ಗೋಲ್ಡನ್ ಅವರ್ ಕಳೆದುಕೊಳ್ತಿದೆ ‘ಜನ ನಾಯಗನ್’ ಟೀಂ; ನಡೆಯಿತು ಮತ್ತೊಂದು ದೊಡ್ಡ ತಪ್ಪು
ಕಾಲಿವುಡ್ ಸೂಪರ್ಸ್ಟಾರ್ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ತೀವ್ರ ಅಡೆತಡೆ ಎದುರಾಗಿದೆ. ವಿಜಯ್ ಸಿಎಂ ಆದ ನಂತರ ನಿರೀಕ್ಷೆ ಹೆಚ್ಚಿದ್ದರೂ, ಸೆನ್ಸಾರ್ ಪ್ರಮಾಣಪತ್ರ ನಿರಾಕರಣೆ, ಆನ್ಲೈನ್ ಪೈರಸಿ ಮತ್ತು ಕಾನೂನು ಹೋರಾಟಗಳಿಂದ ಚಿತ್ರತಂಡ ಹೈರಾಣಾಗಿದೆ. ಸದ್ಯ ಜೂನ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದರೂ, ವಿಳಂಬದಿಂದ ಚಿತ್ರದ ಹೈಪ್ ಕಮರುತ್ತಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕಾಲಿವುಡ್ ನಟ ದಳಪತಿ ವಿಜಯ್ ಅವರು (Thalapathy Vijay) ತಮಿಳುನಾಡು ಸಿಎಂ ಆದ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಸಾಕಷ್ಟು ಕುತೂಹಲ ಮೂಡಿಸಿತ್ತು. ‘ಎರಡೇ ವಾರದಲ್ಲಿ ಸಿನಿಮಾ ಬರಲಿದೆ’ ಎಂದು ವಿಜಯ್ ಸಿಎಂ ಆದಾಗ ನಿರ್ಮಾಪಕ ಕೆ ವೆಂಕಟ್ ನಾರಾಯಣ್ ಘೋಷಣೆ ಮಾಡಿದ್ದರು. ಸಾಲು ಸಾಲು ವಿವಾದಗಳು ಮತ್ತು ಕಾನೂನು ಹೋರಾಟಗಳ ನಡುವೆಯೂ ಸಿನಿಮಾ ರಿಲೀಸ್ ದಿನಾಂಕ ಸ್ಪಷ್ಟವಾಗಿಲ್ಲ. ತಂಡ ಗೋಲ್ಡನ್ ಅವರ್ನ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಒಂದು ಕಾಲದಲ್ಲಿ ಬಾಕ್ಸ್ ಆಫೀಸ್ ಇತಿಹಾಸ ಬರೆಯಲಿದೆ ಎನ್ನಲಾಗುತ್ತಿದ್ದ ಈ ಚಿತ್ರದ ಹೈಪ್ ಈಗ ಕಮರುತ್ತಿದೆಯೇ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.
‘ಜನ ನಾಯಗನ್’ ಸಿನಿಮಾ ವಿವಾದಗಳನ್ನು ಎದುರಿಸಿದೆ. ಚಿತ್ರವನ್ನು ಸಂಕ್ರಾಂತಿ ಹಬ್ಬದ (ಜನವರಿ) ಸಮಯದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿ, ರಿವೈಸಿಂಗ್ ಕಮಿಟಿಗೆ ಕಳುಹಿಸಿದಾಗ ದೊಡ್ಡ ಕಾನೂನು ಹೋರಾಟವೇ ಶುರುವಾಯಿತು. ಮದ್ರಾಸ್ ಹೈಕೋರ್ಟ್ನಿಂದ ಹಿಡಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ.
ಇಷ್ಟರಲ್ಲೇ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಸಿನಿಮಾ ಇನ್ನೂ ಥಿಯೇಟರ್ಗೆ ಬರುವ ಮುನ್ನವೇ ಸಿನಿಮಾದ ಎಚ್ಡಿ ಪ್ರಿಂಟ್ ಆನ್ಲೈನ್ ಪೈರಸಿ ಸೈಟ್ಗಳಲ್ಲಿ ಲೀಕ್ ಆಯಿತು. ಎಡಿಟಿಂಗ್ ಸ್ಟುಡಿಯೋದಿಂದಲೇ ಡೇಟಾ ಕದ್ದು ಇಡೀ ಸಿನಿಮಾವನ್ನು ಲೀಕ್ ಮಾಡಿದ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ಆರೋಪಿಗಳಿಗೆ ಬೇಲ್ ನೀಡಲು ಕೂಡ ನಿರಾಕರಿಸಿದೆ.
ಒಂದು ಹಂತದಲ್ಲಿ ಸಿನಿಮಾದ ಮೈಲೇಜ್ ಡ್ರಾಪ್ ಆಗಿತ್ತು. ಆದರೆ, ವಿಜಯ್ ಸಿಎಂ ಆದ ಬಳಿಕ ಸಿನಿಮಾ ಮತ್ತೆ ಹೈಪ್ ಪಡೆದುಕೊಂಡಿತ್ತು. ಆದರೆ, ಅದು ಕೂಡ ಈಗ ಹಂತಹಂತವಾಗಿ ತಣ್ಣಗಾಗುತ್ತಿದೆ. ತಮಿಳುನಾಡಿನ ರಾಜಕೀಯ ವಾತಾವರಣದ ಬಿಸಿ ಸ್ವಲ್ಪ ತಿಳಿಯಾಗುತ್ತಿದ್ದಂತೆ, ಸಿನಿಮಾದ ಮೇಲಿದ್ದ ಒಟ್ಟಾರೆ ಹೈಪ್ ಮತ್ತು ಬಝ್ ಕೂಡ ಸ್ಲೋ ಆಗುತ್ತಿದೆ. ಅಲ್ಲದೆ, ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಮಾಪಕ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.
ಇದನ್ನೂ ಓದಿ: ‘ಜನ ನಾಯಗನ್’ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ದಳಪತಿ ವಿಜಯ್
ಹೊಸ ವರದಿ ಪ್ರಕಾರ, ಚಿತ್ರತಂಡ ಈಗ ಜೂನ್ ಮೂರನೇ ವಾರದಲ್ಲಿ, ಅಂದರೆ ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದ ವೇಳೆ ಚಿತ್ರವನ್ನು ರಿಲೀಸ್ ಮಾಡಲು ಟಾರ್ಗೆಟ್ ಮಾಡಿಕೊಂಡಿದೆ. ಹುಟ್ಟುಹಬ್ಬದ ದಿನಾಂಕ ಅಭಿಮಾನಿಗಳಿಗೆ ಎಮೋಷನಲ್ ಆಗಿ ಕನೆಕ್ಟ್ ಆದರೂ, ವಿವಾದಗಳಿಂದ ಈಗಾಗಲೇ ಹೈರಾಣಾಗಿರುವ ಈ ಚಿತ್ರ ಜೂನ್ವರೆಗೂ ತನ್ನ ಹೈಪ್ ಉಳಿಸಿಕೊಂಡು ಅಂದುಕೊಂಡ ಮಟ್ಟದ ಯಶಸ್ಸು ಸಾಧಿಸುತ್ತಾ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





