ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಬೆದರಿಕೆ ಹಾಕಿದ್ದು ಗೊತ್ತೇ ಇದೆ. ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕವಂತೂ ಅವರ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಈಗ ಸಲ್ಮಾನ್ ಅವರು ಬಿಗಿ ಭದ್ರತೆಯ ನಡುವೆಯೇ ಬದುಕಬೇಕಾಗಿದೆ. ಶೂಟಿಂಗ್, ಪ್ರಮೋಷನ್, ಮೀಟಿಂಗ್.. ಹೀಗೆ ಯಾವುದೇ ಕೆಲಸಕ್ಕೆ ಹೋದರೂ ಅವರ ಜೊತೆ ಹತ್ತಾರು ಮಂದಿ ಬಾಡಿ ಗಾರ್ಡ್ಸ್ ಇರುತ್ತಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಅವರು ಮೌನ ಮುರಿದಿದ್ದಾರೆ. ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.
‘ಭಗವಾನ್, ಅಲ್ಲಾ.. ಎಲ್ಲವೂ ಅವನ ಮೇಲಿದೆ. ಎಷ್ಟು ಆಯಸ್ಸು ಬರೆದಿದೆಯೋ ಅಷ್ಟೇ. ಕೆಲವೊಮ್ಮೆ ಇಷ್ಟು ಜನರನ್ನು ಒಟ್ಟಿಗೆ ಇಟ್ಟುಕೊಂಡು ಹೋಗಬೇಕಾಗುತ್ತದೆ. ಅದೇ ಸಮಸ್ಯೆ ಆಗಿಬಿಡುತ್ತದೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ. ‘ಸಿಕಂದರ್’ ಕುರಿತ ಸುದ್ದಿಗೋಷ್ಠಿಗೆ ಬಾಡಿಗಾರ್ಡ್ಸ್ ಜೊತೆ ಬಂದ ಸಲ್ಮಾನ್ ಖಾನ್ ಅವರ ವಿಡಿಯೋಗಳು ವೈರಲ್ ಆಗಿವೆ.
1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಶೂಟಿಂಗ್ ವೇಳೆ ಕೃಷ್ಣಮೃಗ ಬೇಟೆ ಆಡಿದ ಆರೋಪ ಸಲ್ಮಾನ್ ಖಾನ್ ಮೇಲೆ ಎದುರಾಯಿತು. ಆಗಿನಿಂದಲೂ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬರುತ್ತಲೇ ಇದೆ. ಅವರನ್ನು ಹತ್ಯೆ ಮಾಡಬೇಕು ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಪ್ರಯತ್ನಿಸುತ್ತಲೇ ಇದ್ದಾರೆ. ಬಹಿರಂಗವಾಗಿಯೇ ಕೊಲೆ ಬೆದರಿಗೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ
ಮನೆಮೇಲೆ ಗುಂಡಿನ ದಾಳಿ ನಡೆದ ನಂತರ ಸಲ್ಮಾನ್ ಖಾನ್ ಅವರು ಭದ್ರತೆ ಹೆಚ್ಚಿಸಿಕೊಂಡರು. ಅವರ ಇಡೀ ಕುಟುಂಬಕ್ಕೆ ಈ ಘಟನೆಯಿಂದ ಶಾಕ್ ಆಗಿದೆ. ಒಂದಷ್ಟು ದಿನಗಳ ಕಾಲ ಸಲ್ಮಾನ್ ಖಾನ್ ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ ಎಷ್ಟು ದಿನ ಹಾಗಿರಲು ಸಾಧ್ಯ? ಶೂಟಿಂಗ್ನಲ್ಲಿ ಅವರು ಪಾಲ್ಗೊಳ್ಳಲೇಬೇಕು. ಹಾಗಾಗಿ ಅಪಾಯದ ನಡುವೆಯೇ ಸಲ್ಮಾನ್ ಖಾನ್ ಅವರು ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ.
‘ಸಿಕಂದರ್’ ಸಿನಿಮಾ ಬಗ್ಗೆ ಹೇಳುವುದಾದರೆ, ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಅವರು ಜೋಡಿಯಾಗಿ ನಟಿಸಿದ್ದಾರೆ. ಏಪ್ರಿಲ್ 30ರಂದು ಈ ಚಿತ್ರ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.