ಶಾಲಾ-ಕಾಲೇಜು ಪ್ರವೇಶ​ ಶುಲ್ಕ ಇಳಿಸಿ ಎಂಬ ಕೂಗಿಗೆ ಧ್ವನಿಯಾದ ಕಿರಣ್​ ರಾಜ್​; ಸಿಎಂ ಯಡಿಯೂರಪ್ಪಗೆ ಪತ್ರ

Kiran Raj: ಮಕ್ಕಳು ಆನ್​ಲೈನ್ ಮೂಲಕ​ ಶಿಕ್ಷಣ ಪಡೆಯುತ್ತಿದ್ದಾರೆ. ಕಲಿಕೆ ಎಲ್ಲವೂ ಆನ್​ಲೈನ್​ನಲ್ಲೇ ಆಗುವಾಗ ಶಾಲೆಯ ಆಡಳಿತ ಮಂಡಳಿ ಸಂಪೂರ್ಣ ಫೀ ನೀಡುವಂತೆ ಕೇಳುತ್ತಿರುವುದು ಏಕೆ ಎಂಬುದು ಕೆಲವರ ಪ್ರಶ್ನೆಯಾಗಿತ್ತು.

ಶಾಲಾ-ಕಾಲೇಜು ಪ್ರವೇಶ​ ಶುಲ್ಕ ಇಳಿಸಿ ಎಂಬ ಕೂಗಿಗೆ ಧ್ವನಿಯಾದ ಕಿರಣ್​ ರಾಜ್​; ಸಿಎಂ ಯಡಿಯೂರಪ್ಪಗೆ ಪತ್ರ
ಶಾಲಾ-ಕಾಲೇಜು ಪ್ರವೇಶ​ ಶುಲ್ಕ ಇಳಿಸಿ ಎಂಬ ಕೂಗಿಗೆ ಕಿರಣ್​ ರಾಜ್​ ಧ್ವನಿಯಾಗಿದ್ದಾರೆ
Follow us
|

Updated on:May 21, 2021 | 7:58 PM

ಕೊವಿಡ್​ ಮೊದಲನೇ ಅಲೆ ತಣ್ಣಗಾಯಿತು ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಶಾಲಾ-ಕಾಲೇಜುಗಳನ್ನು ಮತ್ತೆ ಮುಚ್ಚಲಾಗಿದ್ದು, ಆನ್​ಲೈನ್​ ಮೂಲಕ ತರಗತಿ ನಡೆಸಲಾಗುತ್ತಿದೆ. ಆದರೆ, ಅನೇಕ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಶುಲ್ಕ ಮಾತ್ರ ಕಡಿಮೆ ಮಾಡಿಲ್ಲ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಪಾಲಕರು ರಸ್ತೆಗೆ ಇಳಿದು ಇದನ್ನು ವಿರೋಧಿಸಿದ್ದಾರೆ. ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಈಗ ಇದಕ್ಕೆ ಕಿರುತೆರೆ ನಟ ಕಿರಣ್​ ರಾಜ್​ ಕೂಡ ಧ್ವನಿಗೂಡಿಸಿದ್ದಾರೆ.

ಮಕ್ಕಳು ಆನ್​ಲೈನ್ ಮೂಲಕ​ ಶಿಕ್ಷಣ ಪಡೆಯುತ್ತಿದ್ದಾರೆ. ಕಲಿಕೆ ಎಲ್ಲವೂ ಆನ್​ಲೈನ್​ನಲ್ಲೇ ಆಗುವಾಗ ಶಾಲೆಯ ಆಡಳಿತ ಮಂಡಳಿ ಸಂಪೂರ್ಣ ಫೀ ನೀಡುವಂತೆ ಕೇಳುತ್ತಿರುವುದು ಏಕೆ ಎಂಬುದು ಕೆಲವರ ಪ್ರಶ್ನೆಯಾಗಿತ್ತು. ಇನ್ನು, ಈ ಸಂಕಷ್ಟದ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ, ಮಕ್ಕಳ ಶಾಲಾ ಫೀಸ್​ ಕಟ್ಟಲು ಆಗುತ್ತಿಲ್ಲ. ಈ ಕಷ್ಟದ ಪರಿಸ್ಥಿತಿಯಲ್ಲಿ ಕಿರಣ್​ ರಾಜ್​ ಕೂಡ ಈ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರೂಪ್ಪ ಹಾಗೂ ಶಿಕ್ಷಣ ಸಚಿವರಿಗೆ ಓಪನ್​ ಲೆಟರ್​ ಬರೆದಿರುವ ಅವರು,  ಜಗತ್ತಿನೆಲ್ಲೆಡೆ ಕೊವಿಡ್​ 19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಇನ್ನು, ಮಕ್ಕಳು ಶಾಲಾ ಕಾಲೇಜು ಇಲ್ಲದೆ ಆನ್​ಲೈನ್​ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜು ಶುಲ್ಕ ಸ್ವಲ್ಪವೂ ಇಳಿದಿಲ್ಲ. ದಯವಿಟ್ಟು ಶಾಲಾ ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂದು ಈ ಮೂಲಕ ನಿಮ್ಮಲ್ಲಿ ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಮ್ಮ ಈ ವಿನಂತಿ ಪರಿಗಣಿಸಿ ಪರಿಶೀಲಿಸಿ ಜನರ ಬೆನ್ನೆಲುವಾಗಿ ನಿಲ್ಲುವಿರೆನ್ನುವ ವಿಶ್ವಾಸವಿದೆ ಎಂದು ಕಿರಣ್​ ರಾಜ್​ ಬರೆದುಕೊಂಡಿದ್ದಾರೆ.

View this post on Instagram

A post shared by Kiran Raj (@itskiranraj)

ಕೊವಿಡ್​ ಸಂಕಷ್ಟದ ಸಮಯದಲ್ಲಿ ಕಿರಣ್​ ರಾಜ್​ ಸುಮ್ಮನೆ ಕೂತಿಲ್ಲ. ಸಂಕಷ್ಟದಲ್ಲಿರುವ ಸಾಕಷ್ಟು ಜನರಿಗೆ ಊಟ ಹಂಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಿತ್ಯ ಸುಮಾರು ಒಂದು ಸಾವಿರ ಜನರಿಗೆ ಅವರು ಊಟ ನೀಡುತ್ತಿದ್ದಾರೆ. ಇದಲ್ಲದೆ ದಿನಸಿ ಕಿಟ್​ಗಳನ್ನು ಕೂಡ ವಿತರಿಸುತ್ತಿದ್ದಾರೆ. ಕಿರಣ್​ ರಾಜ್​ ಫೌಂಡೇಷನ್​ ಅಡಿಯಲ್ಲಿ ಅವರು ಮಾಡುತ್ತಿರುವ ಕಾರ್ಯಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಅನೇಕರು ಕಿರಣ್​ ರಾಜ್​ಗೆ ಬೆಂಬಲವಾಗಿ ನಿಂತಿದ್ದಾರೆ.

ಇದನ್ನೂ ಓದಿ: Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್

‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

Published On - 7:55 pm, Fri, 21 May 21