ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ

Darshan Thoogudeepa: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಇದೀಗ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಾಕ್ಷ್ಯಗಳ ವಿಚಾರಣೆ ತಡವಾಗುತ್ತಿದ್ದು, ತಮಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿ ಕುರಿತಂತೆ ನಾಳೆ (ಮೇ 15) ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.

ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ
Darshan Supreme

Updated on: May 14, 2026 | 5:22 PM

ನಟ ದರ್ಶನ್ (Darshan), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿ ವರ್ಷವಾಗುತ್ತಾ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್, ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಇದೀಗ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಾಕ್ಷ್ಯಗಳ ವಿಚಾರಣೆ ತಡವಾಗುತ್ತಿದ್ದು, ತಮಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿ ಕುರಿತಂತೆ ನಾಳೆ (ಮೇ 15) ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.

ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಕಾರಾಗೃಹ ಇಲಾಖೆಯಿಂದ ವರದಿಯನ್ನು ಸುಪ್ರೀಂಕೋರ್ಟ್ ಕೇಳಿತ್ತು. ಇದೀಗ ಎಸ್​​ಪಿಪಿ ಅವರು ಈ ಕುರಿತು ನ್ಯಾಯಾಲಯಕ್ಕೆ ಕೆಲವು ವಿಡಿಯೋ ಸಾಕ್ಷ್ಯಗಳ ಸಹಿತ ವಾದ ಮಂಡಿಸಿದ್ದು, ದರ್ಶನ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ದರ್ಶನ್​​ಗೆ ಇತರೆ ಕೈದಿಗಳೊಟ್ಟಿಗೆ ಸಂಪರ್ಕ ಇಲ್ಲವೆಂದು, ಅವರನ್ನು ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ ಎಂದಿದ್ದಾರೆ. ನ್ಯಾಯಾಲಯಕ್ಕೆ ಸಿಸಿಟಿವಿ ಮತ್ತು ಬಾಡಿಕ್ಯಾಮ್​​ಗಳ ದೃಶ್ಯಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇವುಗಳ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡುತ್ತಿಲ್ಲ, 270 ಸಾಕ್ಷ್ಯಗಳಲ್ಲಿ 10 ಸಾಕ್ಷ್ಯಗಳ ವಿಚಾರಣೆಯನ್ನೂ ಮಾಡಲಾಗಿಲ್ಲ ವಿಚಾರಣೆ ನಡೆಯುವವರೆಗೆ ತಮಗೆ ಜಾಮೀನು ನೀಡಬೇಕು ಎಂದು ಸಹ ದರ್ಶನ್ ಮನವಿ ಮಾಡಿದ್ದರು. ಈ ಬಗ್ಗೆಯೂ ಸಹ ಸುಪ್ರೀಂಕೋರ್ಟ್ ವರದಿ ಕೇಳಿತ್ತು. ಅದನ್ನೂ ಸಹ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಸುಪ್ರೀಂಕೋರ್ಟ್​​ಗೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ದರ್ಶನ್ ಸಲ್ಲಿಕೆ ಮಾಡಿದ್ದ ಇತರೆ ಅರ್ಜಿಗಳ ಕಾರಣಕ್ಕೆ ಮುಖ್ಯ ಆರೋಪದ ವಿಚಾರಣೆ ತಡವಾಗಿದೆ ಎಂದು ಎಸ್​​ಪಿಪಿ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹೊಸ ಫೋಟೋಗಳಲ್ಲಿ ಮಿಂಚಿದ ವಿಜಯಲಕ್ಷ್ಮೀ ದರ್ಶನ್

ರೇಣುಕಾ ಸ್ವಾಮಿ ಕೊಲೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. (ಜೂನ್ 08, 2024) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದರು. 2024ರ ಅಕ್ಟೋಬರ್ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣ ನೀಡಿ ದರ್ಶನ್ ಜಾಮೀನು ಪಡೆದಿದ್ದರು. ಆ ಬಳಿಕ ಪವಿತ್ರಾ ಸೇರಿದಂತೆ ಇತರೆ ಕೆಲವು ಆರೋಪಿಗಳಿಗೂ ಜಾಮೀನು ನೀಡಲಾಯ್ತು. ಬಳಿಕ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು, ಚಿತ್ರೀಕರಣವನ್ನೂ ಮುಗಿಸಿದರು. ಆದರೆ ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್​​ಗೆ ಮನವಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಕೆಲ ಆರೋಪಿಗಳ ಜಾಮೀನನ್ನು 2025ರ ಆಗಸ್ಟ್ ತಿಂಗಳಲ್ಲಿ ರದ್ದು ಮಾಡಿತು. ಆಗಿನಿಂದಲೂ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us