ಚೀನಾದಲ್ಲೂ ಅಬ್ಬರಿಸಲಿದೆ ‘ರಾಮಾಯಣ’ ಸಿನಿಮಾ; ಆದರೆ, ಬದಲಾಗಲಿದೆ ಶೀರ್ಷಿಕೆ

ಯಶ್, ಸಾಯಿ ಪಲ್ಲವಿ, ರಣಬೀರ್ ಕಪೂರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾಗೆ ಸಖತ್ ಬೇಡಿಕೆ ಇದೆ. ಭಾರತದಲ್ಲಿ ಮಾತ್ರವಲ್ಲದೇ ಚೀನಾದಲ್ಲೂ ಈ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಚಿತ್ರದ ಹೆಸರನ್ನು ಬದಲಾಯಿಸಿ ಚೀನಾದಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಚೀನಾದಲ್ಲೂ ಅಬ್ಬರಿಸಲಿದೆ ‘ರಾಮಾಯಣ’ ಸಿನಿಮಾ; ಆದರೆ, ಬದಲಾಗಲಿದೆ ಶೀರ್ಷಿಕೆ
Ranbir Kapoor

Updated on: Aug 14, 2026 | 8:01 PM

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ನಟನೆಯ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಲು ಸಜ್ಜಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದಲ್ಲೂ ಈ ಮಹಾಕಾವ್ಯ ಆಧಾರಿತ ಸಿನಿಮಾ ತೆರೆಕಾಣಲಿದ್ದು, ಅಲ್ಲಿ ಹೊಸ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಲಿದೆ. ಈ ಹಿಂದೆ ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಸಿನಿಮಾ ಚೀನಾದಲ್ಲಿ ಭಾರಿ ದಾಖಲೆ ಬರೆದಿತ್ತು. ಇದೀಗ ಸುಮಾರು ಒಂದು ದಶಕದ ನಂತರ ಅವರ ‘ರಾಮಾಯಣ’ ಚಿತ್ರವೂ ಚೀನಾ (China) ಮಾರುಕಟ್ಟೆಗೆ ಕಾಲಿಡುತ್ತಿದೆ.

ಚೀನಾದಲ್ಲಿ ಹೊಸ ಹೆಸರು: ‘ದಿ ಲೆಜೆಂಡ್ ಆಫ್ ಪ್ರಿನ್ಸ್’:

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚೀನಾದಲ್ಲಿ ಈ ಚಿತ್ರಕ್ಕೆ ‘ದಿ ಲೆಜೆಂಡ್ ಆಫ್ ಪ್ರಿನ್ಸ್’ (The Legend of Prince) ಎಂದು ಹೆಸರಿಡಲಾಗಿದೆ. ಪ್ರಸಿದ್ಧ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಚೀನಾದಲ್ಲಿ ಈ ಸಿನಿಮಾವನ್ನು ವಿತರಣೆ ಮಾಡಲಿದೆ. ಅಲ್ಲಿನ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಚಿತ್ರದ ಪ್ರಚಾರಕ್ಕಾಗಿ ಚೀನಾದಲ್ಲಿ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲು ಚಿತ್ರತಂಡ ಯೋಜಿಸಿದೆ. ಸೆಪ್ಟೆಂಬರ್ 24ರಂದು ಅಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ತದನಂತರ ಅಕ್ಟೋಬರ್ 1ರಿಂದ ಪ್ರಾರಂಭವಾಗುವ ಚೀನಾದ ‘ಗೋಲ್ಡನ್ ವೀಕ್’ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ಭಾರಿ ಪ್ರಚಾರ ಪ್ರವಾಸ ನಡೆಸಲು ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ತಂಡ ಯೋಜನೆ ರೂಪಿಸಿದೆ.

ದೀಪಾವಳಿ ಧಮಾಕಾ: ಬಿಡುಗಡೆ ದಿನಾಂಕ ಘೋಷಣೆ:

‘ರಾಮಾಯಣ: ಪಾರ್ಟ್ 1’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ 6ರಂದು ಬಿಡುಗಡೆಯಾಗಲಿದ್ದು, ಭಾರತದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಶುಕ್ರವಾರ ತೆರೆಕಾಣಲಿದೆ. ವಿದೇಶದ ಪ್ರೇಕ್ಷಕರು ಎರಡು ದಿನ ಮುಂಚಿತನಾಗಿಯೇ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ದೀಪಾವಳಿ ಹಬ್ಬ ಇರುವುದರಿಂದ, ಮಾರುಕಟ್ಟೆ ದೃಷ್ಟಿಯಿಂದ ಚಿತ್ರತಂಡ ಭಾರತದಲ್ಲಿ 2 ದಿನ ತಡವಾಗಿ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಭಾರತಕ್ಕೂ ಮುನ್ನ ವಿದೇಶದಲ್ಲಿ ‘ರಾಮಾಯಣ’ ರಿಲೀಸ್; ಲೀಕ್ ಭೀತಿಯಲ್ಲಿ ಫ್ಯಾನ್ಸ್ ಅಪ್ಸೆಟ್

‘ರಾಮಾಯಣ’ ಸಿನಿಮಾದ ವಿಎಫ್‌ಎಕ್ಸ್ ಹಾಗೂ ಸಿಜಿಐ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಮಿಶ್ರ ಪ್ರತಿಕ್ರಿಯೆಗೆ ರಣಬೀರ್ ಕಪೂರ್ ಅವರು ಉತ್ತರ ನೀಡಿದ್ದಾರೆ. ‘ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಸಿಜಿ ವಿಮರ್ಶಕರು ಹೆಚ್ಚಾಗಿದ್ದಾರೆ. ವರ್ಷಗಟ್ಟಲೆ ಶ್ರಮವಹಿಸಿ ಕೆಲಸ ಮಾಡಿದ ಕಲಾವಿದರ ಶ್ರಮವನ್ನು ಗುರುತಿಸಬೇಕು’ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us