ಮತ್ತೆ ನಾಗವಲ್ಲಿ ಆಗ್ತಾರಾ ಅನುಷ್ಕಾ ಶೆಟ್ಟಿ? ಬಹುನಿರೀಕ್ಷಿತ ಚಿತ್ರದ ಬಗ್ಗೆ ಕೇಳಿಬರ್ತಿದೆ ಗುಸುಗುಸು
ಬಾಹುಬಲಿ ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಬಳಿಕವೂ ಅನುಷ್ಕಾ ಶೆಟ್ಟಿ ಸೋಲು ಕಾಣುವಂತಾಗಿದ್ದು ಬೇಸರದ ಸಂಗತಿ. ಈಗ ಅವರು ಬಹಳ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕಿದೆ.
ನಟಿ ಅನುಷ್ಕಾ ಶೆಟ್ಟಿ ಈಗೇಕೋ ಕೊಂಚ ಸೈಲೆಂಟ್ ಆಗಿದ್ದಾರೆ ಇತ್ತೀಚೆಗೆ ಅವರು ಮಾಡುತ್ತಿರುವ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಕ್ಕೆ ಹಿಟ್ ಆಗುತ್ತಿಲ್ಲ. ಇದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಇದೆ. ಈ ವೇಳೆಗೆ ಸರಿಯಾಗಿ ಕಾಲಿವುಡ್ನಿಂದ ಒಂದು ಮಾಹಿತಿ ಕೇಳಿಬಂದಿದೆ. ರಾಘವ ಲಾರೆನ್ಸ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನಾಗವಲ್ಲಿ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.
2006ರಲ್ಲಿ ತಮಿಳಿನಲ್ಲಿ ‘ಚಂದ್ರಮುಖಿ’ ಸಿನಿಮಾ ತೆರೆಕಂಡಿತ್ತು. ತೆಲುಗಿಗೂ ಡಬ್ ಆಗಿ ಆ ಚಿತ್ರ ಬಿಡುಗಡೆ ಆಗಿತ್ತು. ಅದರ ಮುಂದುವರಿದ ಭಾಗ ಎಂಬಂತೆ ತೆಲುಗಿನಲ್ಲಿ ‘ನಾಗವಲ್ಲಿ’ ಚಿತ್ರ ನಿರ್ಮಾಣವಾದಾಗ ಅದರಲ್ಲಿ ನಾಗವಲ್ಲಿ ಪಾತ್ರ ಮಾಡುವ ಅವಕಾಶ ಅನುಷ್ಕಾ ಶೆಟ್ಟಿಗೆ ಒಲಿದಿತ್ತು. ಈಗ ತಮಿಳಿನಲ್ಲಿ ‘ಚಂದ್ರಮುಖಿ’ ಸೀಕ್ವೆಲ್ ಸಿದ್ಧವಾಗುತ್ತಿದೆ. ಅದಕ್ಕೆ ರಾಘವ ಲಾರೆನ್ಸ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿಯೂ ನಾಗವಲ್ಲಿ ಪಾತ್ರಕ್ಕೆ ಅನುಷ್ಕಾ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆಯಂತೆ.
ಈಗಾಗಲೇ ರಾಘವ ಲಾರೆನ್ಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ‘ನಾಗವಲ್ಲಿ’, ‘ಅರುಂಧತಿ’ ರೀತಿಯ ಸೂಪರ್ ನ್ಯಾಚುರಲ್ ಕಥೆ ಇರುವ ಸಿನಿಮಾಗಳಲ್ಲಿ ಅನುಷ್ಕಾರನ್ನು ನೋಡಲು ಜನರು ಇಷ್ಟಪಡುತ್ತಾರೆ. ಆ ಕಾರಣಕ್ಕಾಗಿಯೇ ಅವರಿಗೆ ಈ ಆಫರ್ ನೀಡಲಾಗಿದೆ ಎಂಬ ಮಾತು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.
ಅಂದಹಾಗೆ, ಅನುಷ್ಕಾ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳದೇ ಬಹಳ ದಿನಗಳೇ ಕಳೆದಿವೆ. 2018ರಲ್ಲಿ ಬಂದ ‘ಭಾಗವತಿ’ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ಆ ಬಳಿಕ ಬಂದ ‘ನಿಶಬ್ದಂ’ ಕೇವಲ ಓಟಿಟಿಗೆ ಸೀಮಿತವಾಯಿತು. ಅಮೇಜಾನ್ ಪ್ರೈಂನಲ್ಲಿ ತೆರೆಕಂಡ ಆ ಸಿನಿಮಾ ದೊಡ್ಡಮಟ್ಟಕ್ಕೆ ಸೌಂಡು ಮಾಡಲೇ ಇಲ್ಲ. ಬಾಹುಬಲಿ ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಬಳಿಕ ಅನುಷ್ಕಾ ಹೀಗೆ ಸೋಲು ಕಾಣುವಂತಾಗಿದ್ದು ಬೇಸರದ ಸಂಗತಿ. ಈಗ ಅವರು ಬಹಳ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ:
‘ಫಾಲೋ ಮಿ’; ಅಭಿಮಾನಿಗಳ ಬಳಿ ಅನುಷ್ಕಾ ಶೆಟ್ಟಿ ಮಾಡಿದ್ರು ವಿಶೇಷ ಮನವಿ
ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ