ಮಹಾರಾಷ್ಟ್ರದೆ ಪೂರ್ಣಿಯಾ ಜಿಲ್ಲೆಯತಿಂದ ದೆಹಲಿಗೆ ಬಂದು ಜಾಮಿಯಾ ಮಿಲಿಯಾ ಶಾಲೆಯಲ್ಲಿ ಒಂಬತ್ತನೇ ತರಗತಿಗೆ ಪ್ರವೇಶ ಪಡೆದಿದ್ದಳು. 2016ರಲ್ಲಿ ಐಐಟಿ-ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಲ್ಲಿಂದಲೇ ಇಂಜಿನಿಯರಿಂಗ್ ಮಾಡುವ ಅವಕಾಶ ಸಿಕ್ಕಿತು. ಅಂಜುಮ್ ಅಂತಿಮ ವರ್ಷದಲ್ಲಿಯೇ ನಾಗರಿಕ ಸೇವೆಗಳಿಗೆ ತಯಾರಿ ಆರಂಭಿಸಿದ್ದಳು. UPSC ತಯಾರಿಗೆ ಅವಕಾಶ ಒದಗಿಸುವ ಫೌಂಡೇಶನ್ ಸೆಂಟರ್‌ನಲ್ಲಿ 2022 ರಲ್ಲಿ ಪ್ರವೇಶ ಪಡೆದು ಕಠಿಣ ವ್ಯಾಸಂಗದಲ್ಲಿ ತೊಡಗಿಕೊಂಡಿದ್ದಳು. ಆದರೆ ಮೊದಲ ವರ್ಷದಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಸಾಧ್ಯವಾಗಲಿಲ್ಲ.

2023 ರಲ್ಲಿ, ಅಂಜುಮ್ ಮತ್ತೆ ತಯಾರಿ ನಡೆಸಿದ್ದರು. ಮತ್ತು ಈ ಬಾರಿ ಪ್ರಿಲಿಮ್ಸ್ ಮತ್ತು ಮೈನ್ಸ್ ಎರಡರಲ್ಲೂ ಉತ್ತೀರ್ಣರಾದ ನಂತರ ಸಂದರ್ಶನವೂ ಉತ್ತಮವಾಗಿ ನಡೆಯಿತು. ಆದರೆ ಈ ಬಾರಿ ಆಯ್ಕೆಗೊಂಡಿರುವ 1016 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ದಾಖಲಾಗಲಿಲ್ಲ. ಅಂಜುಮ್ 953 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು ಪಟ್ಟಿಯಲ್ಲಿ ಅವರಿಗೆ ಕೊನೆಯ ಸ್ಥಾನ ಕಲ್ಪಿಸಿದೆ. ಆದ್ದರಿಂದ ಅವರ ಹೆಸರು ಸುಮಾರು ಮೂರು-ನಾಲ್ಕು ತಿಂಗಳ ನಂತರ ಬರುವ ಮೀಸಲು ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ನಾನು ಮೀಸಲು ಅಭ್ಯರ್ಥಿ ಪಟ್ಟಿಯಲ್ಲಿದ್ದೇನೆ ಎಂದು ಅಂಜುಮ್ ಹೆಮ್ಮೆಯಿಂದ ಹೇಳುತ್ತಾರೆ. ನಾನು ರೈಲ್ವೆ ನಿರ್ವಹಣೆ ಅಥವಾ ರಕ್ಷಣಾ ಖಾತೆಗಳ ಸೇವೆಯನ್ನು ಪಡೆಯಲು ಆಶಿಸುತ್ತೇನೆ. ಈ ಮಧ್ಯೆ, ನಾನು ಮುಂದಿನ ವರ್ಷಕ್ಕೆ ಈಗಿಂದಲೇ ಮತ್ತೆ ತಯಾರಿ ನಡೆಸುತ್ತಿದ್ದೇನೆ. ಇದರಿಂದ ಬಹುಶಃ ನನ್ನ ಶ್ರೇಣಿಯೂ ಉತ್ತಮಗೊಳ್ಳುತ್ತದೆ ಮತ್ತು ಅದರಿಂದ ಉತ್ತಮ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಆಶಿಸಿದ್ದಾರೆ.

Muslims success in UPSC: ಕುಟುಂಬದಿಂದಲೂ ಭಾರೀ ಬೆಂಬಲ ಸಿಕ್ಕಿದೆ ಅಂಜುಮ್​​ಗೆ

ಸಾಮಾನ್ಯ ಕುಟುಂಬದ ಯುವಕರಿಗೆ ಓದು ಮುಗಿಸಿ ಬೇಗನೇ ಕೆಲಸ ಹುಡುಕಿಕೊಂಡು ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಮಾನಸಿಕ ಒತ್ತಡವಿರುತ್ತದೆ ಎನ್ನುತ್ತಾರೆ ಅಂಜುಮ್. ಆದರೆ ನೀನು ಕಷ್ಟಪಟ್ಟು ಓದುವವಳು, ಓದಿನಲ್ಲಿ ಮುಂದಿದ್ದೀಯ, ಮನೆಯ ಕಡೆ ಚಿಂತೆಬೇಡ, ಏನೇ ಆಗಲಿ ನಾವು ನೋಡಿಕೊಳ್ಳುತ್ತೇವೆ ಎಂದು ಅಪ್ಪನಿಂದ ಭರಪೂರ ಪ್ರೋತ್ಸಾಹ ಸಿಕ್ಕಾಗ ನಾನು ಹಿಂದಿರುಗಿ ನೋಡಲಿಲ್ಲ. ನಾನು ಕಷ್ಟಪಟ್ಟು ತಯಾರಿ ನಡೆಸಲು ಪ್ರಾರಂಭಿಸಿದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಅಥವಾ ಕೆಳ ಮಧ್ಯಮ ವರ್ಗದ ಜನರು ನಾಗರಿಕ ಸೇವೆಗಳಿಗೆ ಪ್ರವೇಶಿಸುವುದು ಕಷ್ಟ ಎಂಬ ಗ್ರಹಿಕೆ ಇದೆ, ಆದರೆ ಯಾರಾದರೂ ಯಶಸ್ವಿಯಾದಾಗ ಅದು ಇತರರನ್ನು ಉತ್ತೇಜಿಸುತ್ತದೆ. ಹುರಿದುಂಬಿಸುತ್ತದೆ. ಒಮ್ಮೆ ನೀವು ಸೇವೆಗೆ ಸೇರಿದರೆ, ನಿಮ್ಮ ನಂತರದ ಪೀಳಿಗೆಗೆ ಇದು ಸುಲಭವಾಗುತ್ತದೆ ಎಂಬುದು ಅಂಜುಮ್ ಅವರ ನೈಜ ಗ್ರಹಿಕೆಯಾಗಿದೆ. ಅಂಜುಮ್​ಳ ಯಶೋಗಾಥೆ ಆ ಸಮುದಾಯದಲ್ಲಿನ ವಾಸ್ತವ ಚಿತ್ರಣಕ್ಕೆ ಹಿಡಿದ ಕನ್ನಡಿಯಾಗಿದೆ.

UPSC ಯಲ್ಲಿ ತೇರ್ಗಡೆಯಾದ ಮದರಸಾ ವಿದ್ಯಾರ್ಥಿ ಗಳಿಸಿದ ರ‍್ಯಾಂಕ್‌​ ಎಷ್ಟು ಗೊತ್ತಾ!?

ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯು (Residential Coaching Academy -RCA) ತನ್ನ ಅಭ್ಯರ್ಥಿಗಳ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡಿದೆ. 2023 ರ UPSC ಸಂದರ್ಶನದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಒಟ್ಟು 71 ಮಂದಿ ಕಾಣಿಸಿಕೊಂಡರು, ಅವರಲ್ಲಿ 31 ಅಭ್ಯರ್ಥಿಗಳು ಆಯ್ಕೆಯಾದರು. ಅದರಲ್ಲಿ 22 ಮುಸಲ್ಮಾನ ಅಭ್ಯರ್ಥಿಗಳು ಇದ್ದರು. ನೌಶೀನ್ ಅವರಲ್ಲಿ ಒಬ್ಬನಾಗಿದ್ದು, ಅಖಿಲ ಭಾರತ ಒಂಬತ್ತನೇ ರ್ಯಾಂಕ್ ಗಳಿಸಿದ್ದಾರೆ. ಅದಕ್ಕೂ ಮುನ್ನ 2021 ಮತ್ತು 2022 ರಲ್ಲಿ ಜಾಮಿಯಾ RCA ಕೇಂದ್ರದಿಂದ ಅಭ್ಯರ್ಥಿಗಳು ನಿರಂತರವಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಜಾಮಿಯಾ ಆರ್‌ಸಿಎ ಕೇಂದ್ರದ ಶ್ರುತಿ ಶರ್ಮಾ ಯುಪಿಎಸ್‌ಸಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. 2018ರಲ್ಲಿ ಇಲ್ಲಿನ ವಿದ್ಯಾರ್ಥಿ ಮೌಲಾನಾ ಶಾಹಿದ್ ರಜಾ ಖಾನ್ ಕೂಡ ಸುದ್ದಿಯಲ್ಲಿದ್ದರು. ಮದರಸಾ ಹಿನ್ನೆಲೆಯಿಂದ ಬಂದಿದ್ದ ಶಾಹಿದ್ ರಜಾ ಖಾನ್​​ ಯುಪಿಎಸ್​​ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 751ನೇ ರ್ಯಾಂಕ್ ಪಡೆದು ತೇರ್ಗಡೆಯಾಗಿದ್ದರು!

Muslims success in UPSC: ಜಾಮಿಯಾ RCA ಕೇಂದ್ರದಲ್ಲಿ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುತ್ತದೆ

ಆರ್‌ಸಿಎ ನಿರ್ದೇಶಕ ಪ್ರೊಫೆಸರ್ ಅಬಿದ್ ಹಲೀಂ ಹೇಳುವಂತೆ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ ವ್ಯವಸ್ಥೆಯು ಯುಜಿಸಿ ಯೋಜನೆಯಾಗಿದ್ದು, ಜಾಮಿಯಾ ವಿಶ್ವವಿದ್ಯಾಲಯ ನಿಗಾದಲ್ಲಿದೆ. ಇದು ಸ್ವಾಯತ್ತತೆ ಹೊಂದಿದೆ. ಮತ್ತು UGC ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ನಾವು ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಮತ್ತು ಸಂದರ್ಶನ ನಡೆಸಿ, ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. RCA ನಡೆಸುವ ಪರೀಕ್ಷೆಯಲ್ಲಿ ಎರಡು ಭಾಗಗಳಿದ್ದು, ಮೊದಲ ಭಾಗದಲ್ಲಿ 100 ಆಬ್ಜೆಕ್ಟೀವ್​​ ಟೈಪ್​​ ಪ್ರಶ್ನೆಗಳಿದ್ದರೆ, ಎರಡನೇ ಭಾಗದಲ್ಲಿ ವಸ್ತುನಿಷ್ಠ (ಡಿಸ್ಕ್ರಿಪ್ಟೀವ್​​) ಪ್ರಶ್ನೆಗಳಿರುತ್ತವೆ. UPSC ಯಲ್ಲಿ ಇರುವಂತೆ ಇದರಲ್ಲಿಯೂ ನೆಗೆಟಿವ್ ಮಾರ್ಕಿಂಗ್ ಇದೆ. ಎರಡರ ಆಧಾರದ ಮೇಲೆ ನಾವು ಸಂದರ್ಶನಕ್ಕೆ ಕರೆಯುತ್ತೇವೆ. ನಿಯಮದ ಪ್ರಕಾರ ಸಂದರ್ಶನದಲ್ಲಿ 100 ಸೀಟುಗಳಿಗೆ 300 ಮಕ್ಕಳನ್ನು ಸಂದರ್ಶನಕ್ಕೆ ಕರೆಯುತ್ತೇವೆ. ನಮ್ಮ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುತ್ತದೆ, ಇದು 10 ನಗರಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಆದ್ದರಿಂದ ನಾವು ಆನ್‌ಲೈನ್‌ನಲ್ಲಿ ಸಂದರ್ಶನವನ್ನು ನಡೆಸುತ್ತೇವೆ. ಇದರಿಂದ ಕಡು ಬಡವರು ಮತ್ತು ದೂರದೂರುಗಳಲ್ಲಿರುವ ಜನರು ಯಾವುದೇ ಸಮಸ್ಯೆ ಇಲ್ಲದೆ ಇಲ್ಲಿಗೆ ಆಯ್ಕೆಯಾಗಬಹುದು ಎನ್ನುತ್ತಾರೆ.

Muslims success in UPSC: ಜಾಮಿಯಾದಲ್ಲಿ ಮುಸ್ಲಿಮರಿಗೆ ವಿಶೇಷ ಕೋಟಾ ಇಲ್ಲ!

ಜಾಮಿಯಾದಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡಲಾಗಿದೆ ಎಂಬ ಅಭಿಪ್ರಾಯವಿದೆ. ಆದರೆ ಅದು ಹಾಗಲ್ಲ. ಈ ಬಗ್ಗೆ ಪ್ರೊಫೆಸರ್ ಅಬಿದ್ ಹಲೀಮ್ ಅವರು ಮಾತನಾಡಿದ್ದು, ಹೀಗೆ ಹೇಳಿದ್ದಾರೆ: ನಾವು ನಡೆಸುವ ಪ್ರಕ್ರಿಯೆಯ ಭಾಗವಾಗಿ ಸಮರ್ಥವಾದ ಅಭ್ಯರ್ಥಿಗಳನ್ನು ಕರೆಯುತ್ತೇವೆ. ನಾವು ಅಂಗವಿಕಲರಿಗೆ ಶೇಕಡಾ ಐದು ಸೀಟುಗಳನ್ನು ನೀಡುತ್ತೇವೆ. ನಮ್ಮ RCA ಗಮನವು ವಿಶೇಷವಾಗಿ SC, ST, ಅಲ್ಪಸಂಖ್ಯಾತರು ಮತ್ತು ಹುಡುಗಿಯರ ಮೇಲೆ ಕೇಂದ್ರೀಕೃತವಾಗಿದೆ. ಮುಸ್ಲಿಮರಿಗೆ ಅಂತೇನೂ ಪ್ರತ್ಯೇಕ ಮೀಸಲಾತಿ ಇಲ್ಲಿ ಇಲ್ಲ. ಈ ಕೋರ್ಸ್‌ಗೆ ಯುಜಿಸಿ 100 ಸೀಟುಗಳನ್ನು ನೀಡಿದ್ದು, ಇದಕ್ಕೆ ಸಾಮಾನ್ಯವಾಗಿ 12,000 ರಿಂದ 15,000 ಅರ್ಜಿಗಳು ಬರುತ್ತವೆ. RCA ಹೆಚ್ಚೇನೂ ಸಂಪನ್ಮೂಲಗಳನ್ನು ಹೊಂದಿಲ್ಲ. ಆದರೆ ನಾವು ಪ್ರತಿಯೊಂದು ಅಭ್ಯರ್ಥಿಗೂ ಪ್ರತ್ಯೇಕವಾಗಿ ಶ್ರಮ ಹಾಕುತ್ತೇವೆ. ಈ ಪ್ರಕ್ರಿಯೆಲ್ಲಿ ಸಾಕಷ್ಟು ಪರೀಕ್ಷೆಗಳಿವೆ. ಸುಮಾರು 50-60 ಜನರು ಕೋಚಿಂಗ್​​ ನೀಡಲು ಹೊರಗಿನಿಂದ ಬರುತ್ತಾರೆ. ಇದರಲ್ಲಿ ಅನೇಕ ಮಂದಿ ಸರ್ಕಾರಿ ಅಧಿಕಾರಿಗಳು ಇದ್ದಾರೆ. ಇದನ್ನು ಹೊರತುಪಡಿಸಿ ನಮ್ಮದೇ ಆದ ಅಧ್ಯಾಪಕರೂ ಇರುತ್ತಾರೆ.

ನಮಗೆ ಹೆಚ್ಚಿನ ಅನುದಾನ ಬರುತ್ತಿಲ್ಲ, ಮಕ್ಕಳಿಂದ ತಿಂಗಳಿಗೆ 1,000 ರೂ ನಿರ್ವಹಣೆ ಶುಲ್ಕ ತೆಗೆದುಕೊಳ್ಳುತ್ತೇವೆ. ಯಾವುದೇ ಶುಲ್ಕಗಳನ್ನು ತೆಗೆದುಕೊಳ್ಳುವುದಿಲ್ಲ. ಇಂಟರ್ನೆಟ್ ಸಂಪರ್ಕವು ಉಚಿತವಾಗಿದೆ. ನಮಗೆ ಬೆಂಬಲವಾಗಿ ನಿಲ್ಲುವವರ ಸಂಖ್ಯೆ ಬಲಾಢ್ಯವಾಗಿದೆ ಎಂದು RCA ಪ್ರಾಧ್ಯಾಪಕ ಅಬಿದ್ ಹೇಳುತ್ತಾರೆ. ನಾವು EWS ವರ್ಗದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತೇವೆ, ನಾವು ಪಡೆಯುವ ಯಾವುದೇ ಅನುದಾನದ ಹಣದಲ್ಲಿ ಶೇ. 20 ರಷ್ಟನ್ನು ಬಡ ಮಕ್ಕಳಿಗೆ ಬೆಂಬಲವಾಗಿ ನೀಡುತ್ತೇವೆ. ಕಡು ಬಡವರಾಗಿದ್ದು ಜೀವನದಲ್ಲಿ ಏನಾದರೂ ಮಾಡಬೇಕೆಂಬ ಹಂಬಲ ಹೊಂದಿರುವ ಮಕ್ಕಳು ಆದಾಯ ಪ್ರಮಾಣ ಪತ್ರದ ಆಧಾರದ ಮೇಲೆ ಇಲ್ಲಿ ಆಯ್ಕೆ ಪಡೆಯಬಹುದು ಎಂಬ ಮಹತ್ವದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

Muslims success in UPSC: ನಮ್ಮ ವ್ಯವಸ್ಥೆಗೆ ಬೆನ್ನೆಲುಬಾಗಿ ಮುಸ್ಲಿಂ ಸಮುದಾಯದವರೂ ಸಾಕಷ್ಟು ಮಂದಿಯಿದ್ದಾರೆ:

ಸೈಯದ್ ಜಾಫರ್ ಮಹಮೂದ್ ಹೇಳುವಂತೆ ಮುಸ್ಲಿಂ ಸಮುದಾಯವು ಆಂತರಿಕವಾಗಿ ನೆರವಿಗೆ ಬರುತ್ತದೆ. ಝಕಾತ್ ಫೌಂಡೇಶನ್‌ಗೆ ದೇಣಿಗೆ ನೀಡಲು ಅನೇಕ ಜನರು ಬರುತ್ತಾರೆ, ಅವರು ತಮ್ಮ ಅಗತ್ಯಕ್ಕಿಂತ ಹೆಚ್ಚಿನದನ್ನು ಹೊಂದಿದ್ದು, ಅದರಿಂದ RCA ಅಭ್ಯರ್ಥಿಗಳಿಗೆ ನೆರವಾಗುತ್ತಾರೆ. ಝಕಾತ್ ಮಾತ್ರವಲ್ಲದೆ ಇತರ ರೀತಿಯ ದಾನಗಳಿಗೂ ಹಣ, ಝಕಾತ್ ಕೂಡ ಬರುವಂತಾಗಲಿ ಎಂದು ಝಕಾತ್ ಎಂಬ ಹೆಸರನ್ನು ಇಡಲಾಗಿದೆ. ಝಕಾತ್ ಗೆ ಅನುದಾನ ನೀಡುವುದು ವಾರ್ಷಿಕ ದೇಣಿಗೆಯಾಗಿದ್ದು, ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವಾಗುವಂತೆ ನೀಡುವುದು ಪ್ರತಿಯೊಬ್ಬ ಶ್ರೀಮಂತ ಮುಸಲ್ಮಾನರ ಕರ್ತವ್ಯವಾಗಬೇಕು ಎಂದು ಹೇಳುತ್ತಾರೆ.

Also Read: Coffee Pudi Sakamma – ಇವರೇ ನೋಡಿ ಬೆಂಗಳೂರಿಗೆ ಕಾಫಿ ಪರಿಚಯಿಸಿದ್ದು

UPSC ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಾವು ಪ್ರತಿ ವರ್ಷ ಭಾರತದಾದ್ಯಂತ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತೇವೆ. ದೆಹಲಿಯನ್ನು ಹೊರತುಪಡಿಸಿ, ನಾವು ದೇಶದ ಅನೇಕ ಸ್ಥಳಗಳಲ್ಲಿ ಕೇಂದ್ರಗಳನ್ನು ಹೊಂದಿದ್ದೇವೆ. ಕೋಚಿಂಗ್‌ಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆಮೇಲೆ ಸೆಲೆಕ್ಟ್ ಆದವರಿಗೆ ಹಾಸ್ಟೆಲ್ ವ್ಯವಸ್ಥೆ ಬೇಕಿದ್ದರೆ ಕೊಡ್ತೇವೆ. UPSC ಪ್ರಿಲಿಮ್ಸ್ ಪರೀಕ್ಷೆಗಾಗಿ ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಜಾಹೀರಾತು ಬಿಡುಗಡೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Muslims success in UPSC: ಮುಸಲ್ಮಾನರು ದುಂದುವೆಚ್ಚಗಳನ್ನು ನಿಲ್ಲಿಸಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು:

ಶಾಹೀನ್ ಗ್ರೂಪ್ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಣದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಅವರು ದೇಶಾದ್ಯಂತ ಡಜನ್​ಗಟ್ಟಲೆ ಕೇಂದ್ರಗಳನ್ನು ಹೊಂದಿದ್ದಾರೆ. ಶಿಕ್ಷಣತಜ್ಞ ಮತ್ತು ಶಾಹೀನ್ ಗ್ರೂಪ್ ಸಂಸ್ಥಾಪಕ ಅಬ್ದುಲ್ ಖಾದೀರ್ ಹೇಳುವಂತೆ ಪದವಿ ಸಮಯದಲ್ಲಿಯೇ UPSC ಗಾಗಿ ಮೂಲ ಸಿದ್ಧತೆಗಳನ್ನು ಸಹ ಒದಗಿಸುತ್ತಾರಂತೆ. ಅನಗತ್ಯ ಬಾಬತ್ತುಗಳಿಗೆ ಖರ್ಚು ಮಾಡುವುದನ್ನು ನಿಲ್ಲಿಸಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಮದುವೆಗೆ ಕಡಿಮೆ ಖರ್ಚು ಮಾಡಿ. ಹುಡುಗಿಯ ಹಣ ಪೋಲು ಮಾಡಬಾರದು, ಕಡಿಮೆ ಖರ್ಚಿನಲ್ಲಿ ನಡೆಯುವ ಮದುವೆಯೇ ಉತ್ತಮ. ಅತಿ ಆಡಂಬರದ ಮದುವೆಗಳಿಗೆ ಹೋಗುವುದನ್ನು ನಿಲ್ಲಿಸಿ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದಷ್ಟು ಖರ್ಚು ಮಾಡಿ. ಏಕೆಂದರೆ ಆಗಲೇ ಮುಸ್ಲಿಂ ಸಮುದಾಯವು ಪ್ರಗತಿ ಹೊಂದಲು ಸಾಧ್ಯವಾಗುವುದು. ಇಂತಹ ಉದಾತ್ತ ಕೆಲಸ ಮಾಡಿದರೆ ನಮ್ಮ ಜನಾಂಗ ದೇಶಕ್ಕೆ ಉತ್ತಮ ಕೊಡುಗೆಯಾದೀತು ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

Muslims in UPSC: ಅಲ್ಪಸಂಖ್ಯಾತರ ವ್ಯಾಪ್ತಿಯೇನು?

ಝಕಾತ್ ಫೌಂಡೇಶನ್ ಕುರಿತು ಮಾತನಾಡಿದ ಸೈಯದ್ ಜಾಫರ್ ಮಹಮೂದ್, ನಾವು ಯುಪಿಎಸ್‌ಸಿ ಸಿದ್ಧತೆಯನ್ನು ಒದಗಿಸುವುದು ಮಾತ್ರವಲ್ಲದೆ 29 ರಾಜ್ಯಗಳು, 29 ಹೈಕೋರ್ಟ್‌ಗಳಲ್ಲಿ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗಗಳಿವೆ. ಈ ಎಲ್ಲಾ 58 ಸಂಸ್ಥೆಗಳು ಪ್ರತಿ ವರ್ಷ ಆಯ್ಕೆಗಳನ್ನು ನಡೆಸುತ್ತವೆ. ಅವುಗಳಲ್ಲಿ ವಿಶೇಷವಾದವುಗಳಲ್ಲಿ ದೊಡ್ಡ ಪ್ರಮಾಣದ ಆಯ್ಕೆ ಇದೆ. ಇದಲ್ಲದೆ, ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಪರೀಕ್ಷೆಗಳಿಗಾಗಿ ಪ್ರತಿ ವರ್ಷ 25 ರಿಂದ 30 ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನಾಗರಿಕ ಸೇವೆಗಳ ಹೊರತಾಗಿ CISF, BSF ಮತ್ತು GRP ಅಂತಹ ಕೇಂದ್ರೀಯ ಪೊಲೀಸ್ ಪಡೆಗಳ ತಯಾರಿಗಾಗಿ ನಮ್ಮ ಕೇಂದ್ರದಲ್ಲಿ ಶಿಕ್ಷಣ ನಿಡುತ್ತೇವೆ. ಪ್ರತಿ ವರ್ಷ ಹಲವಾರು ಲಕ್ಷ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಈ ಅಂಕಿ ಅಂಶಗಳು ನಮ್ಮ ಸಮುದಾಯದ ಯುವಪೀಳಿಗೆಗೆ ಉತ್ತೇಜನಕಾರಿಯಾಗಬೇಕು. ಆದರೆ ಅದಕ್ಕೆ ವಿರುದ್ಧವಾಗಿದೆ. ಏಕೆಂದರೆ ಮುಸ್ಲಿಂ ಸಮುದಾಯದಿಂದ ಅಬ್ಬಬ್ಬಾ ಅಂದರೆ 1,000 ಅಭ್ಯರ್ಥಿಗಳು ಮಾತ್ರವೇ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಮುಸ್ಲಿಂ ಯುವಜನತೆ ಹೆಚ್ಚುಹೆಚ್ಚು ಇಂತಹ ಸ್ಪರ್ಧಾತ್ಮಕ ಆಯ್ಕೆಗಳತ್ತ ಗಮನ ಕೇಂದ್ರೀಕರಿಸಬೇಕು ಎಂದು ಅವರು ಉಚಿತ ಸಲಹೆ ನೀಡುತ್ತಾರೆ.

Muslims success in UPSC: ತಯಾರಿ ಹೇಗೆ ಮಾಡಲಾಗುತ್ತದೆ?

ಈ ಬಾರಿ 51 ಅಲ್ಪಸಂಖ್ಯಾತ ಅಭ್ಯರ್ಥಿಗಳು ಯುಪಿಎಸ್‌ಸಿ ಸಂದರ್ಶನಕ್ಕೆ ಹಾಜರಾಗಿದ್ದು, ಈ ಪೈಕಿ 24 ಮಂದಿ ಆಯ್ಕೆಯಾಗಿದ್ದಾರೆ ಎಂದು ಜಾಫರ್ ಮಹಮೂದ್ ತಿಳಿಸಿದ್ದಾರೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ದೇಶದಾದ್ಯಂತದ ಯಾವುದೇ ಮಗು ಮೇನ್ಸ್‌ಗೆ ಸಹಾಯ ಕೇಳುತ್ತದೆ, ನಾವು ಅ6ವರಿಗೆ ಸಹಾಯ ಮಾಡುತ್ತೇವೆ. ಸಂದರ್ಶನದಲ್ಲಿ ಕೆಲವು ಮಕ್ಕಳು ನಮ್ಮಲ್ಲಿ ಪ್ರಿಲಿಮ್ಸ್ ಓದಿದವರು, ಕೆಲವರು ಮುಖ್ಯ ಪರೀಕ್ಷೆಗೆ ಬಂದವರು. ಬೇರೆಡೆಯಿಂದ ಬಂದು ಸಂದರ್ಶನಕ್ಕೆ ತಯಾರಿ ಮಾಡಿಕೊಳ್ಳಲು ಬಯಸುವವರು ಇದ್ದಾರೆ. ಅಂತಹ ಮಕ್ಕಳನ್ನು ವಿವಿಧ ಇಲಾಖೆಗಳ ಹಾಲಿ ಮತ್ತು ನಿವೃತ್ತ ಹಿರಿಯ ಅಧಿಕಾರಿಗಳೊಂದಿಗೆ 3 ಬಾರಿ ಸಂದರ್ಶನಕ್ಕೆ ಸಿದ್ಧಗೊಳಿಸುತ್ತೇವೆ. ಇದು ಕೇವಲ ಯುಪಿಎಸ್‌ಸಿ ಮಾತ್ರವಲ್ಲ, ಕಳೆದ ಮೂರು ವರ್ಷಗಳಿಂದ ನಾವು ಯುಪಿಎಸ್‌ಸಿಯೇತರ ಆಯ್ಕೆಗಳಿಗೂ ತಯಾರಿಯನ್ನು ಪ್ರಾರಂಭಿಸಿದ್ದೇವೆ. ಅದರಲ್ಲಿಯೂ ನಾವು ಸಾಕಷ್ಟು ಯಶಸ್ಸನ್ನು ಪಡೆಯುತ್ತಿದ್ದೇವೆ ಎಂದಿದ್ದಾರೆ.

UPSC ಸಿವಿಲ್ ಸೇವೆಗಳಿಗೆ ತಯಾರಿ ಮಾಡುವುದು ತುಂಬಾ ದುಬಾರಿಯಾಗಿದೆ. ಈ ಹಿಂದೆ ನಾವು ಅದನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿದ್ದೆವು. ಕೆಲವು ಮಕ್ಕಳು ಇದರ ಪ್ರಯೋಜನವನ್ನು ಪಡೆಯಲಿಲ್ಲ, ನಾವು ಶುಲ್ಕವನ್ನು ಜಮಾ ಮಾಡಲು ಮುಂದೆಬಂದರೂ ಅವರು ತರಗತಿಗಳಿಗೆ ಹಾಜರಾಗಲಿಲ್ಲ. ಅದರಲ್ಲಿ ಒಂದಷ್ಟು ತಾವೇ ಖರ್ಚು ಮಾಡಿಕೊಂಡು ಮುಂದೆ ಬಂದಿದ್ದರೂ ತಮ್ಮ ಹಣ ಸುಖಾಸುಮ್ಮನೆ ಹೂಡಿಕೆಯಾಗುತ್ತಿದೆ ಎಂಬ ಭಾವನೆ ಅವರದು. ಹಾಗಾಗಿ ಈಗ ನಾವು ಅವರಿಂದ ಶೇ. 10 ರಷ್ಟು ಠೇವಣಿ ಮಾಡಿದ್ದೇವೆ. ಉಳಿದಿದ್ದನ್ನು ನಾವೇ ಕಟ್ಟುತ್ತೇವೆ. ಶೇ. 10 ರಷ್ಟಾದರೂ ಕೊಡಲು ಸಾಧ್ಯವಾಗದವರಿದ್ದರೆ ಅವರಿಗೂ ಆರ್ಥಿಕವಾಗಿ ಸಹಾಯ ಮಾಡುತ್ತೇವೆ. ಹಣದ ಕೊರತೆಯಿಂದ ಅವಕಾಶ ವಂಚಿತರಾಗುವುದು ಉಚಿತವಲ್ಲ. ನಾವು UPSC ಅಲ್ಲದೆ ಅನೇಕ ಕೋಚಿಂಗ್ ಕೋರ್ಸ್‌ಗಳನ್ನು ನಡೆಸುತ್ತಿದ್ದೇವೆ. ಅವುಗಳಲ್ಲಿ ಕೆಲವು ಭೌತಿಕ ಮತ್ತು ಕೆಲವು ಆನ್‌ಲೈನ್‌ನಲ್ಲಿವೆ. ಸುಮಾರು 500 ಅಭ್ಯರ್ಥಿಗಳು ನಮ್ಮಲ್ಲಿ ಪರೀಕ್ಷಾ ಸಿದ್ದತೆ ನಡೆಸುತ್ತಾರೆ.

Muslims success in UPSC: ಬಡ ಮುಸ್ಲಿಂ ಕುಟುಂಬಗಳ ಕನಸು ನನಸಾಗುತ್ತಿದೆ!

ವಾಸ್ತವವಾಗಿ, ಸಾಚಾರ್ ಸಮಿತಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಮುಸ್ಲಿಂ ಸಮುದಾಯದ ಹಿಂದುಳಿದಿರುವಿಕೆಯ ಬಗ್ಗೆ ಸಾಕಷ್ಟು ವಿವಾದಿತ ಚರ್ಚೆಗಳು ಭುಗಿಲೆದ್ದವು. ಅದು ಇನ್ನೂ ನಡೆಯುತ್ತಿದೆ. ಭಾರತೀಯ ಮುಸ್ಲಿಮರ ಸ್ಥಾನಮಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕೆಳಮಟ್ಟದಲ್ಲಿದೆ ಎಂದು ಸಮಿತಿಯು ಘೋಷಿಸಿತ್ತು. ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಉಪಕ್ರಮಗಳನ್ನು ಕೈಗೊಳ್ಳಲು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸಲು ಭಾರತ ಸರ್ಕಾರಕ್ಕೆ ಅಗತ್ಯವಿರುವ ಮಾಹಿತಿಯ ಸಂಗ್ರಹವಾಗಿ ವರದಿಯನ್ನು ಸಿದ್ಧಪಡಿಸಲಾಗಿದೆ.

ಅಲ್ಪಸಂಖ್ಯಾತರಂತಹ ವಂಚಿತ ವರ್ಗಗಳಿಗೆ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಸಮಾನ ಅವಕಾಶಗಳ ಸಮಿತಿಯನ್ನು ರಚಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸಿನ ಮೇರೆಗೆ ಕೆಲವು ಯೋಜನೆಗಳನ್ನು ಸಹ ಪ್ರಾರಂಭಿಸಲಾಯಿತು. ಈಗ ಸರಕಾರದ ಯೋಜನೆಗಳ ಹೊರತಾಗಿ ಸ್ವತಃ ಮುಸ್ಲಿಂ ಸಮುದಾಯದ ಸಂಘಟನೆಗಲೂ ತಮ್ಮ ಸಮಾಜವನ್ನು ಮುನ್ನಡೆಯಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದಲ್ಲಿ ಶಿಕ್ಷಣಕ್ಕಾಗಿ ಕೆಲಸ ಮಾಡಲು ಇಂತಹ ಅನೇಕ ಸಂಸ್ಥೆಗಳು ಮುಂದೆ ಬರುತ್ತಿವೆ. ಅವು ಕೇವಲ ಮೂಲಭೂತ ಶಿಕ್ಷಣದ ಮೇಲೆ ಮಾತ್ರವಲ್ಲದೆ ವೃತ್ತಿಪರವಾಗಿಯೂ ಕೆಲಸ ಮಾಡುತ್ತಿವೆ ಎಂಬುದು ಸಮುದಾಯದ ದೃಷ್ಟಿಯಿಂದ ಮತ್ತು ದೇಶದ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ.

Published On - 11:58 am, Sun, 19 May 24

ತಾಜಾ ಸುದ್ದಿ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!