
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ, ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಪಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ತಡೆ ನೀಡಬೇಕು ಎಂದು ಸಲ್ಮಾನ್ ಖಾನ್ (Salman Khan) ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು, ಚಿತ್ರದ ನಿರ್ಮಾಪಕ ಅಮಿತ್ ಜಾನಿ, ಜಾನಿ ಫೈರ್ಫಾಕ್ಸ್ ಫಿಲ್ಮ್ಸ್, ನಿರ್ದೇಶಕ ಭರತ್ ಶ್ರೀನಾಥೆ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಸೇರಿದಂತೆ ಸಂಬಂಧಪಟ್ಟ ಇತರೆ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.
ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಶಾ, ‘ಮೇ 29ರಂದು ಬಿಡುಗಡೆಯಾದ ಚಿತ್ರದ ಪ್ರಚಾರದ ಪೋಸ್ಟರ್ನಲ್ಲಿರುವ ಪಾತ್ರವು ಸಲ್ಮಾನ್ ಖಾನ್ ಅವರನ್ನು ಹೋಲುವಂತಿದೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಗುರುತಾಗಿರುವ ವಿಶಿಷ್ಟವಾದ ಬ್ಲೂ ಬ್ರೇಸ್ಲೆಟ್ ಮಾದರಿಯನ್ನೇ ಆ ಪಾತ್ರವೂ ಧರಿಸಿದೆ. ಇದು ನಟನ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವಂತೆ 2025ರ ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಜೂನ್ 20ರಂದು ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಹಠಾತ್ತನೆ ಶುಕ್ರವಾರವೇ (ಜೂನ್ 12) ಬಿಡುಗಡೆ ಮಾಡಿದೆ ಎಂದು ಸಲ್ಮಾನ್ ಖಾನ್ ಅವರ ಕಾನೂನು ತಂಡ ಕೋರ್ಟ್ಗೆ ತಿಳಿಸಿತು. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ಸಖತ್ ವೈರಲ್ ಆಗುತ್ತಿದೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದ 4 ಎಫ್ಐಆರ್ಗಳ ಪೈಕಿ ಮೂರರಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ. ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದ್ದು, ಯಾವುದೇ ಅಂತಿಮ ಆದೇಶ ಬಂದಿಲ್ಲ. ಹೀಗಿರುವಾಗ ನಿರ್ಮಾಪಕರು ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹಾಗೂ ವೈಯಕ್ತಿಕ ಜೀವನದ ಘಟನೆಗಳನ್ನು ಬಳಸಿಕೊಂಡು ವಾಣಿಜ್ಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು.
ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ
ತಮ್ಮ ಅನುಮತಿಯಿಲ್ಲದೆ ತಮ್ಮ ಚಿತ್ರಣ, ಶೈಲಿ ಹಾಗೂ ಬ್ರೇಸ್ಲೆಟ್ನಂತಹ ವೈಯಕ್ತಿಕ ಗುರುತುಗಳನ್ನು ಬಳಸಿ ಸಿನಿಮಾ ಮಾಡಿರುವುದು ಕಾನೂನುಬಾಹಿರ ಮತ್ತು ಇದು ತಮ್ಮ ಘನತೆಗೆ ಧಕ್ಕೆ ತರುತ್ತದೆ ಎಂದು ಸಲ್ಮಾನ್ ಖಾನ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಪ್ರಕರಣದ ಮುಂದಿನ ನಿರ್ಧಾರವು ಜೂನ್ 19ರ ಕೋರ್ಟ್ ವಿಚಾರಣೆಯ ಮೇಲೆ ನಿಂತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.