ಶಾರುಖ್ ಪುತ್ರನ ಬಂಧನ ಪ್ರಕರಣ: ಎನ್​ಸಿಬಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಕೇಸು ದಾಖಲು, 25 ಕೋಟಿ ಲಂಚಕ್ಕೆ ಬೇಡಿಕೆ ಆರೋಪ

|

Updated on: May 12, 2023 | 9:53 PM

Shah Rukh Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದ ಎನ್​ಸಿಬಿ ಅಧಿಕಾರಿ ಸಮೀರ್ ವಿರುದ್ಧ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.

ಶಾರುಖ್ ಪುತ್ರನ ಬಂಧನ ಪ್ರಕರಣ: ಎನ್​ಸಿಬಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಕೇಸು ದಾಖಲು, 25 ಕೋಟಿ ಲಂಚಕ್ಕೆ ಬೇಡಿಕೆ ಆರೋಪ
ಆರ್ಯನ್ ಖಾನ್-ಸಮೀರ್
Follow us on

ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಬಂಧನ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆರ್ಯನ್ ಖಾನ್ ಅನ್ನು ಮಾದಕ ವಸ್ತು ನಿಗ್ರಹ ದಳ (ಎನ್​ಸಿಬಿ)ಯು ಮಾದಕ ವಸ್ತು ಬಳಕೆ ಪ್ರಕರಣದಲ್ಲಿ 2021 ರ ಅಕ್ಟೋಬರ್ 2 ರಂದು ಮುಂಬೈನ ಕ್ರುಡೇಲಿಯಾ ಕ್ರೂಸ್​ನಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ಅಕ್ಟೋಬರ್ 3 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರ್ಯನ್ ಖಾನ್ ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು. ಆದರೆ ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಅಧಿಕಾರಿಯ ವಿರುದ್ಧ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೂರು ದಾಖಲಾಗಿದೆ.

ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್​ಸಿಬಿಯ ಆಗಿನ ಮುಂಬೈ ವಲಯ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡಿದೆ. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅನ್ನು ಬಿಟ್ಟುಬಿಡಲು ಶಾರುಖ್ ಖಾನ್ ಕುಟುಂಬದ ಬಳಿ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪ ಸಮೀರ್ ವಾಂಖಡೆ ವಿರುದ್ಧ ಹೊರಿಸಲಾಗಿದೆ. ಶಾರುಖ್ ಖಾನ್ ಕುಟುಂಬದಿಂದ 25 ಕೋಟಿ ಬೇಡಿಕೆ ಇಟ್ಟಿದ್ದು ಮಾತ್ರವಲ್ಲದೆ ಅದಾಗಲೇ 50 ಲಕ್ಷ ಹಣವನ್ನು ಸಮೀರ್ ಪಡೆದಿದ್ದರಂತೆ. ಈ ಬಗ್ಗೆ ಶಾರುಖ್ ಖಾನ್ ಕುಟುಂಬವೂ ಹೇಳಿಕೆ ನೀಡಿದೆಯಂತೆ.

ಆರ್ಯನ್ ಖಾನ್ ಬಂಧನವಾದಾಗ ಹಲವು ಗೊಂದಲಗಳು ಮೂಡಿದ್ದವು. ಆರ್ಯನ್ ಖಾನ್ ಬಂಧಿಸುವಲ್ಲಿ ಎನ್​ಸಿಬಿ ಅಥವಾ ಪೊಲೀಸ್ ಇಲಾಖೆಗೆ ಸೇರದ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದರು. ಇದು ದೊಡ್ಡ ಅನುಮಾನಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಆರ್ಯನ್ ಖಾನ್ ಬಂಧನದಲ್ಲಿ ಭಾಗಿಯಾಗಿದ್ದ ಬಾಹ್ಯ ವ್ಯಕ್ತಿ ಗೋಸ್ವಾಮಿ ಎಂಬಾತನ ಚಾಲಕ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಗೋಸ್ವಾಮಿಯು ಶಾರುಖ್ ಖಾನ್ ಮ್ಯಾನೇಜರ್​ ಇಂದ 50 ಲಕ್ಷ ಹಣ ಪಡೆದಿದ್ದಾಗಿಯೂ, ಅದನ್ನು ಎನ್​ಸಿಬಿ ಅಧಿಕಾರಿಗಳಿಗೆ ನೀಡಬೇಕಾಗಿರುವುದಾಗಿಯೂ ಹೇಳಿಕೆ ನೀಡಿದ್ದ. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.

ಒಂದು ತಿಂಗಳ ಕಾಲ ಮುಂಬೈನ ಜೈಲಿನಲ್ಲಿ ಕಾಲ ಕಳೆದ ಆರ್ಯನ್ ಖಾನ್ ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆದರು. ನ್ಯಾಯಾಲಯದ ವಿಚಾರಣೆ ವೇಳೆ ಆರ್ಯನ್ ಖಾನ್ ಹಾಗೂ ಇನ್ನಿಬ್ಬರ ಬಂಧನದ ವೇಳೆ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಹಾಗೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ಚರ್ಚೆಯಾದ ಬಳಿಕ ಈ ಪ್ರಕರಣವನ್ನು ಎನ್​ಸಿಬಿಯ ಕೇಂದ್ರ ಕಚೇರಿ ವಹಿಸಿಕೊಂಡಿತು. ಜೊತೆಗೆ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಿ ಸಮೀರ್ ವಾಂಖೆಡೆಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಇದೀಗ ಸ್ವತಃ ಸಿಬಿಐ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದೆ.

ಆರ್ಯನ್ ಖಾನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಅವರ ಪರವಾಗಿ ಹಾಗೂ ಅವರ ವಿರುದ್ಧವಾಗಿ ಪ್ರತಿಭಟನೆಗಳು ಸಹ ನಡೆದಿದ್ದವು. ಆರ್ಯನ್ ಖಾನ್ ಪ್ರಕರಣ ಮಾತ್ರವೇ ಅಲ್ಲದೆ ಸುಶಾಂತ್ ಸಿಂಗ್ ನಿಧನದ ಬಳಿಕ ಹೊರಗೆ ಬಂದ ಡ್ರಗ್ಸ್ ಪ್ರಕರಣವನ್ನು ಸಮೀರ್ ವಾಂಖೆಡೆಯೇ ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿಯೂ ಸಮೀರ್, ಹಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಿದ್ದರು. ಆ ಪ್ರಕರಣಗಳಲ್ಲಿಯೂ ಸಮೀರ್ ಲಂಚ ಸ್ವೀಕಾರ ಮಾಡಿದ್ದರಾ ಎಂಬ ಬಗ್ಗೆ ತನಿಖೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ