ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು

| Updated By: ಮದನ್​ ಕುಮಾರ್​

Updated on: Apr 29, 2022 | 9:08 AM

Runway 34 | Ajay Devgn: ಅಕ್ಷಯ್​ ಕುಮಾರ್​ ಮತ್ತು ಅಜಯ್​ ದೇವಗನ್​ ನಡುವೆ ಉತ್ತಮ ಸ್ನೇಹ ಇದೆ. ಹಾಗಾಗಿ ಅವರು ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ.

ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು
ಅಜಯ್​ ದೇವಗನ್​, ಅಕ್ಷಯ್​ ಕುಮಾರ್​
Follow us on

ವಿವಾದದ ಕಾರಣದಿಂದಲೇ ನಟ ಅಜಯ್​ ದೇವಗನ್​ (Ajay Devgn) ಅವರು ಕೆಲವು ದಿನಗಳಿಂದ ಭಾರಿ ಸುದ್ದಿ ಆಗುತ್ತಿದ್ದಾರೆ. ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳುವ ಮೂಲಕ ಅವರು ಅನೇಕರಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಕಿಚ್ಚ ಸುದೀಪ್​, ರಮ್ಯಾ, ಸಿದ್ಧರಾಮಯ್ಯ ಸೇರಿದಂತೆ ಅನೇಕರು ಅಜಯ್​ ದೇವಗನ್​ ಮಾತನ್ನು ಖಂಡಿಸಿದರು. ಈಗ ಇನ್ನೊಂದು ಕಾರಣಕ್ಕಾಗಿ ಅವರು ಸುದ್ದಿಯಲ್ಲಿದ್ದಾರೆ. ಅಜಯ್​ ದೇವಗನ್​ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾ ‘ರನ್​ ವೇ 34’ (Runway 34 Movie) ಇಂದು (ಏ.29) ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಅಕ್ಷಯ್​ ಕುಮಾರ್​ (Akshay Kumar) ಒಂದು ದಿನ ಮುಂಚಿತವಾಗಿ ನೋಡಿದ್ದಾರೆ. ಸಿನಿಮಾದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಅಜಯ್​ ದೇವಗನ್​ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ವಿಮರ್ಶೆ ತಿಳಿಸಿದ್ದಾರೆ. ಆದರೆ ಅವರಿಗೆ ನೆಟ್ಟಿಗರಿಂದ ಮುಖಭಂಗ ಆಗಿದೆ. ‘ನಿಮ್ಮದು ಗುಟ್ಕಾ ಗ್ಯಾಂಗ್​’ ಎಂದು ಜನರು ಟ್ರೋಲ್​ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಮಾಡಿರುವ ಈ ಟ್ವೀಟ್​ ವೈರಲ್​ ಆಗುತ್ತಿದೆ. ದಕ್ಷಿಣದ​ ಸಿನಿಮಾಗಳನ್ನು ಕೆಣಕಿರುವ ಅಜಯ್​ ದೇವಗನ್​ ಈಗ ‘ರನ್​ ವೇ 34’ ಚಿತ್ರದ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಏನು ಸಾಧನೆ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಅಕ್ಷಯ್​ ಕುಮಾರ್​ ಮತ್ತು ಅಜಯ್​ ದೇವಗನ್​ ನಡುವೆ ಉತ್ತಮ ಸ್ನೇಹ ಇದೆ. ಆ ಕಾರಣಕ್ಕಾಗಿ ಏ.28ರಂದು ‘ರನ್​ ವೇ 34’ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಅಕ್ಷಯ್​ ಕುಮಾರ್​ ಭಾಗಿ ಆಗಿದ್ದರು. ಸಿನಿಮಾ ನೋಡಿದ ಅವರಿಗೆ ಸಖತ್​ ಇಷ್ಟ ಆಗಿದೆ.

‘ನಾನು ‘ರನ್​ ವೇ 34’ ಚಿತ್ರ ನೋಡಿದೆ. ಅಜಯ್​ ದೇವಗನ್​ ಅವರೇ, ನಿಜವಾಗಿಯೂ ಮಜಾ ಬಂತು. ಎಂಥಾ ಥ್ರಿಲ್ಲರ್​, ಸೂಪರ್​ ಆದಂತಹ ವಿಎಫ್​ಎಕ್ಸ್, ಅತ್ಯುತ್ತಮ ನಟನೆ ಮತ್ತು ನಿರ್ದೇಶನ. ಎಂದಿನಂತೆ ಅಮಿತಾಭ್​ ಬಚ್ಚನ್​ ಅವರದ್ದು ಪ್ರಯಾಸವಿಲ್ಲದ ನಟನೆ. ರಾಕುಲ್​ ಪ್ರೀತ್​ ಸಿಂಗ್​ ಅವರಿಗೂ ಚಪ್ಪಾಳೆ. ಈ ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ.

ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಅಜಯ್​ ದೇವಗನ್​ ಮತ್ತು ಅಕ್ಷಯ್​ ಕುಮಾರ್​ ಅವರು ನಟಿಸಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಆಗಿತ್ತು. ಈಗ ಆ ವಿಚಾರವನ್ನು ನೆಟ್ಟಿಗರು ಮತ್ತೆ ಎಳೆದು ತಂದಿದ್ದಾರೆ. ‘ನಿಮ್ಮದು ಗುಟ್ಕಾ ಗ್ಯಾಂಗ್​. ಹಾಗಾಗಿ ಪರಸ್ಪರ ಪ್ರೀತಿ ತೋರಿಸುತ್ತಿದ್ದೀರಿ’ ಎಂದು ಜನರು ಕಮೆಂಟ್​ ಮಾಡಿದ್ದಾರೆ. ‘ಇದೊಂದು ಪೇಯ್ಡ್​ ಪ್ರಚಾರ. ಅಕ್ಷಯ್​ ಕುಮಾರ್​ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಇಷ್ಟೆಲ್ಲ ಮಾಡ್ತಾ ಇದ್ದಾರೆ’ ಎಂದು ಕೂಡ ಕೆಲವರು ಆರೋಪ ಮಾಡಿದ್ದಾರೆ.

ವಿಮಲ್​ ಜಾಹೀರಾತಿನಿಂದ ಹೊರಬಂದಿರುವ ಅಕ್ಷಯ್​ ಕುಮಾರ್:

ಕೆಲವೇ ದಿನಗಳ ಹಿಂದೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಷಯ್​ ಕುಮಾರ್​ ಅವರು ​ವಿಮಲ್​ ಜಾಹೀರಾತಿನಿಂದ ಹೊರಬಂದರು. ಆ ಕುರಿತು ಇತ್ತೀಚೆಗೆ ಅವರು ಸ್ಪಷ್ಟನೆ ನೀಡಿದ್ದರು. ‘ನನ್ನನ್ನು ಕ್ಷಮಿಸಿ.. ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿವೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ವಿಮಲ್​ ಜೊತೆ ನಾನು ಕೈ ಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆಯ ಕಾರಣಕ್ಕೆ ನಾನು ಈ ಜಾಹೀರಾತಿನಿಂದ ಹಿಂದೆ ಸರಿಯುತ್ತೇನೆ. ಒಳ್ಳೆಯ ಉದ್ದೇಶಕ್ಕೆ ಇದರ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್​ನವರು ಆ ಜಾಹೀರಾತನ್ನು ಪ್ರಸಾರ ಮಾಡಬಹುದು. ಆದರೆ ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತೇನೆ. ಸದಾ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುತ್ತೇನೆ’ ಎಂದು ಅಕ್ಷಯ್​ ಕುಮಾರ್​ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು.

ಇದನ್ನೂ ಓದಿ:

ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..

ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ