Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ವಿವಾದ ಸುಖಾಂತ್ಯ: ಅಸಮಾಧಾನ ಮರೆತು ಒಂದಾದ ಅನಿರುದ್ದ್, ಆರೂರು ಜಗದೀಶ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 10, 2022 | 8:07 PM

ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ. ಇಂದು (ಡಿ. 10) ನಡೆದ ಸಭೆಯಲ್ಲಿ ಅಸಮಾಧಾನ ಮರೆತು ಒಂದಾದ ನಟ ಅನಿರುದ್ದ್ ಮತ್ತು ನಿರ್ದೇಶಕ ಆರೂರು ಜಗದೀಶ್.

Jothe Jotheyali: ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ: ಅಸಮಾಧಾನ ಮರೆತು ಒಂದಾದ ಅನಿರುದ್ದ್, ಆರೂರು ಜಗದೀಶ್
ಆರೂರು ಜಗದೀಶ್, ನಟ ಅನಿರುದ್ಧ್
Follow us on

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಖ್ಯಾತಿಯ ನಟ ಅನಿರುದ್ದ್ (Anirudh Jatkar)​ ಸಾಕಷ್ಟು ವಿವಾದ ನಂತರ ಮತ್ತೆ ಕಿರುತೆಗೆ ಬರಲು ಸಿದ್ಧರಾಗಿದ್ದ ಅವರಿಗೆ ಸಂಕಷ್ಟ ಶುರುವಾಗಿತ್ತು. ಇದರಿಂದ ಬೆಸತ್ತು ನಟ ಅನಿರುದ್ದ್ ಅವರು ನಿನ್ನೆ (ಡಿ. 9) ಫಿಲ್ಮ ಚೇಂಬರ್​ಗೆ ಮೊರೆ ಹೋಗಿದ್ದರು. ಜೊತೆಗೆ ಸುದಿಗೋಷ್ಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಜೊತೆ ಜೊತೆಯಲಿ’ ಧಾರಾವಾಹಿ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಸ್ಪಷ್ಟನೆ ನೀಡಿದ್ದರು. ಸದ್ಯ ಇಂದು (ಡಿ.10) ನಡೆದ ಸಭೆಯಲ್ಲಿ ಅಸಮಾಧಾನ ಮರೆತು ನಟ ಅನಿರುದ್ದ್ ಮತ್ತು ನಿರ್ದೇಶಕ ಆರೂರು ಜಗದೀಶ್ ಒಂದಾಗಿದ್ದಾರೆ. ಅಲ್ಲಿಗೆ ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯವಾಗಿದೆ.

ಅನಿರುದ್ದ್ ಅವರು ಸಭೆ ಬಳಿಕ ಮಾತನಾಡಿದ್ದು, ‘ನಾವೆಲ್ಲರೂ ಒಂದು. ಕುಟುಂಬಗಳಲ್ಲಿ ಅಸಮಾಧಾನಗಳು ಇರುತ್ತವೆ. ಆದರೆ ಈಗ ನಡೆದ ಸಭೆಯಲ್ಲಿ ಚರ್ಚೆ ಮಾಡಿ ಎಲ್ಲವೂ ಬಗೆಹರಿದಿದೆ. ಜೀ ಕನ್ನಡ ವಾಹಿನಿಗೆ ಆರೂರು ಜಗದೀಶ್​ಗೆ ಒಳ್ಳೆಯದಾಗಲಿ. ಅವರು ಹೊಸ ಧಾರವಾಹಿ ಶುರು ಮಾಡುತ್ತಿದ್ದಾರೆ. ನನಗೆ ಸಪೋರ್ಟ್ ಆಗಿ ನಿಂತ ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದರು.

ಇದನ್ನೂ ಓದಿ: Anirudh: ಫಿಲ್ಮ್​ ಚೇಂಬರ್ ಅಂಗಳದಲ್ಲಿ ‘ಸೂರ್ಯವಂಶ’ ಧಾರಾವಾಹಿ ಚೆಂಡು: ನಾಳೆ ನಟ ಅನಿರುದ್ಧ್ ಭವಿಷ್ಯ ನಿರ್ಧಾರ

‘ಜೊತೆ ಜೊತೆಯಲಿ’ ಧಾರಾವಾಹಿಯ ನಿರ್ದೇಶಕರಾದ ಆರೂರು ಜಗದೀಶ್ ಮಾತನಾಡಿದ್ದು, ‘ಶಿಸ್ತನ್ನ‌ ಕಲಿಸಬೇಕು ಎಂದು ಈ ರೀತಿ ಮಾಡಿದ್ದೇವೆ ಹೊರತು ಮತ್ತೇನು ಇಲ್ಲ. ಅನಿರುದ್ದ್ ಅವರಿಗೆ ಒಳ್ಳಯದಾಗಲಿ’ ಎಂದರು. ಮತ್ತೆ ಒಟ್ಟಿಗೆ ಸೇರಿ ಕೆಲಸ ಮಾಡುತ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ನೋಡೋಣ ಎಂದರು ಆರೂರು ಜಗದೀಶ್. ಇಬ್ಬರು ಪರಸ್ಪರ ಒಟ್ಟಿಗೆ ನಿಂತು ಮನಸ್ತಾಪ ಬಗೆಹರಿದಿದೆ ಎಂದು ನಕ್ಕರು. ಒಟ್ಟಿನಲ್ಲಿ ನಾಲ್ಕು ತಿಂಗಳಿನಿಂದ ನಡೆಯುತ್ತಿದ್ದ ಹಗ್ಗಾ ಜಗ್ಗಾಟಕ್ಕೆ ತೆರೆ ಬಿದ್ದಿದೆ.

ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ. ಹರೀಶ್ ಮಾತನಾಡಿದ್ದು, ‘ನಿರ್ಮಾಪಕರ ಸಂಘದ ಜೊತೆ ಮಾತನಾಡಿದೆ ಎಲ್ಲರೂ ಅನಿರುದ್ಧ್ ಪರವಾಗಿ ನಿಂತಿದ್ದಾರೆಂದು ಅವರಿಗೆ ಮುಜುಗರ ಆಗಿದೆ. ಕೆಟಿವಿ ಅವರು ಅನಿರುದ್ದ್​ಗೆ ಕರೆ ಮಾಡಿದ್ದಾರೆ. ನಿರ್ಮಾಪಕರ ಸಂಘ ಅಲ್ಲಿಗೆ ಬರುತ್ತಿದೆ. ಉದಯ ಟಿವಿಗೆ ಹೋಗಿ ಎಸ್​. ನಾರಾಯಣ್ ಬಳಿಗೆ ಹೋಗಿ ಇವರನ್ನು ಹಾಕ್ಕೋಬೇಡಿ ಅಂತಿದ್ದಾರೆ. ನಾವು ನೋಡಿದ ಹಾಗೆ ಸಜ್ಜನಿಕೆ ಮನುಷ್ಯ ಅನಿರುದ್ಧ್, ದುರಂಹಕಾರಿ ಅಲ್ಲ. ಇಂಡಸ್ಟ್ರಿ ಅನಿರುದ್ಧ್ ಪರವಾಗಿ ಇದೆ. ಅವರಿಗೆ ಏನಾದರೂ ತೊಂದರೆ ಆದರೆ ನೋಡಿಕೊಳ್ಳುತ್ತೇವೆ’ ಎಂದು ಹೇಳಿದರು.

ನಿರ್ದೇಶಕ ಶೇಷಾದ್ರಿ ಪ್ರತಿಕ್ರಿಯೆ ನೀಡಿದ್ದು, ‘ಇಷ್ಟೋತ್ತು ನಾವೆಲ್ಲ ಚರ್ಚೆ ಮಾಡಿದ್ದೇವೆ. ನಾವೆಲ್ಲ ಒಂದೇ ಕುಟುಂಬದವರು. ಚಿತ್ರೀಕರಣ ಸಂದರ್ಭದಲ್ಲಿ ವ್ಯತ್ಯಾಸಗಳು ಆಗಿರೋದು ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದೀವಿ. ಇದಕ್ಕೆ ಆರೂರು ಜಗದೀಶ್ ಹಾಗೂ ಅನಿರುದ್ದ್ ಒಪ್ಪಿಕೊಂಡಿದ್ದಾರೆ. ಅನಿರುದ್ದ್ ಅವರ ಪಾಡಿಗೆ ಅವರು ಕೆಲಸ ನೋಡ್ಕೋತಾರೆ, ಜಗದೀಶ್ ಅವರು ಕೂಡ ಅಷ್ಟೇ. ಯಾರು ಯಾರನ್ನ ಬ್ಯಾನ್ ಮಾಡುವ ಅವಕಾಶ ಯಾರ ಬಾಯಿಂದಲೂ ಆ ಪದ ಬಂದಿಲ್ಲ. ಈ ಹಿಂದೆ ಆಗಿರೋ ಘಟನೆ ಮರೆತು ಮುಂದೆ ಹೋಗೋಣ. ನಮ್ಮ ಮನೆ ಸಮಸ್ಯೆ ನಾವು ಬಗೆಹರಸಿಕೊಳ್ಳುತ್ತೇವೆ ಚಲನಚಿತ್ರಕ್ಕೆ ಸಂಬಂಧ ಪಟ್ಟಿದ್ದು ಅಲ್ಲ’ ಎಂದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:53 pm, Sat, 10 December 22