‘ಇನ್ಮೇಲೆ ಎಲ್ಲ ನಟರನ್ನೂ ಪ್ರೀತಿಸುತ್ತೇನೆ’: ವಿವಾದದ ಬಳಿಕ ಅರ್ಷದ್ ವಾರ್ಸಿ ನಿರ್ಧಾರ

ಪ್ರಭಾಸ್​ ಬಗ್ಗೆ ಅರ್ಷದ್ ವಾರ್ಸಿ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಬಳಿಕ ಅವರು ಎಚ್ಚೆತ್ತುಕೊಂಡಿದ್ದಾರೆ. ಇನ್ಮುಂದೆ ಎಲ್ಲ ನಟರನ್ನು ತಾವು ಪ್ರೀತಿಸುವುದಾಗಿ ಅರ್ಷದ್ ತಿಳಿಸಿದ್ದಾರೆ. ಜನರು ಈ ಮೊದಲು ಟ್ರೋಲ್ ಮಾಡಲು ಆರಂಭಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಅರ್ಷದ್ ವಾರ್ಸಿ ಅವರು ಕಮೆಂಟ್ ಆಯ್ಕೆಯನ್ನು ತೆಗೆದುಹಾಕಿದ್ದರು.

‘ಇನ್ಮೇಲೆ ಎಲ್ಲ ನಟರನ್ನೂ ಪ್ರೀತಿಸುತ್ತೇನೆ’: ವಿವಾದದ ಬಳಿಕ ಅರ್ಷದ್ ವಾರ್ಸಿ ನಿರ್ಧಾರ
ಪ್ರಭಾಸ್, ಅರ್ಷದ್ ವಾರ್ಸಿ

Updated on: Oct 22, 2024 | 4:52 PM

ಬಾಲಿವುಡ್ ನಟ ಅರ್ಷದ್​ ವಾರ್ಸಿ ಅವರು ಕೆಲವು ವಾರಗಳ ಹಿಂದೆ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸುವಾಗ ಅವರು, ‘ಪ್ರಭಾಸ್ ಪಾತ್ರ ಜೋಕರ್​ ರೀತಿ ಕಾಣಿಸುತ್ತಿದೆ’ ಎಂದು ಹೇಳಿದ್ದರು. ಇದರಿಂದ ಪ್ರಭಾಸ್ ಅಭಿಮಾನಿಗಳು ತೀವ್ರ ಟೀಕೆ ಮಾಡಿದ್ದರು. ಬಳಿಕ ಬಾಲಿವುಡ್ ವರ್ಸಸ್ ಸೌತ್ ಸಿನಿಮಾ ಎಂಬ ಚರ್ಚೆ ಜೋರಾಗಲು ಕೂಡ ಅವರ ಈ ಹೇಳಿಕೆ ಕಾರಣ ಆಗಿತ್ತು. ಆ ಘಟನೆಗಳ ಬಗ್ಗೆ ಈಗ ಅರ್ಷದ್​ ವಾರ್ಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಎಲ್ಲರಿಗೂ ಅವರವರ ದೃಷ್ಟಿಕೋನ ಇರುತ್ತದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ನೀವು ಪಾಸಿಟಿವ್ ವ್ಯಕ್ತಿ ಆಗಿದ್ದರೆ ಯಾವುದೇ ನೆಗೆಟಿವ್ ವಿಚಾರ ಎದುರಾದಾಗ ಅದು ನಿಮ್ಮನ್ನು ಬಾಧಿಸುತ್ತದೆ. ನಾವು ಕಲ್ಲು ಬೀಳುವ ಜಾಗದಲ್ಲಿ ಇದ್ದೇವೆ. ಈಗ ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅರ್ಷದ್ ವಾರ್ಸಿ ಅವರು ಹೇಳಿದ್ದಾರೆ.

ಪ್ರಭಾಸ್ ಮಾಡಿದ್ದ ಪಾತ್ರವನ್ನು ಜೋಕರ್​ ಎಂದು ಕರೆದ ಬಳಿಕ ಜನರು ಅರ್ಷದ್ ವಾರ್ಸಿ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಹಾಗಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಮೆಂಟ್ ಆಯ್ಕೆಯನ್ನು ಅರ್ಷದ್ ವಾರ್ಸಿ ಆಫ್ ಮಾಡಿದ್ದಾರೆ. ಆ ಬಗ್ಗೆ ಕೇಳಿದ್ದಕ್ಕೆ ‘ಅದು ಹೇಗೆ ಮಾಡುವುದು ಅಂತ ನನಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂಚಿತವಾಗಿ ನಟ ಪ್ರಭಾಸ್ ಜನ್ಮದಿನ ಆಚರಿಸಿದ ಟೋಕಿಯೋ ಅಭಿಮಾನಿಗಳು

ಒಮ್ಮೆ ಇಷ್ಟೆಲ್ಲ ಕಾಂಟ್ರವರ್ಸಿ ಆಗಿರುವುದರಿಂದ ಇನ್ಮುಂದೆ ಯಾವುದೇ ನಟರ ಬಗ್ಗೆ ಮಾತನಾಡುವಾಗ ಅರ್ಷದ್ ವಾರ್ಸಿ ಅವರು ಎಚ್ಚರಿಕೆ ವಹಿಸುತ್ತಾರೆ? ಈ ಪ್ರಶ್ನೆಗೆ ಅವರು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ಎಚ್ಚರಿಕೆ ವಹಿಸುತ್ತೇನೆ. ನಾನು ನೋಡುವ ಎಲ್ಲ ಸಿನಿಮಾವನ್ನೂ ಪ್ರೀತಿಸುತ್ತೇನೆ ಹಾಗೂ ಜೀವನದ ಕೊನೆಯ ತನಕ ಎಲ್ಲ ನಟರನ್ನೂ ನಾನು ಪ್ರೀತಿಸುವುದಾಗಿ ನಿರ್ಧಾರ ಮಾಡಿದ್ದೇನೆ’ ಎಂದಿದ್ದಾರೆ ಅರ್ಷದ್ ವಾರ್ಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us