ರಾಹುಲ್​ ಗಾಂಧಿಯ ತಿರುಚಿದ ಫೋಟೋ ಹಂಚಿಕೊಂಡ ಕಂಗನಾ ಮೇಲೆ 40 ಕೋಟಿ ರೂ. ಮಾನನಷ್ಟ ಕೇಸ್

ಜಾತಿ ಗಣತಿ ಬಗ್ಗೆ ರಾಹುಲ್​ ಗಾಂಧಿ ಮಾತಾಡಿದ್ದನ್ನು ಟೀಕಿಸುವುದು ಕಂಗನಾ ರಣಾವತ್​ ಉದ್ದೇಶ ಆಗಿತ್ತು. ಆದರೆ ಅದಕ್ಕಾಗಿ ಎಡಿಟೆಡ್​ ಫೋಟೋವನ್ನು ಬಳಸಿದ್ದರಿಂದ ರಾಹುಲ್​ ಗಾಂಧಿಗೆ ಅವಮಾನ ಮಾಡಲಾಗಿದೆ ಎಂದು ವಕೀಲರೊಬ್ಬರು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ರಾಹುಲ್​ ಗಾಂಧಿಯ ತಿರುಚಿದ ಫೋಟೋ ಹಂಚಿಕೊಂಡ ಕಂಗನಾ ಮೇಲೆ 40 ಕೋಟಿ ರೂ. ಮಾನನಷ್ಟ ಕೇಸ್
ರಾಹುಲ್​ ಗಾಂಧಿ, ಕಂಗನಾ ರಣಾವತ್​

Updated on: Aug 08, 2024 | 9:17 PM

ನಟಿ ಕಂಗನಾ ರಣಾವತ್​ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಮಾಡಿಕೊಂಡ ವಿವಾದಗಳಿಗೆ ಲೆಕ್ಕವೇ ಇಲ್ಲ. ಈಗ ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದಲ್ಲೂ ವಿವಾದಗಳ ಸರಣಿಯನ್ನು ಅವರು ಮುಂದುವರಿಸಿದ್ದಾರೆ. ಬಿಜೆಪಿ ಪಕ್ಷದಿಂದ ಸಂಸದೆಯಾಗಿ ಆಯ್ಕೆ ಆಗಿರುವ ಕಂಗನಾ ರಣಾವತ್​ ಅವರು ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಬಗ್ಗೆ ಟೀಕೆ ಮಾಡುವ ಭರದಲ್ಲಿ ಒಂದು ತಿರುಚಿದ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಸಂಸತ್ತಿನಲ್ಲಿ ರಾಹುಲ್​ ಗಾಂಧಿ ಅವರು ಜಾತಿ ಗಣತಿ ಬಗ್ಗೆ ಮಾತನಾಡಿದ್ದರು. ಅದನ್ನು ವಿರೋಧಿಸುವ ಸಲುವಾಗಿ ಕಂಗನಾ ಅವರು ಒಂದು ಎಡಿಟೆಡ್​ ಫೋಟೋವನ್ನು ಹಂಚಿಕೊಂಡರು. ಆ ಫೋಟೋದಲ್ಲಿ ರಾಹುಲ್​ ಗಾಂಧಿ ತಲೆಗೆ ಮುಸ್ಲಿಂ ಟೋಪಿ, ಕ್ರಿಸ್ಚಿಯನ್​ ಕ್ರಾಸ್​, ಹಿಂದೂಗಳ ತಿಲಕ ಮುಂತಾದ್ದನ್ನು ಎಡಿಟ್​ ಮಾಡಲಾಗಿತ್ತು. ಇದರಿಂದ ರಾಹುಲ್​ ಗಾಂಧಿ ಅವರಿಗೆ ಅವಮಾನ ಆಗಿದೆ ನೆಟ್ಟಿಗರು ಗರಂ ಆಗಿದ್ದರು.

ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್​ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ

ಈ ವಿಚಾರಕ್ಕೆ ಸಂಬಂಧಿಸಿ ಕಂಗನಾ ರಣಾವತ್​ ವಿರುದ್ಧ ಸುಪ್ರೀಂ ಕೋರ್ಟ್​ ಲಾಯರ್​ ನರೇಂದ್ರ ಮಿಶ್ರಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯಾವುದೇ ವ್ಯಕ್ತಿಯ ಪೋಟೋವನ್ನು ತಿರುಚಿ, ಅದನ್ನು ಆನ್​ಲೈನ್​ನಲ್ಲಿ ಶೇರ್​ ಮಾಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅಪರಾಧ ಆಗುತ್ತದೆ. ಇದರಿಂದ ರಾಹುಲ್ ಗಾಂಧಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಆಗಿದೆ ಎಂದು ನರೇಂದ್ರ ಮಿಶ್ರಾ ಹೇಳಿದ್ದಾರೆ.

ಕಂಗನಾ ಶೇರ್​ ಮಾಡಿದ್ದ ಎಡಿಟೆಡ್​ ಫೋಟೋ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಕಂಗನಾ ರಣಾವತ್​ ಅವರು ಆಯ್ಕೆ ಆಗಿದ್ದಾರೆ. ಸಿನಿಮಾ ಕೆಲಸಗಳನ್ನು ಬದಿಗೊತ್ತಿ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ, ನಿರ್ಮಾಣ ಮಾಡಿ, ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆ ಆಗಲಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದಿದ್ದರೆ ಈಗಾಗಲೇ ಈ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ವಿಳಂಬ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us