ಬರಗಾಲದ ಮಧ್ಯೆ ಹಾವೇರಿ ರೈತರಿಗೆ ಮತ್ತೊಂದು ಸಂಕಷ್ಟ: ಕಂಗಾಲಾದ ಅನ್ನದಾತ!
borewell cable theft: ಒಂದೆಡೆ ಮಳೆರಾಯನ ಕಣ್ಣಮುಚ್ಚಾಲೆ, ಇನ್ನೊಂದೆಡೆ ಅಸಮರ್ಪಕ ವಿದ್ಯುತ್ ಪೂರೈಕೆ. ಇದರ ನಡುವೆ ಈಗ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈತರಿಗೆ ಖದೀಮರ ಕಾಟ ಶುರುವಾಗಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಬದಿಯ ಜಮೀನುಗಳಲ್ಲಿರುವ ಸುಮಾರು 22ಕ್ಕೂ ಹೆಚ್ಚು ರೈತರ ಲಕ್ಷಾಂತರ ರೂ ಮೌಲ್ಯದ ಬೋರ್ವೆಲ್ ಕೇಬಲ್ ಹಾಗೂ ಕೃಷಿ ಉಪಕರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಹಾವೇರಿ, ಜುಲೈ 26: ಒಂದು ಕಡೆ ಮಳೆರಾಯನ ಕಣ್ಣಮುಚ್ಚಾಲೆ, ಇನ್ನೊಂದೆಡೆ ವಿದ್ಯುತ್ ಪೂರೈಕೆ ವ್ಯತ್ಯಯ. ಇದರ ನಡುವೆ ಇದೀಗ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಜಮೀನಿನಲ್ಲಿ ಅಳವಡಿಸಿದ್ದ ಲಕ್ಷಾಂತರ ರೂ ಮೌಲ್ಯ ಬೋರ್ವೆಲ್ ಕೇಬಲ್ (borewell cable theft) ಮತ್ತು ವಿವಿಧ ವಸ್ತುಗಳನ್ನ ಖದೀಮರು ಕದ್ದು ಪರಾರಿಯಾಗಿರುವ ಹಾವೇರಿ (haveri) ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಬೋರವೆಲ್ ಕೇಬಲ್ ಮತ್ತು ಬಿಡಿ ಭಾಗಗಳು ಕದ್ದು ಪರಾರಿ
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ರಸ್ತೆಯ ಬದಿಯಿರುವ ಜಮೀನಿಗಳನ್ನ ಟಾರ್ಗೆಟ್ ಮಾಡಿರುವ ಖದೀಮರು 22ಕ್ಕೂ ಹೆಚ್ಚು ರೈತರ ಬೋರವೆಲ್ ವಸ್ತುಗಳ ಕದ್ದು ಪರಾರಿ ಆಗಿದ್ದಾರೆ. ಈ ವರ್ಷ ಮಳೆ ಇಲ್ಲದೆ ಅನ್ನದಾತರು ಬೆಳೆಗಳನ್ನ ರಕ್ಷಣೆ ಮಾಡಲು ಹರಸಹಾಸ ಪಡುತ್ತಿದ್ದು, ಹಗಲು-ರಾತ್ರಿ ಎನ್ನದೆ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅದರೆ ಖದೀಮರು ರಸ್ತೆಯ ಉದ್ದಕ್ಕೂ ಇರುವ ಬೋರವೆಲ್ ಕೇಬಲ್ ಮತ್ತು ಬಿಡಿ ಭಾಗಗಳನ್ನ ಕದ್ದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!
ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ಖದೀಮರು ಕಳ್ಳತನ ಮಾಡಿದ್ದಾರೆ. ಗ್ರಾಮದ ರೈತರಾದ ಕರಿಯಪ್ಪ ಅಣ್ಣಿ, ನಾಗರಾಜ್ ಮೊಟೇಬೆನ್ನೂರು, ರೇವಣಸಿದ್ದಪ್ಪ ವಾಳದ, ಸಿದ್ದಮ್ಮ, ಶಂಕ್ರಪ್ಪ, ಭರಮಪ್ಪ, ಮರಲಿಂಗಪ್ಪ, ತಿರಕಪ್ಪ, ಬಸವರಾಜ್, ಹೊಳಲಪ್ಪ, ದುಂಡಪ್ಪ ಸೇರಿದಂತೆ ಒಟ್ಟು 22ಕ್ಕೂ ಹೆಚ್ಚು ರೈತರ ಬೋರವೆಲ್ ಕೇಬಲ್ ಕಳ್ಳತನವಾಗಿದೆ. ‘‘ನಾವು ಹೇಗೆ ಜೀವನ ಮಾಡಬೇಕು’’ ಎಂದು ರೈತ ಶಂಕ್ರಪ್ಪ ತಮ್ಮ ಅಳಲು ತೊಡಿಕೊಂಡರು.
ಸಾವಿರಾರು ಮೌಲ್ಯದ ವಸ್ತುಗಳನ್ನ ಕದ್ದುಕೊಂಡು ಹೋದರೆ ಹೇಗೆ ಬದುಕುವುದು ಎಂದ ರೈತ
ಕರ್ಜಗಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಹಲವಾರು ಭಾರೀ ಖದೀಮರು ಕೇಬಲ್ ಮತ್ತು ಕೃಷಿ ಉಪಕರಣಗಳನ್ನ ಕದ್ದುಕೊಂಡು ಹೋಗಿದ್ದಾರೆ. ‘‘ನಾವು ಮತ್ತೆ 20 ರಿಂದ 30 ಸಾವಿರ ರೂ ಖರ್ಚು ಮಾಡಬೇಕು. ಒಂದು ಕಡೆ ಮಳೆ ಇಲ್ಲ. ಇನ್ನೊಂದು ಕಡೆ ಬೆಳೆ ಒಣಗುತ್ತಿವೆ. ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಖದೀಮರು ರೈತರ ಕೇಬಲ್ ಕದ್ದು ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸರು ಖದೀಮರ ಪತ್ತೆ ಮಾಡುವ ಕೆಲಸ ಮಾಡಬೇಕು. ನಾವು ದುಡಿದ ತಿನ್ನುವ ಜನರು. ಸಾವಿರಾರು ರೂ ಮೌಲ್ಯದ ವಸ್ತುಗಳನ್ನ ಕದ್ದು ಹೋದರೆ ನಾವು ಹೇಗೆ ಬದುಕುವುದು’’ ಎಂಬುವುದು ರೈತ ನಶೀರ್ ಖಾನ್ರ ನೋವಿನ ಮಾತು.
ಇದನ್ನೂ ಓದಿ: ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ
ಒಟ್ಟಿನಲ್ಲಿ ಮಳೆರಾಯನ ಅವಕೃಪೆ ನಡುವೆ ಈಗ ರೈತರು ಇನ್ನೊಂದು ಸಂಕಷ್ಟವನ್ನ ಅನುಭವಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನ ಪತ್ತೆ ಮಾಡಿ, ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




