ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದ ಪ್ರವಾಸೋದ್ಯಮ ಕುಸಿದಿದೆ. ನಟ ಅತುಲ್ ಕುಲಕರ್ಣಿ ಅವರು ಧೈರ್ಯ ತೋರಿ ಕಾಶ್ಮೀರಕ್ಕೆ ಭೇಟಿ ನೀಡಿ, ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ. ಅವರ ಈ ಕ್ರಿಯೆ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಕಾಶ್ಮೀರದ ಸೌಂದರ್ಯವನ್ನು ಜಗತ್ತಿಗೆ ತೋರಿಸುವ ಮೂಲಕ ಅವರು ಭಯೋತ್ಪಾದನೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸ್ರಾನ್ ಕಣಿವಯೆಲ್ಲಿರುವ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಈ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು. ಇದರಲ್ಲಿ ಕರ್ನಾಟಕದವರೂ ಸೇರಿದ್ದಾರೆ. ಪಹಲ್ಗಾಮ್ (Pahalgam Attack) ಘಟನೆಯ ನಂತರ, ಪ್ರವಾಸಿಗರಲ್ಲಿ ಭಯ ಮೂಡಿದೆ. ಯಾರೊಬ್ಬರೂ ಇಲ್ಲಿಗೆ ಬರಲು ಧೈರ್ಯ ಮಾಡುತ್ತಿಲ್ಲ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸ್ಥಳೀಯರು ಭಯ ಬಿದ್ದಿದ್ದಾರೆ. ಆದರೆ, ನಟ ಅತುಲ್ ಕುಲಕರ್ಣಿ ಅವರು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದು, ಪ್ರವಾಸಿಗರ ಬಳಿ ಇಲ್ಲಿಗೆ ಬರುವಂತೆ ಕೋರುತ್ತಿದ್ದಾರೆ.
ಭಯೋತ್ಪಾದಕ ದಾಳಿಯಿಂದಾಗಿ ಅನೇಕ ಜನರು ಕಾಶ್ಮೀರಕ್ಕೆ ಹೋಗಲು ಹೆದರುತ್ತಾ ಇದ್ದಾರೆ. ಕೆಲವರು ಮತ್ತೆಂದೂ ಕಾಶ್ಮೀರಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಸ್ಥಳೀಯರು ಮಾತ್ರ ಇಲ್ಲಿಗೆ ಬರುವಂತೆ ಕೋರುತ್ತಿದ್ದಾರೆ. ಅದೇ ರೀತಿ, ನಟ ಅತುಲ್ ಕುಲಕರ್ಣಿ ಸ್ವತಃ ಕಾಶ್ಮೀರಕ್ಕೆ ಹೋಗುವ ಮೂಲಕ ದೊಡ್ಡ ಸಂದೇಶವನ್ನು ನೀಡಿದ್ದಾರೆ.
ಅತುಲ್ ಕುಲಕರ್ಣಿ ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣಿಸುವಾಗ ವಿಮಾನದಿಂದ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಕಾಶ್ಮೀರಕ್ಕೆ ಪ್ರವಾಸಿಗರ ದಂಡೇ ಇರುತ್ತದೆ. ಆದರೆ ದಾಳಿಯ ನಂತರ, ವಿಮಾನವೂ ಖಾಲಿ ಇದೆ. ಈ ವಿಮಾನವು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ ಎಂದು ಸಿಬ್ಬಂದಿ ಅತುಲ್ಗೆ ಮಾಹಿತಿ ನೀಡಿದರು. ‘ನಾವು ಈ ಜಾಗಗಳನ್ನು ಮತ್ತೆ ತುಂಬಬೇಕು’ ಎಂದು ಅವರು ಈ ಫೋಟೋದಲ್ಲಿ ಬರೆದಿದ್ದಾರೆ.
Actor #AtulKulkarni, currently in #Pahalgam, shared pictures from his trip and spoke to news portals
“There is sadness in people’s eyes, but when I meet them, they smile and ask me to tell others they are safe here,” says the actor #Kashmir #PahalgamTerroristAttack pic.twitter.com/l00T8rbeIO
— BombayTimes (@bombaytimes) April 27, 2025
‘ಬನ್ನಿ, ಕಾಶ್ಮೀರಕ್ಕೆ ಹೋಗೋಣ.. ನಾನು ಬಂದಿದ್ದೇನೆ, ನೀವೂ ಬನ್ನಿ..’ ಎಂದು ಅವರು ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವುದು ಭಯೋತ್ಪಾದಕರ ಉದ್ದೇಶವಾಗಿತ್ತು. ಆದರೆ ಅತುಲ್ ಅವರ ಉದ್ದೇಶ ಈಡೇರಲು ಬಿಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕುಪ್ವಾರದಲ್ಲಿ ಮನೆಯ ಎದುರೇ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ದುಷ್ಕರ್ಮಿ ಪರಾರಿ
‘ಈ ವಿಮಾನಗಳು ಭರ್ತಿಯಾಗಿದ್ದವು. ನಾವು ಅವುಗಳನ್ನು ಪುನಃ ತುಂಬಿಸಬೇಕಾಗಿದೆ. ನಾವು ಭಯೋತ್ಪಾದನೆಯನ್ನು ಸೋಲಿಸಲು ಬಯಸುತ್ತೇವೆ’ ಎಂದು ಅವರು ವಿಮಾನ ಪ್ರಯಾಣದ ಫೋಟೋಗಳನ್ನು ಪೋಸ್ಟ್ ಮಾಡಿ ಬರೆದಿದ್ದಾರೆ. ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕಾಶ್ಮೀರದ ವೀಡಿಯೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಲು ಅಲ್ಲಿನ ನಾಗರಿಕರು ರ್ಯಾಲಿ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ. ಅತುಲ್ ಅವರು ಕನ್ನಡದಲ್ಲಿ ‘ಆ ದಿನಗಳು’, ‘ಉಗ್ರಂ’, ‘ಯಕ್ಷ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಅತುಲ್ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.