‘ಸುಶಾಂತ್​ ಸಾವಿನಲ್ಲಿ ಅನೇಕ ವಿಚಾರ ಹೊಂದಿಕೆ ಆಗುತ್ತಿಲ್ಲ’: ಸಹೋದರಿ ಶಾಕಿಂಗ್​ ಹೇಳಿಕೆ

ನಟ ಸುಶಾಂತ್​ ಸಿಂಗ್ ರಜಪೂತ್​ ಅವರನ್ನು ಅಭಿಮಾನಿಗಳು ಈಗಲೂ ಮಿಸ್​ ಮಾಡಿಕೊಳ್ಳುತ್ತಾರೆ. ಅವರ ಸಾವಿಗೆ ಕಾರಣವಾದ ಸಂಗತಿ ಏನು ಎಂಬ ಸತ್ಯ ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಅಭಿಮಾನಿಗಳು ಮಾತ್ರವಲ್ಲದೇ ಕುಟುಂಬದವರಿಗೂ ಸುಶಾಂತ್​ ಸಾವಿನ ಹಿಂದಿರುವ ರಹಸ್ಯ ಏನು ಎಂಬುದು ತಿಳಿದಿಲ್ಲ. ಹಾಗಾಗಿ ಅವರ ಸಹೋದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸುಶಾಂತ್​ ಸಾವಿನಲ್ಲಿ ಅನೇಕ ವಿಚಾರ ಹೊಂದಿಕೆ ಆಗುತ್ತಿಲ್ಲ’: ಸಹೋದರಿ ಶಾಕಿಂಗ್​ ಹೇಳಿಕೆ
ಸುಶಾಂತ್​ ಸಿಂಗ್ ರಜಪೂತ್​

Updated on: Mar 06, 2024 | 5:21 PM

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರು ನಿಧನರಾಗಿ ಮೂರೂವರೆ ವರ್ಷ ಕಳೆದಿದೆ. ಇಂದಿಗೂ ಕೂಡ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಸುಶಾಂತ್​ ಸಾವಿನ ಹಿಂದೆ ಕೆಲವರ ಕೈವಾಡ ಇದೆ ಎಂಬ ಆರೋಪ ಇದೆ. ಅದು ಕೇವಲ ಆತ್ಮಹತ್ಯೆ ಎಂದು ಕೂಡ ಕೆಲವರು ಹೇಳುತ್ತಾರೆ. ಸುಶಾಂತ್​ ನಿಧನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಹಾಗಾಗಿ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ (Shweta Singh Kirti) ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಹೋದರನ ಸಾವಿನ ಹಿಂದಿರುವ ಸತ್ಯವನ್ನು ಬಹಿರಂಗ ಮಾಡಿ ಎಂದು ಸಿಬಿಐಗೆ (CBI) ಶ್ವೇತಾ ಒತ್ತಾಯಿಸಿದ್ದಾರೆ.

2020ರ ಜೂನ್​ 14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ಸಿಂಗ್ ರಜಪೂತ್​ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಆ ಸುದ್ದಿ ತಿಳಿದ ಬಳಿಕ ಅಭಿಮಾನಿಗಳಿಗೆ ಆಘಾತ ಆಯಿತು. ಯಾವಾಗಲೂ ಪಾಸಿಟಿವ್​ ಆಗಿ ಮಾತನಾಡುತ್ತಿದ್ದ ಸುಶಾಂತ್​ ಸಿಂಗ್ ರಜಪೂತ್​ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬುದು ಎಲ್ಲರ ಪ್ರಶ್ನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ನಡೆಯುತ್ತಿದೆ.

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಶ್ವೇತಾ ಸಿಂಗ್ ಕೀರ್ತಿ ಅವರು ಕೆಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ‘ನಾನು ತನಿಖೆ ಮಾಡುವ ವ್ಯಕ್ತಿ ಅಲ್ಲ. ಅಣ್ಣನ ಫ್ಲಾಟ್​ಗೆ ಹೋಗಲು ನನಗೆ ಅನುಮತಿ ನೀಡಿರಲಿಲ್ಲ. ಘಟನೆ ನಡೆದ ಫ್ಲಾಟ್​ ನಾನು ನೋಡಿಲ್ಲ. ಆಗಿದ್ದು ಏನು ಎಂಬುದನ್ನು ಸಿಬಿಐ ಹೇಳಬೇಕು. ಸಾಕ್ಷಿ ನೀಡಿ, ನಮಗೂ ಸತ್ಯ ತಿಳಿಯಲು ಬಿಡಿ’ ಎಂದು ಶ್ವೇತಾ ಸಿಂಗ್ ಕೀರ್ತಿ ಹೇಳಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

‘ಬೆಡ್​ ಮತ್ತು ಫ್ಯಾನ್​ ನಡುವೆ ಹೆಚ್ಚು ಅಂತರ ಇರಲಿಲ್ಲ. ರೂಮ್​ನ ಕೀ ಮಿಸ್ ಆಗಿದೆ ಅಂತ ಅಪಾರ್ಟ್​ಮೆಂಟ್​ನವರು ಹೇಳಿದರು. ಯಾಕೆ ಆ ರೀತಿ ಆಯ್ತ? ಆ ಕೀ ಎಲ್ಲಿಗೆ ಹೋಯ್ತು? ಸುಶಾಂತ್​ ಎಂದಿಗೂ ತನ್ನ ರೂಮ್​ ಬಾಗಿಲು ಹಾಕಿಕೊಳ್ಳುತ್ತಿರಲಿಲ್ಲ. ಅದೇ ದಿನ ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲ್ಲ. ಈ ರೀತಿ ಅನೇಕ ಸಂಗತಿಗಳಿಗೆ ಅರ್ಥವೇ ಇಲ್ಲ’ ಎಂದು ಶ್ವೇತಾ ಸಿಂಗ್​ ಕೀರ್ತಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂಕಿತಾಗೆ ಸುಶಾಂತ್​ ಉಡುಗೊರೆಯಾಗಿ ನೀಡಿದ್ದ ಮುದ್ದಿನ ಶ್ವಾನ ಸ್ಕಾಚ್​ ನಿಧನ

ಸುಶಾಂತ್​ ಸಿಂಗ್ ರಜಪೂತ್​ ಅವರು ಬಾಲಿವುಡ್​ನಲ್ಲಿ ಭದ್ರವಾದ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ನಿಧನಕ್ಕೂ ಮುನ್ನ ನಟಿ ರಿಯಾ ಚಕ್ರವರ್ತಿ ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಸುಶಾಂತ್ ನಿಧನದ ಬಳಿಕ ರಿಯಾ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಹೊರಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us