ಟಾಲಿವುಡ್ನಲ್ಲಿ ಮತ್ತೊಂದು ಸಮಂತಾ ಆಗ್ತಾರಾ ಜಾನ್ವಿ ಕಪೂರ್ ?
ರಾಮ್ ಚರಣ್ ನಟನೆಯ 'ಪೆದ್ದಿ' ಟ್ರೈಲರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಜಾನ್ವಿ ಕಪೂರ್ ಅವರ ಗ್ರಾಮೀಣ ಪಾತ್ರವನ್ನು 'ರಂಗಸ್ಥಲಂ' ಚಿತ್ರದ ಸಮಂತಾ ಪಾತ್ರಕ್ಕೆ ಹೋಲಿಸಲಾಗುತ್ತಿದೆ. ಇದು ಜಾನ್ವಿ ಅವರ ದಕ್ಷಿಣ ಭಾರತದ ಸಿನಿ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡುವ ನಿರೀಕ್ಷೆಯಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ, ಎ.ಆರ್. ರೆಹಮಾನ್ ಸಂಗೀತವಿರುವ ಈ ಚಿತ್ರ ಜೂನ್ 4 ರಂದು ತೆರೆಗೆ ಬರಲಿದೆ.

ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ, ಬುಚ್ಚಿ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿ, ಭಾರಿ ಸದ್ದು ಮಾಡುತ್ತಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಾಗೋ ಈ ಚಿತ್ರ ಕ್ರೀಡಾ ಕಥೆಯನ್ನು ಹೊಂದಿದೆ. ‘ಪೆದ್ದಿ’ ಟ್ರೈಲರ್ ನೋಡಿದ ಸಿನಿಪ್ರಿಯರು, ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ‘ರಂಗಸ್ಥಲಂ’ ಚಿತ್ರದ ಸಮಂತಾ ಪಾತ್ರಕ್ಕೆ ಹೋಲಿಸಿ ಚರ್ಚೆ ಆರಂಭಿಸಿದ್ದಾರೆ.
2018ರಲ್ಲಿ ಬಿಡುಗಡೆಯಾಗಿದ್ದ ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ನಟಿಸಿದ್ದ ರಾಮಲಕ್ಷ್ಮಿ ಹೆಸರಿನ ಹಳ್ಳಿ ಹುಡುಗಿಯ ಪಾತ್ರ ಅವರ ವೃತ್ತಿಜೀವನದಲ್ಲೇ ಅತ್ಯಂತ ಜನಪ್ರಿಯ ಹಾಗೂ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿತ್ತು. ಆ ಚಿತ್ರ ತಂದುಕೊಟ್ಟ ಭಾರಿ ಯಶಸ್ಸು ಮತ್ತು ಸ್ಟಾರ್ಡಮ್ ಸಮಂತಾ ಅವರ ಚಿತ್ರರಂಗದ ಜರ್ನಿಯನ್ನೇ ಬದಲಾಯಿಸಿತ್ತು. ಈಗ ‘ಪೆದ್ದಿ’ ಚಿತ್ರದಲ್ಲೂ ಅಂತಹದ್ದೇ ಥೀಮ್ ಇದೆ.
ಸಿನಿಮಾದಲ್ಲಿ ಹಳ್ಳಿಯ ವಾತಾವರಣ, ಗ್ರಾಮೀಣ ಸೊಗಡಿನ ಸಂಭಾಷಣೆ ಇದೆ. ಇದು ಜಾನ್ವಿ ಕಪೂರ್ ವೃತ್ತಿ ಜೀವನಕ್ಕೆ ಸಹಕಾರಿ ಆಗಬಹುದು. ಅವರು ಕೇವಲ ಗ್ಲಾಮರ್ಗೆ ಸೀಮಿತವಾಗದೆ, ನಟನೆಯಲ್ಲೂ ಮಿಂಚಿದರೆ ಮಾತ್ರ ಇದು ಸಾಧ್ಯವಾಗಲಿದೆ.
ಇದನ್ನೂ ಓದಿ: ‘ಪೆದ್ದಿ’ ಟ್ರೇಲರ್ ಬಿಡುಗಡೆ; ಕ್ರಿಕೆಟ್ ಜೊತೆ ಕುಸ್ತಿ ಅಖಾಡದಲ್ಲೂ ರಾಮ್ ಚರಣ್ ಮಾಸ್ ಅವತಾರ
ಟ್ರೈಲರ್ನಲ್ಲಿ ಜಾನ್ವಿ ಕಪೂರ್ ಹಳ್ಳಿ ಹುಡುಗಿಯ ಪಾತ್ರಕ್ಕೆ ಹೊಂದಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಎದ್ದು ಕಾಣುತ್ತಿದೆ. ಕೆಲವು ದೃಶ್ಯಗಳಲ್ಲಿ ಅವರ ಸ್ಕ್ರೀನ್ ಪ್ರೆಸೆನ್ಸ್ ಗಮನ ಸೆಳೆದಿದ್ದರೂ, ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ‘ಪೆದ್ದಿ’ ಸಿನಿಮಾ ದೊಡ್ಡ ಹಿಟ್ ಲಿಸ್ಟ್ ಸೇರಿದರೆ, ಅದು ಜಾನ್ವಿ ಅವರ ಸೌತ್ ಇಂಡಿಯನ್ ಸಿನಿ ಕೆರಿಯರ್ಗೆ ಬಹುದೊಡ್ಡ ತಿರುವು ನೀಡುವುದರಲ್ಲಿ ಅನುಮಾನವಿಲ್ಲ. ‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ, ಎ.ಆರ್. ರೆಹಮಾನ್ ಸಂಗೀತವಿರುವ ಹಾಗೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪೆದ್ದಿ’ ಚಿತ್ರ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 am, Tue, 19 May 26





