ನನ್ನ ಸಿನಿಮಾ ಟೈಟಲ್ ಕದ್ದಿದ್ದಾರೆ: ಜೂ ಎನ್​ಟಿಆರ್ ಹೊಸ ಸಿನಿಮಾ ವಿರುದ್ಧ ಬಂಡ್ಲ ಗಣೇಶ್ ಆಕ್ರೋಶ

Jr NTR Devara: ಜೂ ಎನ್​ಟಿಆರ್ ಹೊಸ ಸಿನಿಮಾದ ಟೈಟಲ್ ಇಂದಷ್ಟೆ ಘೋಷಣೆಯಾಗಿದೆ. ಆಗಲೇ ನಿರ್ಮಾಪಕ ಬಂಡ್ಲ ಗಣೇಶ್ ಸಿನಿಮಾ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನನ್ನ ಟೈಟಲ್ ಕದ್ದಿದ್ದಾರೆ ಎಂದಿದ್ದಾರೆ.

ನನ್ನ ಸಿನಿಮಾ ಟೈಟಲ್ ಕದ್ದಿದ್ದಾರೆ: ಜೂ ಎನ್​ಟಿಆರ್ ಹೊಸ ಸಿನಿಮಾ ವಿರುದ್ಧ ಬಂಡ್ಲ ಗಣೇಶ್ ಆಕ್ರೋಶ
ಬಂಡ್ಲ ಗಣೇಶ್-ದೇವರಾ
Follow us
|

Updated on:May 19, 2023 | 10:36 PM

ಜೂ ಎನ್​ಟಿಆರ್ (Jr NTR) ನಟನೆಯ 30ನೇ ಸಿನಿಮಾದ ಹೆಸರು, ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಇಂದಷ್ಟೆ (ಮೇ 19) ಘೋಷಿಸಲಾಗಿದೆ. ಮೇ 20ರಂದು ಜೂ ಎನ್​ಟಿಆರ್ ಹುಟ್ಟುಹಬ್ಬವಾದ್ದರಿಂದ ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗೆ ಚಿತ್ರತಂಡ ಉಡುಗೊರೆ ನೀಡಿದೆ. ಸಂಜೆ ವೇಳೆಗೆ ಜೂ ಎನ್​ಟಿಆರ್ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಆದರೆ ಆ ಸಿನಿಮಾದ ಟೈಟಲ್ ತಮ್ಮದು, ತಮ್ಮಿಂದ ಟೈಟಲ್ ಕದ್ದಿದ್ದಾರೆ ಎಂದು ತೆಲುಗು ಜನಪ್ರಿಯ ನಟ, ನಿರ್ಮಾಪಕ ಬಂಡ್ಲ ಗಣೇಶ್ (Bandla Ganesh) ಆರೋಪಿಸಿದ್ದಾರೆ.

ಟೈಟಲ್ ಟೀಸರ್ ಬಿಡುಗಡೆ ಮಾಡುವ ಕೆಲವು ಗಂಟೆಗಳ ಮುಂಚೆಯೇ ಟ್ವಿಟ್ಟರ್​ನಲ್ಲಿ ಕೆಲವರು ಸಿನಿಮಾದ ಟೈಟಲ್ ದೇವರಾ ಎಂಬುದನ್ನು ಹಂಚಿಕೊಂಡಿದ್ದರು. ಆ ವೇಳೆಗಾಗಲೆ ಇದುವೇ ಸಿನಿಮಾದ ಟೈಟಲ್ ಎಂಬುದು ಬಹುತೇಕ ಖಾತ್ರಿಯಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಂಡ್ಲ ಗಣೇಶ್, ‘ದೇವರ’ ನನ್ನ ಟೈಟಲ್ ನಾನು ಅದನ್ನು ರಿಜಿಸ್ಟರ್ ಮಾಡಿಸಿದ್ದೆ. ಆದರೆ ಬಹಳ ಕಾಲವಾದ್ದರಿಂದ ಮರೆತು ಹೋಗಿದ್ದೆ, ಈಗ ಅವರು ಟೈಟಲ್ ಅನ್ನು ಕದ್ದಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಜೊತೆಗೆ ಸಿಟ್ಟಿನ ಇಮೋಜಿಯನ್ನೂ ಹಂಚಿಕೊಂಡಿದ್ದರು.

ಬಂಡ್ಲ ಗಣೇಶ್ ಟ್ವೀಟ್​ಗೆ ಹಲವು ಸಿಟ್ಟಿನ ಪ್ರತಿಕ್ರಿಯೆ ನೀಡಿದ್ದರು, ಜೂ ಎನ್​ಟಿಆರ್ ಅಭಿಮಾನಿಗಳು ಬಂಡ್ಲ ಗಣೇಶ್ ವಿರುದ್ಧ ಕಮೆಂಟ್​ಗಳನ್ನು ಮಾಡಿದ್ದರು. ಅದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಬಂಡ್ಲ ಗಣೇಶ್, ”ನನಗೇನು ಬೇಜಾರಿಲ್ಲ ಬಿಡಿ. ಯಂಗ್ ಟೈಗರ್ (ಜೂ ಎನ್​ಟಿಆರ್) ಸಿನಿಮಾ ತಾನೆ, ಅವರೂ ಕೂಡ ನನಗೆ ದೇವರಾ” ಎಂದಿದ್ದರು. ಪೋಸ್ಟರ್ ಬಿಡುಗಡೆ ಆದ ಬಳಿಕ ಅದನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಬಂಡ್ಲ ಗಣೇಶ್ ‘ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾದ ಟೈಟಲ್ ಅನ್ನು ರಿಜಿಸ್ಟರ್ ಮಾಡಿದ ಬಳಿಕ ನಿಯಮದ ಪ್ರಕಾರ ಅದನ್ನು ನವೀಕರಿಸಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ನವೀಕರಿಸಿಕೊಳ್ಳದಿದ್ದರೆ ಆ ಟೈಟಲ್ ನೊಂದಣಿ ಮಾಡಿಸಿದವರ ಹಿಡಿತದಲ್ಲಿ ಇರುವುದಿಲ್ಲ. ಬಂಡ್ಲ ಗಣೇಶ್ ಹೇಳಿಕೊಂಡಿರುವಂತೆ, ಅವರು ಬಹಳ ಸಮಯದ ಹಿಂದೆ ದೇವರ ಸಿನಿಮಾದ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದರಂತೆ. ಆದರೆ ಅದನ್ನು ನವೀಕರಣ ಮಾಡಿಸುವುದನ್ನು ಮರೆತ ಕಾರಣ ಅದು ಅವರ ಕೈತಪ್ಪಿ ಹೋಗಿದೆ.

ದೇವರ ಎಂದರೆ ಕನ್ನಡದಲ್ಲಿ ದೇವರು ಎಂದರ್ಥ. ಜೂ ಎನ್​ಟಿಆರ್ ಹೊಸ ಸಿನಿಮಾಕ್ಕೆ ಇದೇ ಹೆಸರು ಇಡಲಾಗಿದೆ. ಸಮುದ್ರ ತೀರದಲ್ಲಿ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವು ಪೀರಿಯಡ್ ಡ್ರಾಮಾ ಆಗಿದ್ದು ದೈವ-ರಾಕ್ಷಸ ಅಂಶಗಳು ಸಹ ಸಿನಿಮಾದಲ್ಲಿ ಇರುವ ಅನುಮಾನ ಟೀಸರ್ ಹಾಗೂ ಪೋಸ್ಟರ್​ನಿಂದ ವ್ಯಕ್ತವಾಗುತ್ತಿವೆ. ಸಮುದ್ರದ ಬಳಿಕ ಹೆಣಗಳ ರಾಶಿ ಹಾಕಿ, ಕೊರಕು ಕಲ್ಲಿನ ಮೇಲೆ ರಕ್ತ ಮೆತ್ತಿದ ಕತ್ತಿ ಹಿಡಿದು ನಿಂತ ಜೂ ಎನ್​ಟಿಆರ್ ಪೋಸ್ಟರ್​ ಅನ್ನು ಇಂದು (ಮೇ 19) ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾವು ಮುಂದಿನ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ.

ಇನ್ನು ಬಂಡ್ಲ ಗಣೇಶ್, ತೆಲುಗಿನ ಜನಪ್ರಿಯ ನಟ ಹಾಗೂ ನಿರ್ಮಾಪಕರಾಗಿದ್ದಾರೆ. ಪವನ್ ಕಲ್ಯಾಣ್​ಗೆ ಬಹಳ ಆಪ್ತರಾಗಿದ್ದ ಬಂಡ್ಲ ಗಣೇಶ್ ಇತ್ತೀಚೆಗೆ ಪವನ್​ರಿಂದ ದೂರಾದಂತಿದೆ. ಪವನ್ ಕಲ್ಯಾಣ್ ನಟಿಸಿರುವ ತೀನ್ ಮಾರ್ ಹಾಗೂ ಗಬ್ಬರ್ ಸಿಂಗ್ ಸಿನಿಮಾಗಳನ್ನು ಬಂಡ್ಲ ನಿರ್ಮಿಸಿದ್ದಾರೆ. ಜೂ ಎನ್​ಟಿಆರ್ ನಟಿಸಿರುವ ಸೂಪರ್ ಹಿಟ್ ಸಿನಿಮಾ ಟೆಂಪರ್ ಹಾಗೂ ಬಾದ್​ಶಾ ಸಿನಿಮಾಗಳನ್ನು ಬಂಡ್ಲ ನಿರ್ಮಿಸಿದ್ದಾರೆ. 2015 ರ ಟೆಂಪರ್ ಸಿನಿಮಾ ಬಳಿಕ ಯಾವುದೇ ಸಿನಿಮಾವನ್ನು ಬಂಡ್ಲ ನಿರ್ಮಿಸಿಲ್ಲ ಆದರೆ ಹಾಸ್ಯನಟ, ಪೋಷಕ ನಟನಾಗಿ ನಟನೆ ಮುಂದುವರೆಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Fri, 19 May 23