‘ಜವಾನ್’ ಅಬ್ಬರಕ್ಕೆ ಹೆದರಿದ ಕಂಗನಾ ರಣಾವತ್? ಮುಂದಕ್ಕೆ ಹೋಯ್ತು ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ
ತಾಂತ್ರಿಕ ಸಮಸ್ಯೆಗಳ ಕಾರಣದಿಂದ ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ನಿಜವಾದ ಕಾರಣ ಬೇರೆ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಸೆ.19ರ ಬದಲು ಸೆ.28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಕಂಗನಾ ರಣಾವತ್, ರಾಘವ ಲಾರೆನ್ಸ್ ನಟಿಸಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ಹಲವು ಬಗೆಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಅವರು ‘ಚಂದ್ರಮುಖಿ 2’ (Chandramukhi 2) ಸಿನಿಮಾದಲ್ಲೂ ಡಿಫರೆಂಟ್ ಪಾತ್ರ ಮಾಡಿದ್ದಾರೆ. ಆ ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 19ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಈಗ ರಿಲೀಸ್ ಡೇಟ್ ಮುಂದೂಡಲಾಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ‘ಚಂದ್ರಮುಖಿ 2’ ಚಿತ್ರತಂಡ ಹೇಳಿಕೊಂಡಿದೆ. ಆದರೆ ನಿಜವಾದ ಕಾರಣ ಬೇರೆ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ಅಬ್ಬರಿಸುತ್ತಿರುವ ಕಾರಣದಿಂದ ‘ಚಂದ್ರಮುಖಿ 2’ ಪೋಸ್ಟ್ಪೋನ್ ಆಗಿರಬಹುದು ಎಂಬುದು ಕೆಲವರ ಗುಮಾನಿ. ಸೆಪ್ಟೆಂಬರ್ 19ರ ಬದಲು ಸೆಪ್ಟೆಂಬರ್ 28ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.
ಎರಡು ದೊಡ್ಡ ದೊಡ್ಡ ಸಿನಿಮಾಗಳು ಏಕಕಾಲಕ್ಕೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದರೆ ಯಾವುದಾದೊಂದು ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಈಗ ‘ಜವಾನ್’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಸೆಪ್ಟೆಂಬರ್ 7ರಂದು ಬಿಡುಗಡೆ ಆದ ಈ ಸಿನಿಮಾದ ಅಬ್ಬರ ಇನ್ನೂ ಹಲವು ದಿನಗಳ ಕಾಲ ಮುಂದುವರಿಯಲಿದೆ. ಹಾಗಾಗಿ ಈ ಪೈಪೋಟಿಯನ್ನು ತಪ್ಪಿಸುವ ಸಲುವಾಗಿಯೇ ಕಂಗನಾ ರಣಾವತ್ ಅವರ ‘ಚಂದ್ರಮುಖಿ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಕೆಲವು ದಿನಗಳ ಮಟ್ಟಿಗೆ ಮುಂದಕ್ಕೆ ಹಾಕಲಾಗಿದೆ ಎಂದು ಊಹಿಸಲಾಗಿದೆ.
View this post on Instagram
ಸುಭಾಷ್ ಕರಣ್ ಅವರು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ‘ಚಂದ್ರಮುಖಿ 2’ ಚಿತ್ರ ನಿರ್ಮಿಸಿದ್ದಾರೆ. ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಈ ಸಿನಿಮಾಗಿದೆ. ಕಂಗನಾ ರಣಾವತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಮುಂತಾದವರು ನಟಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಪಿ. ವಾಸು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ ವಿಶ್ವಾದ್ಯಂತ 129 ಕೋಟಿ ರೂಪಾಯಿ ಬಾಚಿಕೊಂಡ ‘ಜವಾನ್’ ಸಿನಿಮಾ
‘ಜವಾನ್’ ಸಿನಿಮಾದ ಹವಾ ಜೋರಾಗಿದೆ. ಮೊದಲ ದಿನವೇ ವಿಶ್ವಾದ್ಯಂತ ಈ ಸಿನಿಮಾ 129.6 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರವನ್ನು ಮೆಚ್ಚಿಕೊಂಡು ಕಂಗನಾ ರಣಾವತ್ ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರೂ ಕೂಡ, ಮತ್ತೊಮ್ಮೆ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕು ಎಂದು ಕನಸು ಕಾಣುವ ಎಲ್ಲ ಕಲಾವಿದರಿಗೆ ಶಾರುಖ್ ಖಾನ್ ಅವರು ಮಾದರಿ. ಶಾರುಖ್ ಖಾನ್ ಸಿನಿಮಾ ದೇವರು. ಕಠಿಣ ಪರಿಶ್ರಮ ಹಾಗೂ ನಮ್ರತೆಯ ಕಾರಣಕ್ಕೆ ಕಿಂಗ್ ಖಾನ್ಗೆ ನಮನಗಳು’ ಎಂದು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಕಂಗನಾ ಬರೆದುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.