ಅಲ್ಲು ಅರ್ಜುನ್ ಬಂಧನ: ಪ್ರಕರಣ ಏನು? ನಟನ ಮೇಲೆ ಹೊರಿಸಿರುವ ಆರೋಪವೇನು?
Allu Arjun Arrest: ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಚೀಕಟಪಲ್ಲಿ ಪೊಲೀಸ್ ಠಾಣೆಗೆ ಅಲ್ಲು ಅರ್ಜುನ್ ಅನ್ನು ಕರೆದೊಯ್ಯಲಾಗಿದೆ. ಅಂದಹಾಗೆ ಯಾವ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನವಾಗಿದೆ. ಅಲ್ಲು ಅರ್ಜುನ್ ಮೇಲಿರುವ ಆರೋಪಗಳೇನು? ಇಲ್ಲಿದೆ ಮಾಹಿತಿ.
ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ನ ಚೀಕಟಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಒಬ್ಬ ಮಹಿಳೆಯ ನಿಧನಕ್ಕೆ ಕಾರಣವಾದ ಆರೋಪದ ಮೇಲೆ ಅಲ್ಲು ಅರ್ಜುನ್ ಅನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ಎರಡು ತೆಲುಗು ರಾಜ್ಯಗಳ ಅಲ್ಲು ಅರ್ಜುನ್ ಅಭಿಮಾನಿಗಳು, ಸಿನಿಮಾ ರಂಗದ ಪ್ರಮುಖರು ಆಘಾತಗೊಂಡಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಡಿಸೆಂಬರ್ 05 ರಂದು ಬಿಡುಗಡೆ ಆಗಿತ್ತು. ಅದಕ್ಕೆ ಹಿಂದಿನ ದಿನ ಅಂದರೆ ಡಿಸೆಂಬರ್ 04 ರಂದು ತೆಲಂಗಾಣ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಶೇಷ ಶೋಗಳನ್ನು ಆಯೋಜಿಸಲಾಗಿತ್ತು. ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿಯೂ ಸಹ ಬೆನಿಫಿಟ್ ಶೋ ಆಯೋಜನೆ ಮಾಡಲಾಗಿತ್ತು. ಈ ಶೋಗೆ ಅಲ್ಲು ಅರ್ಜುನ್ ಆಗಮಿಸಿದ್ದರು. ಈ ವೇಳೆ ಅಲ್ಲು ಅರ್ಜುನ್ ಅನ್ನು ಕಾಣಲು ಭಾರಿ ಸಂಖ್ಯೆಯ ಜನ ಒಮ್ಮೆಲೆ ಮುಗಿಬಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ನಿಧನ ಹೊಂದಿದರು. ಅವರ ಪುತ್ರ ಶ್ರೀತೇಜ ತೀವ್ರವಾಗಿ ಗಾಯಗೊಂಡಿದ್ದರು.
ನಿಧನ ಹೊಂದಿದ ರೇವತಿಯ ಪತಿ ಭಾಸ್ಕರ್ ಅವರು ಡಿಸೆಂಬರ್ 05 ರಂದು ಸಂಧ್ಯಾ ಥಿಯೇಟರ್ ಮಾಲೀಕರು ಮತ್ತು ಸಿಬ್ಬಂದಿ ಹಾಗೂ ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದರು. ದೂರು ಆಧರಿಸಿ ಈಗಾಗಲೇ ಸಂಧ್ಯಾ ಚಿತ್ರಮಂದಿರದ ಮಾಲೀಕರು, ಮ್ಯಾನೇಜರ್ ಅನ್ನು ಪೊಲೀಸರು ಬಂಧಿಸಿದ್ದರು. ಅಲ್ಲು ಅರ್ಜುನ್ರ ಇಬ್ಬರು ಬಾಡಿಗಾರ್ಡ್ಗಳನ್ನು ಸಹ ಬಂಧಿಸಿದ್ದರು. ಅಲ್ಲು ಅರ್ಜುನ್ಗೂ ಸಹ ಈ ಕುರಿತು ನೊಟೀಸ್ ನೀಡಲಾಗಿತ್ತು. ಆದರೆ ಇಂದು ಬೆಳಿಗ್ಗೆ ಹಠಾತ್ತನೆ ಅಲ್ಲು ಅರ್ಜುನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ನಟ ಅಲ್ಲು ಅರ್ಜುನ್ ಅರೆಸ್ಟ್
ಅಲ್ಲು ಅರ್ಜುನ್, ಡಿಸೆಂಬರ್ 04 ರಂದು ಪೊಲೀಸರಿಗೆ ಮಾಹಿತಿ ನೀಡದೆ ಸಂಧ್ಯಾ ಚಿತ್ರಮಂದಿರಕ್ಕೆ ತೆರಳಿದ್ದರು ಎನ್ನಲಾಗಿದೆ. ಅಲ್ಲದೆ ಅವರೊಟ್ಟಿಗೆ ಅಂದು ಸುಮಾರು 20 ಮಂದಿ ಬೌನ್ಸರ್ಗಳು ಇದ್ದು, ಅವರು ಅತಿರೇಕದಿಂದ ವರ್ತಿಸಿದರು. ಜನರನ್ನು ತಳ್ಳಿ-ನೂಕಿದ ಕಾರಣಕ್ಕೆ ಕಾಲ್ತುಳಿತ ಉಂಟಾಗಿ, ಅದರಲ್ಲಿ ಮಹಿಳೆ ರೇವತಿ ನಿಧನ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ಮೇಲೆ ಸೆಕ್ಷನ್ ಬಿಎನ್ಎಸ್ 118, ಬಿಎನ್ಎಸ್ 105 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಅಲ್ಲು ಅರ್ಜುನ್ ಅನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ತಮ್ಮ ಮೇಲೆ ದಾಖಲಾಗಿರುವ ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಅಲ್ಲು ಅರ್ಜುನ್, ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಅಲ್ಲಿ ಅರ್ಜಿ ವಿಚಾರಣೆ ಇನ್ನೂ ನಡೆದಿಲ್ಲ.
ಅಲ್ಲು ಅರ್ಜುನ್ ಬಂಧನದ ವಿಡಿಯೋ ಇಲ್ಲಿದೆ
ಮಹಿಳೆ ರೇವತಿ ಸಾವಿನ ಬಳಿಕ ವಿಡಿಯೋ ಬಿಡುಗಡೆ ಮಾಡಿದ್ದ ಅಲ್ಲು ಅರ್ಜುನ್, ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಹಣ ಸಹಾಯ ನೀಡುವುದಾಗಿ ಹೇಳಿದ್ದರು. ಜೊತೆಗೆ ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಪುತ್ರನ ಎಲ್ಲ ಚಿಕಿತ್ಸೆಯ ಹೊರೆಯನ್ನು ತಾವೇ ಹೊರುವುದಾಗಿ ಹಾಗೂ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ಇರುವುದಾಗಿಯೂ ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.
ಇದೀಗ ಅಲ್ಲು ಅರ್ಜುನ್ ಅನ್ನು ಬಂಧಿಸಿ ಚೀಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ವಿಚಾರಣೆ ನಡೆಯಲಿದೆ. ಅಲ್ಲು ಅರ್ಜುನ್ಗೆ ಸ್ಟೇಷನ್ ಬೇಲ್ ನೀಡಿ ಕಳಿಸಿಕೊಡಲಾಗುತ್ತದೆಯೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆಯೋ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Fri, 13 December 24