ಡ್ರಗ್ಸ್ ಪ್ರಕರಣ: ನಟನ ಮನೆ ಮೇಲೆ ಅಧಿಕಾರಿಗಳ ದಾಳಿ

|

Updated on: Sep 19, 2023 | 7:05 PM

Drugs Case: ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ತಲೆ ಎತ್ತಿದೆ. ನಟ ನವದೀಪ್ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಅವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಡ್ರಗ್ಸ್ ಪ್ರಕರಣ: ನಟನ ಮನೆ ಮೇಲೆ ಅಧಿಕಾರಿಗಳ ದಾಳಿ
ನವದೀಪ್
Follow us on

ತೆಲುಗು ಚಿತ್ರರಂಗಕ್ಕೆ (Tollywood) ಮತ್ತೊಮ್ಮೆ ಡ್ರಗ್ಸ್ (Drugs) ಕಳಂಕ ಅಂಟಿಕೊಂಡಿದೆ. ಈ ಹಿಂದೆಯೂ ಕೆಲವು ಬಾರಿ ಟಾಲಿವುಡ್​ನ ಕೆಲ ಘಟಾನುಘಟಿಗಳೇ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬಿದ್ದು ವಿಚಾರಣೆ ಎದುರಿಸಿದ್ದರು. ಇದೀಗ ಮತ್ತೊಮ್ಮೆ ಟಾಲಿವುಡ್​ನಲ್ಲಿ ಡ್ರಗ್ಸ್ ಪ್ರಕರಣ ಆತಂಕದ ಅಲೆಗಳನ್ನು ಮೂಡಿಸಿದೆ. ಇತ್ತೀಚೆಗಷ್ಟೆ ಮಾದಾಪುರ ಪೊಲೀಸ್ ಹಾಗೂ ಮಾದಕ ವಸ್ತು ನಿಗ್ರಹ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚಾರಣೆಯಲ್ಲಿ ದೊಡ್ಡ ಡ್ರಗ್ಸ್ ರಾಕೆಟ್ ಅನ್ನು ಪತ್ತೆಹಚ್ಚಿ ಕೆಲವರನ್ನು ಬಂಧಿಸಲಾಗಿತ್ತು. ಅದರಲ್ಲಿ ಒಬ್ಬ ತೆಲುಗು ನಟನ ಹೆಸರು ಹಾಗೂ ನಿರ್ಮಾಪಕನ ಹೆಸರು ಕೇಳಿ ಬಂದಿತ್ತು. ಇದೀಗ ನಟನ ಮನೆಯ ಮೇಲೆ ಡ್ರಗ್ಸ್ ನಿಗ್ರಹ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸೆಪ್ಟೆಂಬರ್ 13ರಂದು ಹೈದರಾಬಾದ್​ನ ಫ್ರೆಶ್ ಲಿವಿಂಗ್ ಅಪಾರ್ಟ್​ಮೆಂಟ್​ ಮೇಲೆ ದಾಳಿ ನಡೆಸಿದ್ದ ನಾರ್ಕೊಟಿಕ್ಸ್ ಬ್ಯೂರೋ ಹಾಗೂ ಮಾದಾಪುರ ಪೊಲೀಸರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. ಅದರಲ್ಲಿ ಕೆಲವು ನೈಜೀರಿಯನ್ ಪ್ರಜೆಗಳು ಒಬ್ಬ ಸಿನಿಮಾ ನಿರ್ದೇಶಕ, ಮಾಜಿ ಸಂಸದರೊಬ್ಬರ ಮಗನನ್ನೂ ಬಂಧಿಸಲಾಗಿತ್ತು. ಅದೇ ಪ್ರಕರಣದಲ್ಲಿ ನಟ ನವದೀಪ್ ಹೆಸರು ಸಹ ಕೇಳಿ ಬಂದಿತ್ತು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ನವದೀಪ್, ಪೊಲೀಸರು ಹೇಳಿರುವ ನವದೀಪ್ ತಾನಲ್ಲ ಎಂದಿದ್ದರು. ಆದರೆ ಈಗ ಅಧಿಕಾರಿಗಳು ನವದೀಪ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮಾದಕ ವಸ್ತು ಸೇವೀಸುತ್ತೀರ ಎಂದವನಿಗೆ ಉತ್ತರ ಕೊಟ್ಟ ನಟಿ ಶ್ರುತಿ ಹಾಸನ್

ನವದೀಪ್ ವಸ್ತು ಖರೀದಿಸಿ, ಸೇವಿಸಿದ್ದಾರೆ ಎಂದು ಪೊಲೀಸರು ಹೇಳಿದ್ದು, ಶೀಘ್ರವೇ ನವದೀಪ್ ಅನ್ನು ಬಂಧಿಸುವುದಾಗಿ ಹೇಳಿದ್ದರು. ಆದರೆ ನವದೀಪ್, ತಮ್ಮ ಬಂಧಿಸದಿರವುಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನವದೀಪ್ ಅರ್ಜಿ ಆಲಿಸಿದ ಹೈಕೋರ್ಟ್, ಸೆಪ್ಟೆಂಬರ್ 19ರ ವರೆಗೆ ನವದೀಪ್ ಅನ್ನು ಬಂಧಿಸದಂತೆ ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೆ ನಾರ್ಕೊಟಿಕ್ಸ್ ಬ್ಯೂರೋ ಅಧಿಕಾರಿಗಳು ನವದೀಪ್​ರ ಮನೆಯ ಮೇಲೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ನವದೀಪ್ ಸಹ ಮನೆಯಲ್ಲೇ ಇದ್ದರು ಎನ್ನಲಾಗುತ್ತಿದೆ. ನವದೀಪ್ ವಿರುದ್ಧ ಪ್ರಬಲ ಸಾಕ್ಷ್ಯವನ್ನು ಕಲೆ ಹಾಕಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮಾದಾಪುರ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಂಸದ ಡಿ ವಿಟ್ಠಲ್ ರಾವ್ ಪುತ್ರ ದೇವರಕೊಂಡ ಸುರೇಶ್ ರಾವ್, ಸಿನಿಮಾ ನಿರ್ದೇಶಕ ಅನುಗು ಸುಶಾಂತ್ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ನವದೀಪ್ ಹಾಗೂ ನಿರ್ಮಾಪಕ ರವಿ ಉಪ್ಪಲಪಟ್ಟಿಯನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದರು. ಇದೇ ಪ್ರಕರಣದಲ್ಲಿ ಇತ್ತೀಚೆಗಿನ ಸೂಪರ್ ಹಿಟ್ ತೆಲುಗು ಸಿನಿಮಾ ‘ಬೇಬಿ’ಗೆ ನೊಟೀಸ್ ಸಹ ನೀಡಲಾಗಿತ್ತು. ಸಿನಿಮಾದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ಮಾಹಿತಿಗಳನ್ನು ತೋರಿಸಿದ್ದ ಕಾರಣ ಸ್ಪಷ್ಟನೆ ನೀಡುವಂತೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನೊಟೀಸ್ ಕಳಿಸಲಾಗಿತ್ತು.

ಇನ್ನು ನಟ, ನವದೀಪ್​ಗೆ ಡ್ರಗ್ಸ್ ಪ್ರಕರಣ ಹೊಸದೇನೂಆ ಅಲ್ಲ. ಈ ಹಿಂದೆ ಎರಡು ಬಾರಿ ಡ್ರಗ್ಸ್ ಪ್ರಕರಣದಲ್ಲಿ ನವದೀಪ್ ವಿಚಾರಣೆ ಎದುರಿಸಿದ್ದಾರೆ. ತಾವು ಡ್ರಗ್ಸ್ ಸೇವಿಸಿರುವುದಾಗಿ ಬಹಿರಂಗವಾಗಿಯೂ ಒಪ್ಪಿಕೊಂಡಿದ್ದರು. ಆದರೆ ತಾವು ಬದಲಾಗಿರುವುದಾಗಿಯೂ ಹೇಳಿದ್ದರು. ಆದರೆ ಈಗ ಮತ್ತೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

ನಟ ನವದೀಪ್, 2004ರಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿರುವ ನವದೀಪ್, ಇತ್ತೀಚೆಗೆ ಎರಡನೇ ನಾಯಕ, ವಿಲನ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ನವದೀಪ್ ನಟನೆಯ ‘ಈಗಲ್’ ಹಾಗೂ ‘ಲವ್ ಮೋಲಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ