ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ

|

Updated on: May 28, 2023 | 8:22 PM

Jr NTR: ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ ಜನ್ಮ ಶತಮಾನೋತ್ಸವ ಇಂದು (ಮೇ 28) ತಾತನ ಸಮಾಧಿಗೆ ಜೂ ಎನ್​ಟಿಆರ್ ಭೇಟಿ ನೀಡಿದಾಗ ಅವರ ಅಭಿಮಾನಿಗಳು ಹಾಕಿರುವ ಕೆಲವು ಘೋಷಣೆ ಇದೀಗ ರಾಜಕೀಯ ಚರ್ಚೆಯನ್ನು ಆರಂಭಿಸಿವೆ.

ಎನ್​ಟಿಆರ್ ಪುಣ್ಯಭೂಮಿಗೆ ನಮಿಸಿದ ಜೂ ಎನ್​ಟಿಆರ್, ರಾಜಕೀಯದ ಸುಳಿವು ಕೊಟ್ಟ ಅಭಿಮಾನಿಗಳ ಘೋಷಣೆ
ಜೂ ಎನ್​ಟಿಆರ್
Follow us on

ಅವಿಭಜಿತ ಆಂಧ್ರ ಪ್ರದೇಶ (Andhra Pradesh) ಮಾಜಿ ಸಿಎಂ, ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ (NTR) ಅವರ ನೂರನೇ ಜಯಂತಿ ಇಂದು (ಮೇ 28). ಎನ್​ಟಿಆರ್ ಜನ್ಮಶತಾಬ್ಧಿಯನ್ನು ನಂದಮೂರಿ ಕುಟುಂಬದವರು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಎನ್​ಟಿಆರ್ ಪುತ್ರ ಬಾಲಕೃಷ್ಣ ಹಾಗೂ ಅಳಿಯ ಚಂದ್ರಬಾಬು ನಾಯ್ಡು ಒಟ್ಟಾಗಿ ಸೇರಿ ಈಗಾಗಲೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮಗಳಿಗೆ ಜೂ ಎನ್​ಟಿಆರ್ (Jr NTR) ಅನ್ನು ಇವರು ಆಹ್ವಾನಿಸಿರಲಿಲ್ಲ. ಆದರೆ ಇಂದು ಎನ್​ಟಿಆರ್ ಹುಟ್ಟುಹಬ್ಬದಂದು ಅವರ ಪುಣ್ಯಭೂಮಿಗೆ ಏಕಾಂಗಿಯಾಗಿ ಭೇಟಿ ನೀಡಿದ್ದ ಜೂ ಎನ್​ಟಿಆರ್ ತಾತನಿಗೆ ನಮಿಸಿದರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಕಿದ ಘೋಷಣೆ ರಾಜಕೀಯದ ಸುಳಿವೊಂದನ್ನು ನೀಡಿವೆ.

ಹೈದರಾಬಾದ್​ನ ಖೈತರಾಬಾದ್​ನಲ್ಲಿನ ಎನ್​ಟಿಆರ್ ಸಮಾಧಿಗೆ ಜೂ ಎನ್​ಟಿಆರ್ ಇಂದು ಬೆಳಿಗ್ಗೆ ಭೇಟಿ ನೀಡಿದರು. ಈ ಸಮಯ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೂಕು ನುಗ್ಗಲಿನ ನಡುವೆ ಸಮಾಧಿ ಬಳಿ ಬಂದ ಜೂ ಎನ್​ಟಿಆರ ಪುಷ್ಪಗಳನ್ನು ಹಾಕಿ ತಲೆಬಾಗಿ ನಮಿಸಿದರು. ಈ ಸಮಯ ಜೂ ಎನ್​ಟಿಆರ್​ಗೆ ಕೆಲವರು ಹೂಗುಚ್ಛವನ್ನು ಕೊಡಲು ಬಂದರೆ ಅವನ್ನು ಸಿಟ್ಟಿಗೆ ಬದಿಗೆ ತಳ್ಳಿದರು ಜೂ ಎನ್​ಟಿಆರ್.

ಜೂ ಎನ್​ಟಿಆರ್, ಎನ್​ಟಿಆರ್ ಅವರ ಸಮಾಧಿ ಸ್ಥಳಕ್ಕೆ ಬಂದಾಗ ಅಭಿಮಾನಿಗಳು ಕೂಗಿದ ಘೋಷಣೆ ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಜೂ ಎನ್​ಟಿಆರ್ ಬಂದ ಸಮಯ ಸಿಎಂ ಎನ್​ಟಿಆರ್ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು. ಜೂ ಎನ್​ಟಿಆರ್, ಸಮಾಧಿ ಸ್ಥಳದಿಂದ ಹೋಗುವವರೆಗೆ ಸಿಎಂ ಎನ್​ಟಿಆರ್ ಘೋಷಣೆಗಳು ಮೊಳಗಿದವು. ಘೋಷಣೆ ಹಾಕುತ್ತಿದ್ದವರನ್ನು ಸುಮ್ಮನಿರುವಂತೆ ಸಹ ಜೂ ಎನ್​ಟಿಆರ್ ಹೇಳಲಿಲ್ಲ. ಈ ಘಟನೆ ಇದೀಗ ತೆಲುಗು ರಾಜ್ಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಂದಮೂರಿ ಕುಟುಂಬದಿಂದ ಟಿಡಿಪಿ ಪಕ್ಷದ ರಾಜಕೀಯದಿಂದ ಜೂ ಎನ್​ಟಿಆರ್ ಅನ್ನು ಚಂದ್ರಬಾಬು ನಾಯ್ಡು ಹಾಗೂ ಬಾಲಕೃಷ್ಣ ದೂರ ಇಟ್ಟಿದ್ದಾರೆ. ಟಿಡಿಪಿ ಪಕ್ಷದಲ್ಲಿ ಚಂದ್ರಬಾಬು ನಾಯ್ಡು ಪುತ್ರನನ್ನು ಬೆಳೆಸುವ ಸಲುವಾಗಿ ಜೂ ಎನ್​ಟಿಆರ್ ಅನ್ನು ದೂರ ಇಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು

ಟಿಡಿಪಿ ಪಕ್ಷದಿಂದ ತಮ್ಮನ್ನು ದೂರ ಇರಿಸಿರುವ ಬಗ್ಗೆ ಜೂ ಎನ್​ಟಿಆರ್ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅಭಿಮಾನಿಗಳು ಸಿಎಂ ಎನ್​ಟಿಆರ್ ಘೋಷಣೆಗಳಿಂದ ಜೂ ಎನ್​ಟಿಆರ್ ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ಎಂಬ ಅನುಮಾನ ಮೂಡಿದೆ. ಅವರ ತಾತ ಸೀನಿಯರ್ ಎನ್​ಟಿಆರ್ ಸಹ ಮೊದಲ ಬಾರಿಗೆ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದಾಗ ಕಾಂಗ್ರೆಸ್ ವಿರುದ್ಧ ಸ್ವಾಭಿಮಾನ ಕೆರಳಿಸುವ ಕಾರ್ಯ ಮಾಡಿದ್ದರು. ಈಗ ಜೂ ಎನ್​ಟಿಆರ್ ಸಹ ಸ್ವಾಭಿಮಾನಕ್ಕೆ ಕಟ್ಟುಬಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆಯೇ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ