Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​

Actor Vivek Death: ನಟ ವಿವೇಕ್​ ಶನಿವಾರ (ಏ.17) ಬೆಳಗ್ಗೆ ಕೊನೆಯುಸಿರೆಳೆದಿದ್ದು, ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸ್ಯಾಂಡಲ್​ವುಡ್​ನ ಹಲವರು ವಿವೇಕ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​
(ಕಾಲಿವುಡ್​ ನಟ ವಿವೇಕ್​)

Updated on: Apr 17, 2021 | 12:07 PM

ತಮಿಳು ಚಿತ್ರರಂಗದ ಖ್ಯಾತ ನಟ ವಿವೇಕ್​ ಅವರು ಶನಿವಾರ (ಏ.17) ನಿಧನನಾದರು. ಅವರ ಅಗಲಿಕೆಗೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ರಜನಿಕಾಂತ್​, ಪುನೀತ್​ ರಾಜ್​ಕುಮಾರ್​ ಪ್ರಕಾಶ್​ ರೈ, ಎ.ಆರ್​. ರೆಹಮಾನ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿವೇಕ್​ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

2007ರಲ್ಲಿ ತೆರೆಕಂಡ ‘ಶಿವಾಜಿ’ ಸಿನಿಮಾದಲ್ಲಿ ರಜನಿಕಾಂತ್​ ಮತ್ತು ವಿವೇಕ್​ ಜೊತೆಯಾಗಿ ನಟಿಸಿದ್ದರು. ‘ಸಾಮಾಜಿಕ ಕಾರ್ಯಕರ್ತ, ನನ್ನ ಆತ್ಮೀಯ ಗೆಳೆಯ ವಿವೇಕ್​ ನಿಧನ ಆಗಿರುವುದು ನೋವಿನ ಸಂಗತಿ. ಶಿವಾಜಿ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ಅವರ ಜೊತೆ ಕಳೆದ ಪ್ರತಿ ದಿನ ಕೂಡ ನನ್ನ ಜೀವನದಲ್ಲಿ ಮರೆಲಾಗದ ಕ್ಷಣಗಳು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ವಿವೇಕ್​ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಜನಿಕಾಂತ್​ ಟ್ವೀಟ್​ ಮಾಡಿದ್ದಾರೆ.

‘ವಿವೇಕ್​ ನೀವು ನಮ್ಮನ್ನು ಬಿಟ್ಟು ಹೋದ್ರಿ ಎಂಬುದನ್ನು ನಂಬೋಕೆ ಆಗ್ತಾ ಇಲ್ಲ. ದಶಕಗಳ ಕಾಲ ನೀವು ನಮಗೆ ಮನರಂಜನೆ ನೀಡಿದ್ದೀರಿ. ಆ ಮೂಲಕ ನಿಮ್ಮ ನೆನಪು ನಮ್ಮೊಂದಿಗೆ ಶಾಶ್ವತವಾಗಿ ಇರುತ್ತದೆ’ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಆತ್ಮೀಯ ಸ್ನೇಹಿತನೇ ತುಂಬ ಬೇಗ ಹೋಗಿಬಿಟ್ಟೆ. ಚಿಂತನೆಗಳನ್ನು ಮತ್ತು ಮರಗಳನ್ನು ನೆಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಹಾಸ್ಯಪ್ರಜ್ಞೆಯಿಂದ ನಮ್ಮನ್ನು ಮನರಂಜಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬಹುಭಾಷಾ ನಟ ಪ್ರಕಾಶ್​ ರೈ ಟ್ವೀಟ್​ ಮಾಡಿದ್ದಾರೆ. ಕನ್ನಡದ ಅನೇಕ ನಟರು ಕೂಡ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

‘ವಿವೇಕ್​ ಸರ್​ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಮ್ಮ ಕಾಲದ ಅತಿ ನಲ್ಮೆಯ ಕಾಮಿಡಿ ನಟ ಅವರಾಗಿದ್ದರು’ ಎಂದು ಪುನೀತ್​ ರಾಜ್​ಕುಮಾರ್​ ಟ್ವೀಟ್​ ಮಾಡಿದ್ದಾರೆ. ‘ನಟ ವಿವೇಕ್​ ನಿಧನದ ಸುದ್ದಿ ಕೇಳಿ ಆಘಾತ ಆಗಿದೆ. ಅವರನ್ನು ಕೇವಲ ನಟ ಎಂದು ಕರೆದರೆ ಅವರ ಪ್ರತಿಭೆ, ಸಾಮಾಜಿಕ ಕಾರ್ಯ, ಬುದ್ಧಿವಂತಿಕೆಯನ್ನು ಕಡೆಗಣಿಸಿದಂತೆ ಆಗುತ್ತದೆ. ಅವರ ನಿಧನದಿಂದಾದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ’ ಎಂದು ಸುಮಲತಾ ಅಂಬರೀಷ್​ ಕಂಬನಿ ಮಿಡಿದಿದ್ದಾರೆ.

‘ನಿನ್ನೆ ತಾನೆ ಒಬ್ಬ ಮಹಾನ್ ಹಾಸ್ಯ ಕಲಾವಿದನ ಹುಟ್ಟುಹಬ್ಬವನ್ನು ‌ನೆನಪಿಸಿಕೊಂಡೆ. ದುರಾದೃಷ್ಟವಶಾತ್ ಇಂದು ಒಬ್ಬ ಅಪ್ರತಿಮ ಹಾಸ್ಯ ಕಲಾವಿದ ವಿವೇಕ್ ಸರ್ ಅವರನ್ನು ಭಾರತ ಚಿತ್ರರಂಗ ಕಳೆದುಕೊಂಡಿದೆ. ಆ ಅದ್ಬುತ ಕಲೆಗಾರನಿಂದ ಸ್ಫೂರ್ತಿ ಪಡೆದು ನಾನು ಕಲ್ತಿರೋದು ಸಾಕಷ್ಟಿದೆ. ವಿವೇಕ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ’ ಎಂದು ನಟ ಶರಣ್​ ಪೋಸ್ಟ್ ಮಾಡಿದ್ದಾರೆ.

ಶುಕ್ರವಾರ ವಿವೇಕ್​ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಆಗುವುದಕ್ಕೂ ಒಂದು ದಿನ ಮುನ್ನ ಅವರು ಕೊವಿಡ್​ ಲಸಿಕೆ ಹಾಕಿಸಿಕೊಂಡಿದ್ದರು. ವಿವೇಕ್​ ನಿಧನಕ್ಕೂ ಕೊವಿಡ್​ ಲಸಿಕೆಗೂ ಸಂಬಂಧ ಇಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Vivek Passes Away: ಚಿಕಿತ್ಸೆ ಫಲಕಾರಿಯಾಗದೆ ತಮಿಳು ನಟ ವಿವೇಕ್​ ನಿಧನ

(Actor Vivekh death: Rajinikanth Puneeth Rajkumar and others mourn the demise of tamil actor Vivek)

Published On - 12:00 pm, Sat, 17 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us