ಪ್ರಚಾರದ ಭರದಲ್ಲಿ ಖಾನ್​ ಮತ್ತು ಕಪೂರ್​ಗಳನ್ನು ಕೆಣಕಿದ ಕಂಗನಾ ರಣಾವತ್​

ಬಿಜೆಪಿ ಅಭ್ಯರ್ಥಿಯಾಗಿ ಮಂಡಿ ಲೋಕಸಭಾ ಕ್ಷೇತ್ರದಿಂದ ನಟಿ ಕಂಗನಾ ರಣಾವತ್​ ಅವರು ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರದ ಭರದಲ್ಲಿ ಅವರು ಕೆಲವೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಅವರು ಟ್ರೋಲ್​ ಆಗಿದ್ದಾರೆ. ಮೊದಲು ಅಮಿತಾಭ್​ ಬಚ್ಚನ್​ ಬಗ್ಗೆ ಹೇಳಿಕೆ ನೀಡಿದ್ದ ಅವರು ಈಗ ಖಾನ್​ ಮತ್ತು ಕಪೂರ್​ ಕುಟುಂಬಗಳ ಕಲಾವಿದರ ತಂಟೆಗೂ ಬಂದಿದ್ದಾರೆ.

ಪ್ರಚಾರದ ಭರದಲ್ಲಿ ಖಾನ್​ ಮತ್ತು ಕಪೂರ್​ಗಳನ್ನು ಕೆಣಕಿದ ಕಂಗನಾ ರಣಾವತ್​
ಕಂಗನಾ ರಣಾವತ್​

Updated on: May 07, 2024 | 9:25 PM

ನಟಿ ಕಂಗನಾ ರಣಾವತ್ (Kangana Ranaut) ಇದ್ದಲ್ಲಿ ವಿವಾದಗಳು ಇದ್ದೇ ಇರುತ್ತವೆ. ಈಗ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಹಾಗಾಗಿ ಸಹಜವಾಗಿಯೇ ವಿವಾದಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಅವರು ಅಮಿತಾಭ್​ ಬಚ್ಚನ್​ (Amitabh Bachchan) ಬಗ್ಗೆ ನೀಡಿದ್ದ ಒಂದು ಹೇಳಿಕೆಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಬಳಿಕ ಅತಿ ಹೆಚ್ಚು ಗೌರವ ಸಿಕ್ಕಿದ್ದು ನನಗೆ’ ಎಂದು ಕಂಗನಾ ಹೇಳಿದ್ದರು. ಅದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ. ಈಗ ಕಂಗನಾ ಮತ್ತೆ ತಕರಾರು ತೆಗೆದಿದ್ದಾರೆ. ಈ ವಾದದಲ್ಲಿ ಖಾನ್​ ಮತ್ತು ಕಪೂರ್​ ಫ್ಯಾಮಿಲಿಯ ನಟ-ನಟಿಯರನ್ನು ಕೂಡ ಕೆಣಕಿದ್ದಾರೆ.

ಕಂಗನಾ ಏನು ಹೇಳಿದ್ದರು?

‘ಇಡೀ ದೇಶಕ್ಕೆ ಅಚ್ಚರಿ ಆಗಿದೆ. ನಾನು ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ, ಮಣಿಪುರ ಎಲ್ಲಿಗೇ ಹೋದರೂ ಭರಪೂರ ಪ್ರೀತಿ ಮತ್ತು ಗೌರವ ಸಿಗುತ್ತಿದೆ. ಹಾಗಾಗಿ ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಅವರ ಬಳಿಕ ಹೆಚ್ಚು ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ ನಾನು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದು ಕಂಗನಾ ರಣಾವತ್​ ಹೇಳಿದ್ದರು.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಕಂಗನಾ ರಣಾವತ್​ ಅವರ ಈ ಹೇಳಿಕೆಯನ್ನು ಅನೇಕರು ಲೇವಡಿ ಮಾಡಿದ್ದರು. ಕಂಗನಾ ಅವರು ತಮ್ಮನ್ನು ತಾವು ಅಮಿತಾಭ್​ ಬಚ್ಚನ್​ಗೆ ಹೋಲಿಸಿಕೊಂಡಿದ್ದನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಅದು ಕಂಗನಾ ಅವರ ಗಮನಕ್ಕೂ ಬಂದಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೇರಿದ ಬಳಿಕ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ

ಟ್ರೋಲ್​ಗಳಿಗೆ ಕಂಗನಾ ಪ್ರತಿಕ್ರಿಯೆ:

‘ಭಾರತದ ವಿವಿಧ ರಾಜ್ಯಗಳಲ್ಲಿ ನನ್ನ ಕಲೆ ಮತ್ತು ರಾಷ್ಟ್ರವಾದಿ ಗುಣಕ್ಕೆ ಗೌರವ ಸಿಗುತ್ತಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕೇವಲ ನನ್ನ ನಟನೆ ಮಾತ್ರವಲ್ಲ, ಮಹಿಳಾ ಸಬಲೀಕರಣಕ್ಕಾಗಿ ನನ್ನ ಕೆಲಸಗಳನ್ನು ಕೂಡ ಜನರು ಹೊಗಳಿದ್ದಾರೆ. ಈ ವಿಚಾರದಲ್ಲಿ ತಕರಾರು ಹೊಂದಿರುವವರಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಈ ದೇಶದಲ್ಲಿ ಅಮಿತಾಭ್​ ಬಚ್ಚನ್ ಅವರ ಬಳಿಕ ಅತಿ ಹೆಚ್ಚು ಗೌರವ ಮತ್ತು ಪ್ರೀತಿ ಪಡೆಯುವ ವ್ಯಕ್ತಿ ನಾನು ಅಲ್ಲ ಎಂಬುದಾದರೆ ಮತ್ಯಾರು? ಖಾನ್​ಗಳಾ ಅಥವಾ ಕಪೂರ್​ಗಳಾ? ನಾನು ಕೂಡ ತಿಳಿದುಕೊಳ್ಳಬಹುದು? ನನ್ನನ್ನು ನಾನು ಸರಿಪಡಿಸಿಕೊಳ್ಳುತ್ತೇನೆ’ ಎಂದು ಕಂಗನಾ ಅವರು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us