‘ರಕ್ಕಸಪುರದೊಳ್’ ಟ್ರೈಲರ್ ನೋಡಿ ಭೇಷ್ ಎಂದ ಸಲ್ಮಾನ್ ಖಾನ್, ನಿಡಿದ ಸಲಹೆ ಏನು?

Rakkasapuradol movie: ಸಲ್ಮಾನ್ ಖಾನ್​​ಗೂ ಕನ್ನಡ ಚಿತ್ರರಂಗಕ್ಕೂ ಎತ್ತಣಿಂದೆತ್ತ ಸಂಬಂಧ. ಸುದೀಪ್ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸಿರುವುದು ಬಿಟ್ಟರೆ ಸಲ್ಲು ಕನ್ನಡ ಚಿತ್ರರಂಗದ ಜೊತೆಗೆ ಹೆಚ್ಚಿನ ನಂಟು ಹೊಂದಿಲ್ಲ. ಆದರೆ ಇದೀಗ ಹಠಾತ್ತನೆ ಸಲ್ಮಾನ್ ಖಾನ್, ಕನ್ನಡ ಸಿನಿಮಾದ ಟ್ರೈಲರ್ ಒಂದನ್ನು ವೀಕ್ಷಿಸಿ ವಾವ್ ಎಂದಿದ್ದಾರೆ. ಮಾತ್ರವಲ್ಲದೆ, ಈ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರಿ ಎಂದು ಚಿತ್ರತಂಡದವರನ್ನು ಕೇಳಿದ್ದಾರೆ. ಅಷ್ಟಕ್ಕೂ ಯಾವುದು ಆ ಸಿನಿಮಾ?

‘ರಕ್ಕಸಪುರದೊಳ್’ ಟ್ರೈಲರ್ ನೋಡಿ ಭೇಷ್ ಎಂದ ಸಲ್ಮಾನ್ ಖಾನ್, ನಿಡಿದ ಸಲಹೆ ಏನು?
Salman Khan Kannada

Updated on: Feb 14, 2026 | 8:15 PM

ಬಾಲಿವುಡ್​​ನ ಸ್ಟಾರ್ ನಟ ಸಲ್ಮಾನ್ ಖಾನ್​​ಗೂ (Salman Khan) ಕನ್ನಡ ಚಿತ್ರರಂಗಕ್ಕೂ ಎತ್ತಣಿಂದೆತ್ತ ಸಂಬಂಧ. ಸುದೀಪ್ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸಿರುವುದು ಬಿಟ್ಟರೆ ಸಲ್ಲು ಕನ್ನಡ ಚಿತ್ರರಂಗದ ಜೊತೆಗೆ ಹೆಚ್ಚಿನ ನಂಟು ಹೊಂದಿಲ್ಲ. ಆದರೆ ಇದೀಗ ಹಠಾತ್ತನೆ ಸಲ್ಮಾನ್ ಖಾನ್, ಕನ್ನಡ ಸಿನಿಮಾದ ಟ್ರೈಲರ್ ಒಂದನ್ನು ವೀಕ್ಷಿಸಿ ವಾವ್ ಎಂದಿದ್ದಾರೆ. ಮಾತ್ರವಲ್ಲದೆ, ಈ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರಿ ಎಂದು ಚಿತ್ರತಂಡದವರನ್ನು ಕೇಳಿದ್ದಾರೆ. ಅಷ್ಟಕ್ಕೂ ಯಾವುದು ಆ ಸಿನಿಮಾ?

ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ವೀಕ್ಷಿಸಿದ್ದಾರೆ. ‘ರಕ್ಕಸಪುರದೊಳ್’ ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಫರ್ ರವಿವರ್ಮ ಅವರು ಬಂಡವಾಳ ಹೂಡಿದ್ದು, ರವಿವರ್ಮಾ, ಸಲ್ಮಾನ್ ಖಾನ್ ಅವರ ಹಲವು ಸಿನಿಮಾಗಳಿಗೆ ಫೈಟ್​​ಗಳ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಜೊತೆಗೆ ಅವರು ಆತ್ಮೀಯತೆ ಹೊಂದಿದ್ದಾರೆ. ಸಲ್ಮಾನ್ ಅವರ ಹೊಸ ಸಿನಿಮಾ ‘ಗಲ್ವಾನ್’ಗೂ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತಾವು ನಿರ್ಮಾಣ ಮಾಡಿರುವ ‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ಅವರಿಗೆ ರವಿವರ್ಮ ತೋರಿಸಿದ್ದಾರೆ.

‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ವೀಕ್ಷಿಸಿದ ಸಲ್ಮಾನ್ ಖಾನ್ ಅವರು ಟ್ರೈಲರ್​​ನ ಗುಣಮಟ್ಟವನ್ನು ಕೊಂಡಾಡಿ ‘ಕನ್ನಡ ಚಿತ್ರರಂಗದಲ್ಲಿ ಸೃಜನಾತ್ಮಕ ಪ್ರಯತ್ನಗಳು ಸದಾ ವಿಭಿನ್ನವಾಗಿರುತ್ತವೆ’ ಎಂದಿದ್ದಾರೆ ಜೊತೆಗೆ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರ ಎಂದು ಪ್ರಶ್ನೆ ಸಹ ಮಾಡಿದರಂತೆ. ಆ ಮೂಲಕ ಸಿನಿಮಾವನ್ನು ಹಿಂದಿಗೆ ಸಹ ಡಬ್ ಮಾಡಿ ಎಂಬ ಸಲಹೆಯನ್ನು ಸಲ್ಮಾನ್ ಖಾನ್ ಅವರು ಪರೋಕ್ಷವಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ ಸಲಹೆಯನ್ನು ರವಿವರ್ಮ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ

ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಕ್ಕಸಪುರದೊಳ್’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಶಿವ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಕುಡಿತದ ವ್ಯಸನ ಮತ್ತು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಪೊಲೀಸ್ ಒಬ್ಬ, ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆಗಳನ್ನು ಹೇಗೆ ಭೇದಿಸುತ್ತಾನೆ ಎನ್ನುವುದೇ ಈ ಸಿನಿಮಾದ ಕತೆ. ಟ್ರೈಲರ್‌ನಲ್ಲಿನ ರಾಜ್ ಅವರ ಮೌನ ಮತ್ತು ತೀವ್ರತೆಯ ನಟನೆಯನ್ನು ಸಲ್ಮಾನ್ ಮೆಚ್ಚಿದ್ದಾರೆ ಎನ್ನಲಾಗಿದೆ.

‘ರಕ್ಕಸಪುರದೊಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಫೆಬ್ರವರಿ 6 ರಂದು ‘ರಕ್ಕಸಪುರದೊಳ್’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸ್ಟಾರ್‌ಗಳ ಬೆಂಬಲ ಸಿಗುತ್ತಿರುವುದು ಚಿತ್ರದ ಓಟಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಕಿಚ್ಚ ಸುದೀಪ್ ಸೇರಿದಂತೆ ಕನ್ನಡದ ಅನೇಕ ಗಣ್ಯರು ಕೂಡ ಈ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sat, 14 February 26