‘ಅನುಷ್ಕಾ, ಸುಶಾಂತ್ ಸಿಂಗ್, ಸನ್ನಿ..’; ನೈತಿಕ ಮೌಲ್ಯಗಳ ಕಾರಣದಿಂದ ಕೋಟಿಗಟ್ಟಲೆ ಮೊತ್ತದ ಜಾಹಿರಾತು ಆಫರ್ ತಿರಸ್ಕರಿಸಿದ ತಾರೆಯರಿವರು
Anushka Sharma | Aamir Khan | Sunny Leone: ಬಾಲಿವುಡ್ನ ಘಟನಾಘಟಿ ತಾರೆಯರು ಹಣಕ್ಕಿಂತ ನೈತಿಕ ಮೌಲ್ಯವೇ ಮುಖ್ಯವೆಂದು ಕೋಟಿಗಟ್ಟಲೆ ಆಫರ್ ನೀಡಿದ ಜಾಹಿರಾತುಗಳನ್ನು ತಿರಸ್ಕರಿಸಿದ್ದಾರೆ. ಈ ಪಟ್ಟಿ ಬಹುದೊಡ್ಡದೇ ಇದೆ.

ಸೆಲೆಬ್ರಿಟಿಗಳು (Celebrity) ಚಿತ್ರಗಳಿಗಿಂತ ಹೆಚ್ಚು ಜಾಹಿರಾತು ಕ್ಷೇತ್ರದಿಂದ ಆದಾಯ ಪಡೆಯುತ್ತಾರೆ. ದೊಡ್ಡ ದೊಡ್ಡ ಕಂಪನಿಗಳ ರಾಯಭಾರಿಯಾಗುವ ತಾರೆಯರಿಗೆ ಕೋಟಿಗಟ್ಟಲೆ ಹಣ ಪಾವತಿಯಾಗುತ್ತದೆ. ಆದರೆ ಜಾಹಿರಾತುಗಳ ವಿಷಯಗಳು, ಯಾವ ಕಂಪನಿಗೆ ತಾರೆಯರು ಬೆಂಬಲ ನೀಡುತ್ತಾರೆ ಎಂಬ ವಿಚಾರಗಳು ಮೊದಲಿನಿಂದ ಹೆಚ್ಚು ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗೆ ಅಕ್ಷಯ್ ಕುಮಾರ್ (Akshay Kumar) ಪಾನ್ ಮಸಾಲಾ ಕಂಪನಿಯೊಂದರ ಜಾಹಿರಾತಿನಿಂದ ನೈತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. ಅಲ್ಲದೇ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯನ್ನೂ ಕೇಳಿದ್ದರು. ಇದಕ್ಕೂ ಮುನ್ನ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಪಾನ್ ಮಸಾಲಾ ಕಂಪನಿಯೊಂದರ ಜಾಹಿರಾತಿನಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ. ಬಾಲಿವುಡ್ನ ಘಟನಾಘಟಿ ತಾರೆಯರು ಹಣಕ್ಕಿಂತ ನೈತಿಕ ಮೌಲ್ಯವೇ ಮುಖ್ಯವೆಂದು ಕೋಟಿಗಟ್ಟಲೆ ಆಫರ್ ನೀಡಿದ ಜಾಹಿರಾತುಗಳನ್ನು ತಿರಸ್ಕರಿಸಿದ್ದಾರೆ. ಈ ಪಟ್ಟಿ ಬಹುದೊಡ್ಡದಿದೆ. ಅನುಷ್ಕಾ ಶರ್ಮಾ (Anushka Sharma), ಸುಶಾಂತ್ ಸಿಂಗ್ ರಜಪೂತ್, ಸನ್ನಿ ಲಿಯೋನ್ ಸೇರಿದಂತೆ ಹಲವು ತಾರೆಯರು ಹಣಕ್ಕಿಂತ ಸಾಮಾಜಿಕ ಹಾಗೂ ಮಾನವೀಯ ಮೌಲ್ಯ ದೊಡ್ಡದೆಂದು ಹೇಳಿದ್ದಾರೆ. ನೈತಿಕ ಕಾರಣ ನೀಡಿ ಜಾಹಿರಾತು ಆಫರ್ ತಿರಸ್ಕರಿಸಿದ ತಾರೆಯರ ಪಟ್ಟಿ ಇಲ್ಲಿದೆ.
ಅನುಷ್ಕಾ ಶರ್ಮಾ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಜಾಹಿರಾತು ಕ್ಷೇತ್ರದಲ್ಲಿ ದೊಡ್ಡ ಬೇಡಿಕೆ ಇದೆ. ಅದಾಗ್ಯೂ ಅನುಷ್ಕಾ ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ತಾನು ಫೇರ್ನೆಸ್ ಕ್ರೀಮ್ ಜಾಹಿರಾತುಗಳಲ್ಲಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಅವು ವರ್ಣ ತಾರತಮ್ಯವನ್ನು ಪ್ರತಿಪಾದಿಸುತ್ತವೆ ಎಂದಿದ್ದರು ನಟಿ.
ಸುಶಾಂತ್ ಸಿಂಗ್ ರಜಪೂತ್: ದಿ.ಸುಶಾಂತ್ ಸಿಂಗ್ ರಜಪೂತ್ ಕೂಡ ಈ ಹಿಂದೆ ಫೇರ್ನೆಸ್ ಕುರಿತ ಜಾಹಿರಾತೊಂದನ್ನು ತಿರಸ್ಕರಿಸಿದ್ದರು. ಆ ಜಾಹಿರಾತಿಗಾಗಿ ಸುಮಾರು 15 ಕೋಟಿ ರೂ ಮೊತ್ತದ ದೊಡ್ಡ ಆಫರ್ ಕೂಡ ನೀಡಲಾಗಿತ್ತಂತೆ. ಆದರೆ ಸುಶಾಂತ್ ಇದನ್ನು ಒಪ್ಪಿರಲಿಲ್ಲ ಎಂದು ಮಿಡ್ಡೇ ವರದಿ ಮಾಡಿದೆ. ಹಲವು ಜನರು ವೀಕ್ಷಿಸುವ ಜಾಹಿರಾತುಗಳನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎನ್ನುವ ಕಾರಣದಿಂದ ಸುಶಾಂತ್ ಆಫರ್ ನಿರಾಕರಿಸಿದ್ದರು.
ಆಮಿರ್ ಖಾನ್: 2013ರ ಸಮಯದಲ್ಲಿ ಆಮಿರ್ ಖಾನ್ಗೆ ಐಷಾರಾಮಿ ಕಾರೊಂದರ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ಆಫರ್ ನೀಡಲಾಗಿತ್ತು. ಆದರೆ ಅದನ್ನು ನಟ ತಿರಸ್ಕರಿಸಿದ್ದರು. ‘ಸತ್ಯಮೇವ ಜಯತೇ’ ಶೋನಲ್ಲಿ ಆಮಿರ್ ಕಾಣಿಸಿಕೊಂಡ ನಂತರ ಅವರು ತಮ್ಮ ಎಲ್ಲಾ ಜಾಹಿರಾತು ಒಪ್ಪಂದವನ್ನು ಮುಗಿಸಿದ್ದಲ್ಲದೇ, ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದರು ಎಂದು ವರದಿಯೊಂದು ಹೇಳಿದೆ. ಶೋ ನಿಂತು ಬಹಳ ಸಮಯವಾಗಿದ್ದರೂ ಈಗಲೂ ಆಮಿರ್ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತವೆ ವರದಿಗಳು.
ಅಮಿತಾಭ್ ಬಚ್ಚನ್: ಬಿಗ್ಬಿ ಅಮಿತಾಭ್ ಬಚ್ಚನ್ ಮೊದಲು ‘ಪೆಪ್ಸಿ’ಯ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪುಟ್ಟ ಹುಡುಗಿಯೊಬ್ಬಳು ಅವರಿಗೆ ಎದುರಾದಾಗ ತಮ್ಮ ಶಿಕ್ಷಕಿ ವಿಷ ಎಂದು ಹೇಳುವ ಪಾನೀಯದ ಜಾಹಿರಾತಿನಲ್ಲಿ ನೀವೇಕೆ ಕಾಣಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಳಂತೆ. ಒಂದು ಜಾಹಿರಾತು ಎಷ್ಟು ಜನರ ಮೇಲೆ ಪ್ರಭಾವ ಬೀರುತ್ತದೆ ಎಂದು ಅರಿವಾದ ನಂತರ ಆ ಜಾಹಿರಾತಿನಿಂದ ಹಿಂದೆ ಸರಿದೆ ಎಂದಿದ್ದರು ಅಮಿತಾಭ್. ಜತೆಗೆ ಅವರು ಆಲ್ಕೊಹಾಲ್, ಸಿಗರೇಟ್ ಕುರಿತ ಜಾಹಿರಾತುಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ತಮ್ಮ ಜೀವನದಲ್ಲೂ ಅವು ಭಾಗವಾಗಿಲ್ಲ, ಇನ್ನು ಅವುಗಳನ್ನು ನಾನೇಕೆ ಪ್ರಚಾರ ಮಾಡಲಿ ಎಂದಿದ್ದಾರೆ ಅಮಿತಾಭ್. ಇತ್ತೀಚೆಗೆ ಪಾನ್ ಮಸಾಲಾ ಬ್ರಾಂಡ್ನ ಜಾಹಿರಾತಿನಿಂದಲೂ ನಟ ಹಿಂದೆ ಸರಿದಿದ್ದರು.
ಸನ್ನಿ ಲಿಯೋನ್: ಬಹುಭಾಷಾ ನಟಿ ಸನ್ನಿ ಲಿಯೋನ್ ತಂಬಾಕುಯುಕ್ತ ಪದಾರ್ಥಗಳ ಜಾಹಿರಾತುಗಳಲ್ಲಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ.
ರಣಬೀರ್ ಕಪೂರ್: ಖ್ಯಾತ ನಟ ರಣಬೀರ್ ಕಪೂರ್ ಕೂಡ ಫೇರ್ನೆಸ್ ಕ್ರೀಂ ಕುರಿತ ಜಾಹಿರಾತು ಆಫರ್ ತಿರಸ್ಕರಿಸಿದ್ದರು. ಸುಮಾರು 9 ಕೋಟಿ ರೂಗಳ ಆಫರ್ ಅವರಿಗೆ ನೀಡಲಾಗಿತ್ತು. ವರ್ಣ ತಾರತಮ್ಯವನ್ನು ಹೆಚ್ಚಿಸುತ್ತವೆ ಎಂಬ ಕಾರಣವನ್ನು ನಟ ನೀಡಿದ್ದರು.
ರಣದೀಪ್ ಹೂಡಾ: ರಣದೀಪ್ ಅವರಿಗೂ ಫೇರ್ನೆಸ್ ಕ್ರೀಂ ಜಾಹಿರಾತಿನ ಆಫರ್ ನೀಡಲಾಗಿತ್ತು. ಇದು ವಸಾಹತು ಶಾಹಿ ಮನಸ್ಥಿತಿಯ ಪ್ರಭಾವ ಎಂದಿದ್ದ ಹೂಡಾ, ಭಾರತದಲ್ಲಿ ಇದು ಹೆಚ್ಚಿದೆ. ಆದರೆ ಜಗತ್ತಿನಲ್ಲಿ ಬಿಸಿಲಿನಲ್ಲಿ ಅಡ್ಡಾಡುತ್ತಾ, ಟ್ಯಾನ್ ಆಗುತ್ತಾರೆ. ಇಲ್ಲಿ ಮಾತ್ರ ಫೇರ್ನೆಸ್ ಎಂಬ ಕಲ್ಪನೆ ಬಿತ್ತಲಾಗುತ್ತಿದೆ. ಜಾಹಿರಾತುಗಳು ಬರೀ ಹಣಕ್ಕೆ ಸೀಮಿತವಲ್ಲ. ಹೀಗಾಗಿ ಆಫರ್ ತಿರಸ್ಕರಿಸಿದೆ ಎಂದಿದ್ದರು ರಣದೀಪ್ ಹೂಡಾ.
ಜಾನ್ ಅಬ್ರಹಾಂ: ಜಾನ್ ಅಬವ್ರಹಾಂ ಕೂಡ ತಂಬಾಕು ಹಾಗೂ ಆಲ್ಕೊಹಾಲ್ ಬ್ರಾಂಡ್ಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದರು.
ಸ್ವರ ಭಾಸ್ಕರ್: ನಟಿ ಸ್ವರ ಭಾಸ್ಕರ್ ಫೇರ್ನೆಸ್ ಕ್ರೀಂಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿ ಆಫರ್ ತಿರಸ್ಕರಿಸಿದ್ದರು.
ಇಮ್ರಾನ್ ಹಶ್ಮಿ: ನಟ ಇಮ್ರಾನ್ ಹಶ್ಮಿ ಆಲ್ಕೊಹಾಲ್ ಬ್ರಾಂಡ್ ಒಂದು ಜಾಹಿರಾತಿಗಾಗಿ ನೀಡಿದ್ದ 4 ಕೋಟಿ ರೂಗಳ ಮೊತ್ತದ ದೊಡ್ಡ ಆಫರ್ಅನ್ನು ತಿರಸ್ಕರಿಸಿದ್ದರು. ಜತೆಗೆ ಅದನ್ನು ಪ್ರಚಾರ ಮಾಡುವುದಿಲ್ಲ ಎಂದಿದ್ದರು.
ಅಲ್ಲು ಅರ್ಜುನ್: ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ತಂಬಾಕು ಉತ್ಪನ್ನಗಳ ಜಾಹಿರಾತು ಆಫರ್ ತಿರಸ್ಕರಿಸಿದ್ದರು. ಇದಕ್ಕಾಗಿ ಅವರಿಗೆ ದೊಡ್ಡ ಮೊತ್ತದ ಆಫರ್ ನೀಡಲಾಗಿತ್ತು. ‘‘ನಾನು ಅದನ್ನು ಸೇವಿಸುವುದಿಲ್ಲ. ಜತೆಗೆ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ’’ ಎಂದಿದ್ದರು ಅಲ್ಲು ಅರ್ಜುನ್.
ಸಾಯಿ ಪಲ್ಲವಿ: ನಟಿ ಸಾಯಿ ಪಲ್ಲವಿಗೂ ಫೇರ್ನೆಸ್ ಕ್ರೀಂ ಜಾಹಿರಾಥಿನ ಆಫರ್ ನೀಡಲಾಗಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ‘‘ನಮ್ಮದು ಭಾರತೀಯ ವರ್ಣ. ವಿದೇಶಗಳಲ್ಲಿರುವಂತೆ ನಮ್ಮ ಚರ್ಮದ ಬಣ್ಣ ಏಕೆ ಬದಲಾಗಬೇಕು?’’ ಎಂದು ನಟಿ ಈ ಬಗ್ಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: Sara Tendulkar: ಶೀಘ್ರದಲ್ಲೇ ಬಾಲಿವುಡ್ಗೆ ಎಂಟ್ರಿ ನೀಡಲಿದ್ದಾರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?
Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
Published On - 9:47 am, Tue, 26 April 22