ಧನುಷ್​ ನಟನೆಯ ಕರ್ಣನ್​ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್​; ರಿಮೇಕ್​ನಲ್ಲಿ ಹೀರೋ ಯಾರು?

ಮಾರಿ ಸೆಲ್ವರಾಜ್​ ನಿರ್ದೇಶನ ಮಾಡಿರುವ ‘ಕರ್ಣನ್​’ ಮೇಲೆ ಈಗ ತೆಲುಗು ಮಂದಿ ಕಣ್ಣಿಟ್ಟಿದ್ದಾರೆ. ಟಾಲಿವುಡ್​ಗೆ ರಿಮೇಕ್​ ಮಾಡಲು ಸಕಲ ತಯಾರಿ ನಡೆದಿದೆ. ಹಳ್ಳಿ ಹಿನ್ನೆಲೆಯ ಕಥೆಯನ್ನು ಕರ್ಣನ್​ ಸಿನಿಮಾ ಹೊಂದಿದೆ.

ಧನುಷ್​ ನಟನೆಯ ಕರ್ಣನ್​ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್​; ರಿಮೇಕ್​ನಲ್ಲಿ ಹೀರೋ ಯಾರು?
ಧನುಷ್ ನಟನೆಯ ಕರ್ಣನ್ ಸಿನಿಮಾ ಪೋಸ್ಟರ್​

Updated on: May 01, 2021 | 11:09 AM

ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜನಮನ ಗೆದ್ದವರು ನಟ ಧನುಷ್​. ಹೀರೋಯಿಸಂ ಮತ್ತು ಬಿಲ್ಡಪ್​ಗಳಿಗೆ ಹೆಚ್ಚು ಬೆಲೆ ನೀಡದೇ ಪಾತ್ರಕ್ಕೆ ಶರಣಾಗುವುದು ಅವರ ರೂಢಿ. ಈ ಕಾರಣದಿಂದಲೇ ಅವರಿಗೆ ಕಾಲಿವುಡ್​ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರು ಮಾಡುವ ಸಿನಿಮಾಗಳು ಬೇರೆ ಭಾಷೆಗಳಿಗೂ ರಿಮೇಕ್​ ಆಗಿ ಅಲ್ಲಿನ ಪ್ರೇಕ್ಷಕರನ್ನು ರಂಜಿಸುತ್ತವೆ. ಈಗ ಧನುಷ್​ ನಟನೆಯ ‘ಕರ್ಣನ್​’ ಚಿತ್ರ ಕೂಡ ರಿಮೇಕ್​ ಆಗುತ್ತಿದೆ.

ಕೊರೊನಾ ಎರಡನೇ ಅಲೆಯ ಕಾರಣಕ್ಕಾಗಿ ಲಾಕ್​ಡೌನ್​ ಘೋಷಣೆ ಆಗುವುದಕ್ಕಿಂತ ಕೆಲವೇ ದಿನಗಳ ಮುಂಚೆ ಧನುಷ್ ನಟನೆಯ ಕರ್ಣನ್​ ಸಿನಿಮಾ ತೆರೆಕಂಡಿತ್ತು. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್​ ಕೂಡ ಆಯಿತು. ಮಾರಿ ಸೆಲ್ವರಾಜ್​ ನಿರ್ದೇಶನ ಮಾಡಿರುವ ‘ಕರ್ಣನ್​’ ಮೇಲೆ ಈಗ ತೆಲುಗು ಮಂದಿ ಕಣ್ಣಿಟ್ಟಿದ್ದಾರೆ. ಟಾಲಿವುಡ್​ಗೆ ರಿಮೇಕ್​ ಮಾಡಲು ಸಕಲ ತಯಾರಿ ನಡೆದಿದೆ.

ಹಳ್ಳಿ ಹಿನ್ನೆಲೆಯ ಕಥೆಯನ್ನು ಕರ್ಣನ್​ ಸಿನಿಮಾ ಹೊಂದಿದೆ. ಪಕ್ಕಾ ಹಳ್ಳಿ ಹೈದನಾಗಿ ಧನುಷ್ ನಟಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿ ತಯಾರಾದ ಈ ಚಿತ್ರ ತನ್ನ ಮೇಕಿಂಗ್​ ಮತ್ತು ಗುಣಮಟ್ಟದ ಕಾರಣಕ್ಕಾಗಿಯೇ ಗಮನ ಸೆಳೆದಿದೆ. ಹಾಗಾಗಿ ರಿಮೇಕ್​​ ಮಾಡುವವರಿಗೆ ಇದೊಂದು ಸವಾಲು ಕೂಡ ಹೌದು. ಅಂಥ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ ಟಾಲಿವುಡ್​ನ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್​​.

ಈಗಾಗಲೇ ಕರ್ಣನ್​ ರಿಮೇಕ್​ ಹಕ್ಕುಗಳನ್ನು ಕೊಂಡುಕೊಳ್ಳಲಾಗಿದ್ದು, ಬೆಲ್ಲಂಕೊಂಡ ಸುರೇಶ್​ ಅವರ ಪುತ್ರ ಬೆಲ್ಲಂಕೊಂಡ ಶ್ರೀನಿವಾಸ್​ ನಾಯಕನಾಗಿ ನಟಿಸಲಿದ್ದಾರೆ. ತೆಲುಗಿನ ನೇಟಿವಿಟಿಗೆ ತಕ್ಕಂತೆ ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕೌತುಕ ಈಗ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಬೆಲ್ಲಂಕೊಂಡ ಶ್ರೀನಿವಾಸ್​ ಜೊತೆ ಯಾರೆಲ್ಲ ನಟಿಸಲಿದ್ದಾರೆ, ಶೂಟಿಂಗ್​ ಯಾವಾಗ ಶುರು ಎಂಬಿತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: Dhanush: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೊಬೈಲ್​ಗೆ ಬಂತು ಧನುಷ್​ ಸಿನಿಮಾ ಕರ್ಣನ್​!

‘ಅಸುರನ್’ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್, ಫಸ್ಟ್​ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us